Wednesday, January 4, 2012

ಸೌಂಡ್ ಫ್ರೂಫ್ ರೂಮು

 

ಮನೆ ಮುಂದೆ ಬಿದ್ದಿರುವ ಸಗಣಿ ಮೆಟ್ಟಿದ ಚಪ್ಪಲಿ
ಒಳಗೆ ಕಾಲಿಡುತ್ತಲೇ ಕಾಣುವ ಎಂದೂ ತೊಳೆಯದ ಕಾಲ್ವರೆಸು
ಎಲ್ಲೆಂದರಲ್ಲಿ ಬಿದ್ದಿರುವ ಅರ್ಧ ಓದಿದ ಪುಸ್ತಕ
ತೊಳೆಯದೇ ಬಿಟ್ಟ ಹೆಂಡದ ಗ್ಲಾಸು....
ಬೆಡ್ ಇಲ್ಲದ ರೂಮು, ತಗಣಿಯ ರಕ್ತದ ಕಲೆ ಎಲ್ಲ ಅಸ್ತವ್ಯಸ್ತ.
ಮನಸ್ಸು ಮಾತ್ರ ಏನೂ ಇಲ್ಲದ ನಿರಾಳ ನಿರ್ವಾತ
ತುಂಬಿದರೂ ಸೈ ತುಂಬದಿದ್ದರೂ ಸೈ.
ಮನಸ್ಸಿನೊಳಗೆ ಬಿಟ್ಟುಕೊಳ್ಳದ ವಿಕಾರಗಳಿಗೆ ದೇಹ ತಡೆಗೋಡೆ
ತಾಕಿ ದೂರ ಸಿಡಿಯುವ ಪಿಂಗ್‌ಪಾಂಗ್ ಬಾಲು
ಅಲ್ಯಾರದೋ ಅಳು, ಇಲ್ಯಾರದೋ ನೋವು
ಸತ್ತವರು, ಹುಟ್ಟುವವರು, ಹೆಣಗುವವರು
ಎಲ್ಲ ನೋಡುವ ಕಣ್ಣು ಹೊರಹೊರಗೇ ಎಲ್ಲವನ್ನೂ
ತೊಳೆದು ಕಳೆದು ಒಳಬಿಡುವ ಕೊಳೆ ನೀರ ಗಾಳಿಸುವ ಫಿಲ್ಟರ್
ಬದುಕು, ಬದುಕಲು ದೇಹ ಹುಚ್ಚಾಗಬೇಕು
ಮನಸ್ಸು ಹೊರಗಿನ ಎಲ್ಲ ಗದ್ದಲ ಮರೆತ
ಸೌಂಡ್ ಫ್ರೂಫ್ ರೂಮಿನಂತಿರಬೇಕು.

Thursday, July 14, 2011

ಬದುಕು

ಬದುಕು
ಬದಲಾಗುವ ಯಾರದೋ
ಕೈಯೊಳಗಿನ ಟಿವಿ ರಿಮೋಟ್ !

ಮನುಷ್ಯ
ಒತ್ತಿದ ಬಟನ್‌ಗೆ ಬದಲಾಗುವ
ಬಾಯಿ ಬಡುಕ ಚಾನೆಲ್‌ !

Friday, June 24, 2011

ಕಾಲಿ ಕಸದ ಡಬ್ಬಿ

ಕಾಲಿ ಕಸದ ಡಬ್ಬಿ ಕಾಲ್ಗೆಳಗೆ ಇದೆ
ಯಾವ ಕಾಗದವೂ ಅದರಲ್ಲಿ ಮುದುರಿ ಬಿದ್ದಿಲ್ಲ.
ಏನೂ ಬರೆಯದೇ ಎಲ್ಲ ಅನುಭವಿಸುತ್ತಿದ್ದೇನೆ.

ಕಾಲ್ತಾಕಿದಾಗೊಮ್ಮೆ ಕಣಕಣ ಶಬ್ಧ ಮಾಡುತ್ತದೆ ಅದು
ನನ್ನೊಳಗೆ ನಿನ್ನ ಹಸಿಹಸಿ ಭಾವನೆಗಳು ಮುದುರಿಬಿದ್ದಿಲ್ಲ !
ನಿನ್ನ ಅರೆಬೆಂದ ಭಾವನೆಗಳಿಗಾಗಿಯೇ ಹುಟ್ಟಿದ್ದು ನಾನು
ಹುಟ್ಟಲು ಬಿಡು ನಿನ್ನೊಳಗೆ ಭಾವನೆಗಳು
ಅದ್ಭುತ ಕಾವ್ಯವಾಗದಿದ್ದರೂ ನನ್ನೊಡಲಾದರೂ ತುಂಬುತ್ತದೆ.

ನಾನು ಭಾವನೆಗಳನ್ನು ಕೆದಕುತ್ತೇನೆ
ಬಿಳಿಹಾಳೆ ಕರಿ ಪೆನ್ನು ಎತ್ತಿಟ್ಟುಕೊಂಡು
ಅತ್ತಿತ್ತ ಓಡಾಡಿ ಕುಳಿತು, ಎದ್ದು, ಮಲಗಿ, ಉಹೂಂ
ಎಲ್ಲ ನುಂಗಿಕೊಳ್ಳುವ ಉರಿವ ಸೂರ್ಯನಲ್ಲಿಯ
ಕಪ್ಪುಚುಕ್ಕೆಯಾಗಿದೆ ಮನಸು.

ಕಾಲ್ಗೆಳಗಿನ ಕಸದ ಡಬ್ಬಿ ಹಸಿವು ತಾಳದೆ ಕೂಗುತ್ತದೆ
ಎಸೆದುಬಿಡು ಅರೆಬೆಂದ ಭಾವನೆಗಳ ನನ್ನೊಳಗೆ...!
ನಾನು ಮತ್ತೆ ಪೆನ್ನು ಕಾಗದ ಕೈಗೆತ್ತಿಕೊಂಡು ಕುಳಿತುಕೊಳ್ಳುತ್ತೇನೆ.
ಸರಿಯಲ್ಲ ಬಿಡು ಬರೆಯಲಾಗುತ್ತಿಲ್ಲ ಕಾಗದ ಹರಿಯಲಾಗುತ್ತಿಲ್ಲ.

ಹೊರಬರದ ಭಾವನೆಯ ಹೊರೆ ಹೊತ್ತವನು ನಾನು
ಬಂದೆ ಇರು ನಾನೇ ಮುದುರಿ ಕುಳಿತುಕೊಳ್ಳುತ್ತೇನೆ ಎಂದು ಕೂಗಿದೆ
ನನ್ನ ತಿನ್ನುವ ಖುಷಿಯಲಿ ಕೇಕೆ ಹಾಕಿ ನಗುತಿತ್ತು ಕಾಲ್ಕೆಳಗಿನ ಕಸದ ಡಬ್ಬಿ.

Saturday, May 28, 2011

`ಓಂ ಭೂರ್ ಭೂವಸ್ವಃ' (ಕತೆ)


ರಾಮಾ ಹೆಗ್ಡ್ರು ಸತ್ತೋದ್ರಂತೆ!

ಬಾಗಿಲು ತೆರೆಯುತ್ತಿದ್ದಂತೆ ರಾಮಾ ಹೆಗ್ಡ್ರು ಮನೆ ಆಳು ಗುತ್ಯಾ ಹೇಳಿದ ಮಾತು ಸುಶೀಲಳನ್ನು ದು:ಖಕ್ಕೀಡುಮಾಡಲಿಲ್ಲ. ಇದು ನಿರೀಕ್ಷಿತ ಸುದ್ದಿಯಂತೆ ತಣ್ಣಗೆ ಪ್ರತಿಕ್ರಿಯಿಸಿದ ಆಕೆ ’ಬಂದೆ ನಡಿ’ ಎಂದು ಅವನನ್ನು ಕಳುಹಿಸಿ ಒಳಹೋದಳು.

ರಾಮಾ ಹೆಗ್ಡೆರು ಸತ್ತೋದ್ರಾ? ಅದರೆಲ್ಲೇನು ವಿಶೇಷ! ಎಲ್ಲ ಬಯಸಿದ್ದು ಅದನ್ನೇ ಅಲ್ಲವೇ? ನಾನೂ ಅದನ್ನೇ ಬಯಸಿದ್ದೆನೆ? ಸುಶೀಲ ತನ್ನೊಳಗೆ ಕೇಳಿಕೊಂಡಳು. ನೆನ್ನೆ ರಾತ್ರಿಯೆಲ್ಲಾ ಹೆಗ್ಡ್ರ ಮನೆಯಿಂದ ಹೊರಟ ಯಾತನೆಯ ನರಳಿಕೆಯ ಕೂಗು ಕೇಳಿ ಗವ್ವೆನ್ನುವ ಕತ್ತಲ ಕಾನು ಸೀಳಿಕೊಂಡು ಕೇಳಿ ಬರುತ್ತಿತ್ತು. ಕೂಗಳತೆಯ ದೂರವಿದ್ದ ಮುರುಕು ಗುಡಿಸಲಿನಲ್ಲಿ ಮಲಗಿದ್ದ ಸುಶೀಲೆಗೆ ಈ ಕೂಗಿನಿಂದ ಕರುಳು ಕಿವುಚಿದ ಅನುಭವವಾಗುತ್ತಿತ್ತು. ಕಡೆಗೂ ತಡೆಯಲಾಗದೆ ತಲೆದಿಂಬಿಗಿರಿಸಿದ್ದ ಚಿಮಣಿಯನ್ನು ಹಚ್ಚಿಕೊಂಡು ನಿಧಾನಕ್ಕೆ ಕತ್ತಲನ್ನು ಎದುರಿಸುತ್ತ ಗಾಳಿಗಡ್ಡವಾಗಿ ಕೈ ಹಿಡಿದು ತೋಟದಂಚು ದಾಟಿ ಹೆಗ್ಡೆರ ಮನೆ ಎದುರು ಬಂದು ನಿಂತಳು. ರಾಮಾ ಹೆಗ್ಡೆರು ಹಾಗೇ ಕೂಗುತ್ತಲೇ ಇದ್ದರು. ಈಕೆ ನಿಧಾನವಾಗಿ ಅವರ ಮಗನ ಹೆಸರು ಹಿಡಿದು ಕೂಗಿದಳು.

ನಾಣಿ, ನಾಣೀ ಎಂದು ಕೂಗಿದವಳು ಯಾವುದೇ ಉತ್ತರ ಬರದಿದ್ದಾಗ ಸುಶಿಲೆ ರಾಮಾ ಹೆಗ್ಡೆರ ಹೆಂಡತಿ ಪಾರ್ವತಿಯನ್ನು ಕೂಗಿದಳು. ಅವ್ಯಾಹತವಾಗಿ ಮುಂದುವರೆದಿದ್ದ ರಾಮಾ ಹೆಗ್ಡೆಯ ನರಳಿಕೆಯ ನಡುವೆ ಅವಳು ಕೂಗಿದ್ದು ಒಳಗಿದ್ದವರಿಗೆ ಕೇಳಿತೋ ಇಲ್ಲವೋ? ಎಂದು ಯೋಚಿಸಿ ಮತ್ತೇ ಕೂಗಿದಳು. ಕತ್ತಲಲ್ಲಿ ರಾಮಾ ಹೆಗ್ಡೆರ ನರಳಿಕೆ ಹಾಗೂ ಸುಶೀಲೆಯ ಕೂಗು ಕತ್ತಲ ರಾತ್ರಿಯಲ್ಲಿ ಅಲೆಅಲೆಯಾಗಿ ಹಬ್ಬಿ ಮೌನವನ್ನು ತಬ್ಬಿಬ್ಬುಗೊಳಿಸಿದಂತಿತ್ತು.

ರಾಮಾ ಹೆಗ್ಡೆ ಸುಶೀಲಾಳ ಧ್ವನಿ ಕೇಳಿದವರೇ ’ಸುಶೀಲಾ ನಾ ಸಾಯ್ತೆನೆ.. ನೋವು ತಡೆಯೋಕೆ ಆಗ್ತಾ ಇಲ್ಲ’ ಎಂದು ಆರ್ತರಾಗಿ ಕೂಗಿಕೊಳ್ಳತೊಡಗಿದರು. ಸುಶೀಲೆ ಹೊರಗಿನಿಂದಲೇ ಏನಾಗಲ್ಲ ಹೆದರಬೇಡಿ. ಮಾತ್ರೆನೆಲ್ಲಾ ತೆಗೆದುಕೊಂಡಿದ್ದಿರೋ? ನಡೆಯೋಕೆ ಆದ್ರೆ ಬಂದು ಬಾಗಿಲು ತೆಗೆಯಿರಿ. ನಾನು ನಿಮ್ಮ ಗಾಯಕ್ಕೆ ಮಲಮ್ ಆದ್ರೂ ಹಚ್ಚಿ ಹೋಗ್ತೇನೆ. ನೋವು ಸ್ವಲ್ಪ ಕಡಿಮೆ ಆದ್ರೂ ಆಗಬಹುದು ಎಂದಳು. ನರಳುತ್ತಲೇ ಬಂದ ಹೆಗ್ಡೆ ಹೆಣಬಾರದ ದೆವ್ವದಂತ ಬಾಗಿಲು ತೆರೆದು ಅಲ್ಲೇ ಕುಸಿದು ಕುಳಿತರು. ಒಳಗೆ ಬಂದ ಸುಶೀಲೆ ಅವರ ಕೈ ರಟ್ಟೆ ಹಿಡಿದು ಎಬ್ಬಿಸಲು ಪ್ರಯತ್ನಿಸಿದಳು. ಅವಳು ಕೈ ನೀಡಿದ್ದೇ ಅವಳನ್ನು ಅಪ್ಪಿ ಹಿಡಿದ ಹೆಗ್ಡೆ ಸುಶೀಲಾ ನನ್ನ ಈ ನರಕದಿಂದ ಪಾರು ಮಾಡು ಎಂದು ಆರ್ತರಾಗಿ ಅಳತೊಡಗಿದರು.

ಏನು ಮಾಡಲು ತೋಚದ ಅವಳು ನಾಣಿ ಎಂದು ಕೂಗಿದಳು. ಒಳಗಿಂದ ಯಾವ ಸದ್ದೂ ಬರಲಿಲ್ಲ. ಹೆಗ್ಡೆಯ ಹೆಗಲು ಹಿಡಿದು ಜಂಬು ವಾಸನೆ ಹೊಡೆಯುತ್ತಿದ್ದ ಹಾಸಿಗೆಯ ಮೇಲೆ ಒರಗಿಸಿದಳು. ತಾನು ಬೆಳಿಗ್ಗೆ ಇಟ್ಟು ಹೋಗಿದ್ದ ಮಲಮ್ ತೆಗೆದು ಅದನ್ನು ಹೆಗ್ಡೆಯ ಮುಖಕ್ಕೆ ನಿಧಾನವಾಗಿ ಸವರತೊಡಗಿದಳು. ನೋವಿನ ನಡುವೆ ಹೆಗ್ಡೆಗೆ ಏನೋ ಹಿತವಾದ ಅನುಭವ ಆದಂತಾಗಿ ಸುಮ್ಮನಾದ. ದೀಪದ ಮಂದ ಬೆಳಕಿನಲ್ಲಿಯ ಕತ್ತಲೆಯಲ್ಲಿ ಈಗಷ್ಟೇ ನಿಂತ ನರಳಿಕೆ ಸುಶೀಲೆಗೆ ಯಾಕೋ ಸಾವಿನ ಭಯ ಹುಟ್ಟಿಸಿತ್ತು. ಹೆಗ್ಡೆಯ ಸಾವಿನ ಭಯ ನನ್ನ ಮುತ್ತಿಕೊಂಡಿದ್ದು ಹೇಗೆ ಎಂದು ಸುಶೀಲೆ ಕ್ಷಣ ಯೋಚಿಸಿದಳು. ಮಲಮ್ ಹಚ್ಚಿ ಮುಗಿದಾಗ ತನ್ನ ಕಾಲ ಮೇಲೇ ಮಲಗಲು ಅನುವಾದ ಹೆಗ್ಡೆಯನ್ನು ಹಾಗೆ ಮೆತ್ತಗೆ ಪ್ರತಿರೋಧಿಸದೆ ಮಲಗಿಸಿಕೊಂಡಳು. ತನಗಂತೂ ತಾಯಿ ಕಾಲ ಮೇಲೆ ಇರಲೀ ತಂದೆಯ ಕಾಲ ಮೇಲೂ ಹಿತವಾಗಿ ಕ್ಷಣ ಹೀಗೆ ಮಲಗಿದ ಅನುಭವವಿಲ್ಲ. ಅದರಲ್ಲಿರುವ ಖುಷಿ ಎಂತದ್ದು ಒಮ್ಮೆ ಅನುಭವಿಸಬೇಕು ಎಂದುಕೊಂಡಳು. ಕಣ್ಣ ಮುಂದೆ ಮಸುಕು ಮುಖಗಳು ಬಂದು ಮರೆಯಾದವು. ಹೆಗ್ಡೆ ಕನಸಿನಲೆಂಬಂತೆ ಗಾಯತ್ರಿ ಮಂತ್ರವನ್ನು ಹೇಳತೊಡಗಿದ. ಕತ್ತಲ ರಾತ್ರಿ ಗಾಯತ್ತಿ ಮಂತ್ರ ಸುಶೀಲೆಗೆ ಧೈರ್ಯ ತುಂಬಿತ್ತು. ಅವನು ಗುನುಗಿದ್ದನ್ನೇ ತಾನೂ ಗುನುಗುತ್ತ ಹೆಗ್ಡೆಯ ತಲೆಯನ್ನು ನಿಧಾನಕ್ಕೆ ಹಾಸಿಗೆಗೆ ಒರಗಿಸಿ ದೀಪ ನಂದಿಸಿ ಹೊರಬಂದಳು.

ಯಾವತ್ತೂ ಕೂಗದಿದ್ದ ಟಿಟ್ಟಿಭ ಆವತ್ತೂ ಟ್ಟಿಟ್ಟಿ ಟ್ಟೀ ಟ್ರೀಂಂಂ ಎಂದು ಕೂಗುತ್ತಾ ಹಾರಿ ಹೋಯ್ತು. ಸುಶೀಲೆ ಗಾಯತ್ರಿ ಮಂತ್ರವನ್ನು ಜೋರಾಗೇ ಹೇಳಿಕೊಂಡಳು. ಮತ್ತೆ ಧ್ವನಿ ತಗ್ಗಿಸಿ ಹಾಡಿಕೊಂಡಳು. ಹೆಂಗಸರು ಹೇಳಬಾರದಂತೆ ಎಂದು ಯಾವತ್ತೋ ಹೆಗ್ಡೆ ಹೇಳಿದ ನೆನಪು ಅವಳಿಗಾಯ್ತು. ಮನೆಗೆ ಬಂದು ಸುಮ್ಮನೆ ತನ್ನ ಸೋಗೆ ಗುಡಿಸಲ ಕಂಡಿಯಲ್ಲಿ ಕಾಣುವ ನಕ್ಷತ್ರ ನೋಡುತ್ತ ಮಲಗಿದ್ದಳು. ಬೆಳಿಗ್ಗೆ ಗುತ್ಯ ಕರೆದಾಗಲೇ ಎಚ್ಚರಾಗಿದ್ದು.

ಕೊನೆ ಸಲ ನೋಡಿ ಬಂದು ಬಿಡೋಣ. ದೊಡ್ಡಕೆ ಇಟ್ಟ ಕುಂಕುಮದ ಹುಡಿ ಯಾಕೋ ಉದುರುತ್ತಿದೆ. ಬೇಡ ಕುಂಕುಮವನ್ನೆಲ್ಲ ಒರೆಸಿ ತೆಗೆದು ಬಿಡೋಣ. ಯಾಕೋ ಕಿರಿಕಿರಿ. ಎಲ್ಲಿಟ್ಟಿದ್ನೋ ಬೀಗ ಸಿಗುತ್ತಿಲ್ಲ. ಬೇಡ ಹಾಗೆಯೇ ಬಾಗಿಲೆಳೆದುಕೊಂಡು ಹೋಗಿ ಬಿಡೋಣ. ಈಗ್ಯಾರು ಬರೋರು ಇದ್ದಾರೆ. ಬರೋರು ಒಬ್ಬರು ಇದ್ದರು ಅವರು ಬರದೇ ಈಗ ಸುಮಾರು ತಿಂಗಳುಗಳೇ ಕಳೆದವೇನೋ! ಈಗ ಹೆಣವಾಗಿ ಬಿದ್ದಿದ್ದಾರಂತೆ. ಮನೆಯೆದುರಿನ ಮಲ್ಲಿಗೆ ಬಳ್ಳಿಯಲ್ಲಿ ಇವತ್ತು ಹೂವು ಅರಳಲೇ ಇಲ್ಲಾ, ಏನಾಗಿದೆಯೋ ನೀರು ಸರ‍್ಯಾಗಿ ಹಾಕಿಲ್ಲವೇನೋ? ಅಲ್ಲಿಂದ ಬಂದವಳು ಒಂದು ಕೊಡ ನೀರು ಸುರಿಯಬೇಕು. ಇಲ್ಲಾ ಅದರ ಕೆಳಗೆ ನಾನು ಸ್ನಾನ ಮಾಡಬೇಕು. ತನ್ನೊಳಗೆ ಮಾತನಾಡುತ್ತ ಪಕ್ಕದ ತೋಟವನ್ನು ಹಾಯ್ದು ರಾಮಾ ಹೆಗ್ಡ್ರ ಮನೆ ದಣಪೆಯ ಎದುರು ಬರುತ್ತಲೇ ಅಲ್ಲಿದ್ದ ಗೊಚ್ಚಿನಿಂದ ಸುಶೀಲಾ ಜಾರಿ ಬೀಳುವಂತಾದಳು. ಇಷ್ಟು ದಿನ ಅದೇ ದಣಪೆಯಲ್ಲಿಯ ಕಾಲು ಜಾರುವ ಗೊಚ್ಚನ್ನು ಮೆಟ್ಟಿಯೇ ಅಲ್ಲವೇ ಮೊದಮೊದಲು ಹೆಗ್ಡ್ರು ಮನೆ ಹೊರ ಜಗುಲಿಗೆ, ನಂತರ ಅವರ ಮನೆಯ ಒಳ ಕೋಣೆಗೆ, ಹೆಗ್ಡ್ರ ಹೆಂಡತಿ ಇಲ್ಲದಾಗ ಅಡಿಗೆ ಮನೆಗೆ, ಅವರ‍್ಯಾರಿಗೂ ಗೊತ್ತಿಲ್ಲದೆ ದೇವರ ಕೋಣೆಗೆ ಹೋಗಿದ್ದೆನಲ್ಲಾ, ಈಗ ಜಾರುತ್ತಿದೆ ಥೂ ಎಂದು ಉಗಿದು ಸುಧಾರಿಸಿಕೊಂಡು ನಿಂತಳು. ಮನೆಯೆದುರು ಸಾವನ್ನು ಸೂಚಿಸುತ್ತ ಉರಿಯುತ್ತಿದ್ದ ಮರದ ಬೊಡ್ಡೆಯ ರಾಶಿಯಿಂದ ಜಾರಿ ಕಿಡಿಯೆಬ್ಬಿಸುತ್ತ ಬೊಡ್ಡೆಯೊಂದು ಕೆಳಗೆ ಸರಿದು ಜಾರಿಕೊಂಡಿತು.

ಮನೆಯ ಎದುರು ಬಂದು ನಿಂತವಳಿಗೆ ಯಾರೂ ಕಂಡು ಬರಲಿಲ್ಲ. ಹೆಗ್ಡೆರು ಯಾವಾಗಲೂ ಕುಳಿತಿರುತ್ತಿದ್ದ ಮೂಲೆಯನ್ನು ಗಮನಿಸಿದಳು. ಅಲ್ಲಿ ಅವರು ಕುಳಿತಂತೆ ಕಾಣಲಿಲ್ಲ. ಮುಂದೆ ಗಮನಿಸಿದವಳಿಗೆ ಮುದುರಿ ಬಿದ್ದಂತ ಬೆಡ್‌ಶೀಟ್ ರಾಶಿಯಿಂದ ನೊಣಗಳು ಜೊಂಯ್‌ನೆ ಹಾರುತ್ತಿರುವುದು ಕಾಣಿಸಿತು. ಮನೆಯಲ್ಲಿ ಸಾವು ದು:ಖವನ್ನು ಬಿಟ್ಟು ಹೋಗಿರಲಿಲ್ಲ. ಯಾವತ್ತೋ ಸತ್ತು ಹೋದಂತೆ, ಒಂದೇ ಜಾಗದಲ್ಲಿ ಮಲಗಿಯೋ ಅಥವಾ ಅಲ್ಲೇ ಮೂಲೆಗೆ ಒರಗಿಯೋ ಕುಳಿತಿರುತ್ತಿದ್ದ ದೇಹವನ್ನು ಇವತ್ತು ಹೊರಗೆ ಹಾಕಿ ಸುಟ್ಟರಾಯ್ತು. ಒಬ್ಬನೇ ಮಗ ನಾಣಿಗೆ ಈ ನರಕಯಾತನೆಯಿಂದ, ಕೊಳೆತು ನಾರುತ್ತಿರುವ ತಂದೆಯ ದೇಹದಿಂದ ಮನೆಗೆ ಮುಕ್ತಿ ಸಿಕ್ಕರೆ ಸಾಕು ಎನಿಸಿರಬೇಕು. ಹೆಂಡತಿಗೋ ಸುಖ ಸೂರೆಯಾಗಿ ಹೋಗುವ ವಯಸ್ಸೇನೂ ಅಲ್ಲ. ಇದ್ದರೆಷ್ಟು ಸತ್ತರೆಷ್ಟು! ತಿಂಗಳಿನ ಕೊನೆಗೆ ಹೊರಗೆ ಕೂರುವ ರೂಡಿ ನಿಂತು ಹತ್ತು ವರ್ಷಗಳೇ ಕಳೆದಿವೆ. ಆಗಿನಿಂದ ದೇಹ ಯಾವತ್ತೂ ತಣ್ಣಗೇ ಇರುತ್ತದೆ. ಆಗೀಗ ತಿನ್ನುವ ತಂಬಾಕೇ ತೃಪ್ತಿ ಕೊಡುತ್ತದೆ. ಅಂಗಳದಲ್ಲಿ ಜೋಡಿಸಿಟ್ಟ ಒಣ ಬೊಡ್ಡೆಗೂ ಸತ್ತು ಬಿದ್ದಿರುವ ಹೆಗ್ಡೆಯ ದೇಹಕ್ಕೂ ಏನೂ ವ್ಯತ್ಯಾಸ ಕಂಡು ಬರಲಿಲ್ಲ. ಹೆಣದ ಸುತ್ತ ಊದುಬತ್ತಿಯನ್ನೋ ಅಥವಾ ಲೋಬಾನವನ್ನೋ ಹಚ್ಚಿದ್ದರಿಂದ ನೊಣ ಹಾರಿದಾಗೆಲ್ಲಾ ಗಬ್ಬು ನಾಥ ಬರುತ್ತಿತ್ತು. ಅದೂ ಅವರು ಜೀವವಿದ್ದಾಗಲೂ ಇತ್ತು ಎಂದು ಸಹಜವಾಗಿದ್ದಳು ಸುಶೀಲೆ.

ಅಷ್ಟರಲ್ಲೇ ಹೊರಬಂದ ಹೆಗ್ಡೆರ ಮಗ ನಾಣಿ ಖುಷಿಯಾಗೇ ಇದ್ದ. ಇದೂ ಕೂಡ ಸುಶೀಲೆ ನಿರೀಕ್ಷಿಸಿದ್ದೇ. ಕೈಯಲ್ಲಿ ಲೋಬಾನದ ತಟ್ಟೆ ಹಿಡಿದ ನಾಣಿ ಖುಷಿಯಾಗಿಯೇ ಸುಶೀಲಾ ಒಳಗೆ ಬಾ. ನನಗೆ ಇನ್ನೂ ತುಂಬಾ ಕೆಲಸ ಇದೆ. ಇನ್ನೂ ಊರವರಿಗೆ ಹಾಗೂ ನಮ್ಮ ಸಂಬಂಧಿಗಳಿಗೆಲ್ಲಾ ಸುದ್ದಿ ಮುಟ್ಟಿಸಬೇಕು. ನೀನು ದಿನವೂ ಮಾಡಿಸುತ್ತಿದ್ದಂತೆ ಇವತ್ತೂ ಸ್ನಾನ ಮಾಡಿಸು. ಸಂಬಂಧಿಗಳಂತೂ ಯಾರೂ ಇದರ ಹತ್ತಿರ ಕೂಡಾ ಸುಳಿಯುವುದಿಲ್ಲಾ ನೀನೇ ಮಾಡಿಸಬೇಕು ಎಂದು ಹೇಳುತ್ತಾ ದೂರದಿಂದಲೇ ಮೂಗು ಮುಚ್ಚಿಕೊಂಡು ಲೋಬಾನದ ತಟ್ಟೆ ಇಟ್ಟು ಆತ ಖುಷಿಖುಷಿಯಲ್ಲೇ ಹೊರಟು ಹೋದ.

ಮನೆತುಂಬ ತುಂಬಿಕೊಂಡ ಗಬ್ಬು ವಾಸನೆ ಸುಶೀಲಾಳಿಗೆ ಏನೂ ಅನ್ನಿಸುತ್ತಿರಲಿಲ್ಲ. ಸಹಜವಾಗೇ ರಾಮಾ ಹೆಗ್ಡ್ರು ಹೆಣದ ಹತ್ತಿರ ಬಂದು ನಿಂತಳು ಸುಶೀಲೆ. ಪ್ರತಿ ದಿನ ಬೆಳಿಗ್ಗೆ ತಾನು ಬಂದು ನಿಂತರೆ ತನ್ನ ಕೊಳೆತು ನಾರುತ್ತಿದ್ದ ಸೊಟ್ಟ ಬಾಯಿಯನ್ನು ಅಗಲಿಸಿ ಅಸಾಧ್ಯ ನಗು (?) ನಗುತ್ತಿದ್ದ ರಾಮಾ ಹೆಗ್ಡ್ರು ಇವತ್ತು ಹೆಣವಾಗಿದ್ದರು. ಆದರೂ ಸ್ವಲ್ಪ ನಗಬಹುದೇನೋ ಎಂಬಂತೆ ಹೆಣವನ್ನೇ ದಿಟ್ಟಿಸಿದಳು. ಬಾಯ ಮೇಲೆ ಕೂತಿದ್ದ ನೊಣ ಜೊಯ್ಯನೆ ಹಾರಿದವು. ಸುಶೀಲ ಹೆಣದ ಮೇಲೆ ಹೊದೆಸಿದ್ದ ಬಟ್ಟೆಯನ್ನು ತೆಗೆದು ಅದನ್ನು ಸ್ನಾನದ ಸ್ಥಳಕ್ಕೆ ಕೊಂಡೊಯ್ಯಲು ಯಾರಾದರೂ ಕಾಣುವರೋ ಎಂದು ಆಚೀಚೆ ನೋಡುತ್ತಾಳೆ. ಅತ್ತ ಯಾರೂ ಸುಳಿಯುತ್ತಿಲ್ಲ. ರಾಮಾಹೆಗ್ಡ್ರ ಹೆಂಡತಿ ಬರಬಹುದೋ ಎಂದು ನೋಡಿದಳು. ಒಳಮನೆಯಿಂದ ಇಣುಕು ಹಾಕಿದ ಹೆಗ್ಗಡತಿ ’ಸುಶೀಲಾ ದಿನ ಕರ್ಕೊಂಡ್ ಹೋಗ್ತಿದ್ಯಲ್ಲ ಹಂಗೆ ಎಳೆದುಕೊಂಡು ಹೋಗ್ಬಿಡು. ಇನ್ನೇನ್ ಮಾಡೊಕ್ ಆಗುತ್ತೇ ವಾಸನೇ ತಡೆಯೋಕ್ ಆಗ್ತಿಲ್ಲ’ ಎಂದು ಒಳಗೆ ಸೇರಿಕೊಂಡಳು. ಸುಶೀಲಾ ಹೊರಗೆ ನಿಂತಿದ್ದ ಗುತ್ಯಾನ ಕರೆದು ಹೆಣವನ್ನು ದಿನ ಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಹೊತ್ತು ಒಯ್ದಳು. ಅದಾಗಲೇ ಆ ಸ್ಥಳದಲ್ಲಿ ಬಿಳಿ ಪಂಚೆ, ಸುಗಂಧ ದ್ರವ್ಯವನ್ನು ತಂದಿಟ್ಟಾಗಿತ್ತು. ಸುಶೀಲಾ ಹೆಣವನ್ನು ಪಕ್ಕದ ತೆಂಗಿನ ತಟ್ಟಿಗೆ ಒರಗಿಸಿ ಕೂರಿಸಿದಳು.

ಇದು ಕಳೆದ ಕೆಲವು ತಿಂಗಳಿನಿಂದ ನಡೆದುಕೊಂಡು ಬಂದಿದ್ದ ಪದ್ಧತಿ. ಸುಶೀಲೆ ಪ್ರತಿದಿನ ಬೆಳಗ್ಗೆ ಬಂದವಳೇ ಈ ಸ್ನಾನ ಕರ್ಮವನ್ನು ಮುಗಿಸಬೇಕಿತ್ತು. ಒಂದು ದಿನ ಮನೆಯ ಹಿಂದೆ ಮುಸುರೆ ತಿಕ್ಕುತ್ತಿದ್ದ ಸುಶೀಲಾಳನ್ನು ಹೆಗ್ಡೆರ ಮಗ ನಾಣಿ ಕರೆದು ರಾಮಾ ಹೆಗ್ಡೆರ್ಗೆ ತಾನೆ ಇವತ್ತಿಂದ ಸ್ನಾನ ಮಾಡಿಸಬೇಕು ಎಂದು ಹೇಳಿದಾಗ ಸುಶೀಲಾಳಿಗೆ ಇರಿಸು ಮುರಿಸಾಗಿತ್ತು. ಅದಾಗಲೇ ರಾಮಾಹೆಗ್ಡೆಯ ವೃಣ ಮುಖವೆಲ್ಲ ತುಂಬಿಕೊಂಡು ಮನೆಯೆಲ್ಲ ವಾಸನೆ ತುಂಬಿಕೊಂಡಿತ್ತು. ಅವರು ಬದುಕಿರುವವರೆಗೆ ಪ್ರತಿದಿನ ಅದನ್ನು ತೊಳೆದು ಸ್ವಚ್ಚವಾಗಿಡುವುದು ಅತ್ಯಗತ್ಯವಾಗಿತ್ತು. ಮನೆಮಂದಿಗೆಲ್ಲ ಗಬ್ಬು ವಾಸನೆಯಿಂದ ನರಕಯಾತನೆಯಾಗಿತ್ತು. ಹೆಗ್ಡೆ ತನ್ನ ಮನೆಯಲ್ಲೇ ಅಸ್ಪೃಶ್ಯನಾಗಿದ್ದ.

ಸುಶೀಲಾ, ತೊಳೆದು ಸ್ವಚ್ಚ ಮಾಡೋಕೆ ಪಾತ್ರೆ ಆದ್ರೇನು, ದೇಹ ಆದ್ರೇನು? ಕೊಳೆ ತೊಳೆಯೋದಷ್ಟೆ ತನ್ನ ಕೆಲಸ ಎಂಬಂತೆ ನಿರ್ಲಿಪ್ತಳಾಗಿ ಹೆಗ್ಡೆ ಮಲಗಿದ್ದ ಸ್ಥಳಕ್ಕೆ ಹೋದಳು. ಮುದುರಿ ಮಲಗಿದ್ದ ಹೆಗ್ಡೆ ಸಣ್ಣಗೆ ನಡುಗುತ್ತಿದ್ದ. ಸುಶೀಲಾ ಅವರೆದುರು ನಿಂತಾಗ ಹೊಟ್ಟೆಯ ಒಳಗಿನದೆಲ್ಲ ತೊಳಸಿ ಒಮ್ಮೆಲೆ ಹೊರ ಬಂದಂತಾಯ್ತು. ಸಾವರಿಸಿಕೊಂಡು ’ಹೆಗ್ಡೆರೆ ಏಳಿ, ಇವತ್ತಿಂದ ನಾನೇ ನಿಮಗೆ ಸ್ನಾನ ಮಾಡಿಸ್ಬೇಕಂತ ನಾಣಿ ಹೆಗ್ಗಡರು ಹೇಳಿದ್ರು’ ಎಂದು ಹೇಳಿದಳು.

ಒಮ್ಮೆಲೆ ಹೆಗ್ಡೆಯ ಇಡೀ ದೇಹದ ನಡುಕ ಹೆಚ್ಚಾಯಿತು. ಸುಶೀಲಾ ಅವರು ಹೊದ್ದುಕೊಂಡಿದ್ದ ಹೊದಿಕೆಯನ್ನು ನಿಧಾನಕ್ಕೆ ಸರಿಸಿದಳು. ಹೆಗ್ಡೆ ದಿಗ್ಗನೆ ಎದ್ದು ಕುಳಿತು. ಗೊರ ಸದ್ದು ಮಾಡುತ್ತಾ ಅವಳನ್ನು ಬಯ್ಯುವಂತೆ ಹಾವಭಾವ ಮಾಡಿದ. ಅಷ್ಟರಲ್ಲೇ ಅಲ್ಲಿಗೆ ಬಂದ ನಾಣಿ ಮೂಗು ಮುಚ್ಚಿಕೊಂಡು ’ನಿನ್ನ ಕೊಳೆತ ದೇಹದ ಹತ್ತಿರ ಬರೋಕೂ ಅಸಹ್ಯವಾಗುತ್ತೆ. ಇವತ್ತಿಂದ ಸುಶೀಲಾ ನಿನಗೆ ಸ್ನಾನ ಮಾಡಿಸುತ್ತಾಳೆ’ ಎಂದು ಹೇಳಿ ಒಳಹೋದ.

ಸುಶೀಲಾ ಹಿತ್ತಿಲ ಬಚ್ಚಲು ಮನೆಯಲ್ಲಿ ಬಿಸಿನೀರು ಬೆರೆಸಿಟ್ಟು ಬಂದು ಹೆಗ್ಡೆಯನ್ನು ಕರೆದಳು. ಹೆಗ್ಡೆ ನರಳುತ್ತ ಅವಳ ಹಿಂದೆ ನಡೆದ. ಹೆಗ್ಡೆರ ಹೆಂಡತಿ ಅಲ್ಲೇ ಬಚ್ಚಲು ಮನೆಯ ಬಾಗಿಲಲ್ಲಿ ಇಣುಕಿ ವಾಸನೆ ತಡಯಲಾರದೇ ಅಲ್ಲಿಂದ ಒಳಹೋದಳು. ಸುಶೀಲಾ ಹೆಗ್ಡೆಯ ಒಂದೊಂದೆ ಬಟ್ಟೆಗಳನ್ನು ಕಳಚುವ ಹೊತ್ತಿಗೆ ಪ್ರತಿಭಟಿಸಲು ತ್ರಾಣವಿಲ್ಲದ ಹೆಗ್ಡೆ ನಗ್ನವಾಗತೊಡಗಿದ. ಸುಶೀಲೆ ಮುಖದ ಮೇಲಿನ ಗಾಯವನ್ನು ನಿಧಾನವಾಗಿ ಸ್ವಚ್ಚಗೊಳಿಸುತ್ತ. ಎಡಭುಜದಿಂದ ಇಳಿದುಬಿದ್ದಿದ್ದ ಜನಿವಾರವನ್ನು ಆಚೆ ಸರಿಸುತ್ತಲೇ, ಹೆಗ್ಡೆ ಪ್ರತಿಭಟನೆ ಮತ್ತೆ ಜಾಗೃತವಾಗಿತ್ತು. ನಗ್ನ ದೇಹದ ಮೇಲೆ ಎಳೆಯಾಗಿ ಬಿದ್ದುಕೊಂಡಿದ್ದ ಜನಿವಾರದಲ್ಲೇ ದೇಹದ ಮನಸ್ಸಿನ ಸರ್ವಸ್ವ ಅಡಗಿದೆ ಎಂಬಂತೆ ಸುಶೀಲೆಯನ್ನು ಆಚೆ ನೂಕಿದ. ಸುಶೀಲೆಗೆ ಈ ಎಳೆದಾರದ ಜನಿವಾರದಲ್ಲಿ ಏನು ಅಡಗಿದೆ ಎಂಬುದು ತಿಳಿಯಲಿಲ್ಲ. ಅದನ್ನು ಮುಟ್ಟದಿರುವಂತೆ ಹೆಗ್ಡೆ ಸಂಜ್ಞೆ ಮಾಡಿದ. ಸುಶೀಲಾ ಮೇಲಿನಿಂದಲೇ ನೀರು ಸುರಿದು ಸುಮ್ಮನಾದಳು. ಮನುಷ್ಯ ದೇಹದ ಅಂಗಗಳಲ್ಲಿ ನಾಚಿಕೆ ಎಂಬುದಿದೆ ಎಂಬ ಸುಳ್ಳು ಕಲ್ಪನೆಯ ಪರದೆ ಹರಿದು ಹೋಗಿತ್ತು. ಸುಶೀಲೆಗೆ ಎಡಬುಜದಿಂದ ಇಳಿದು ಬಿದ್ದ ಜನಿವಾರದಲ್ಲಿ ನಾಚಿಕೆ ಅಡಗಿದೆ ಎಂಬುದನ್ನು ಕಲ್ಪಿಸಿಕೊಂಡು ದಿಗಿಲಾಗಿತ್ತು. ಮಾರನೆಯ ದಿನ ಹೆಗ್ಡೆಯ ಮೈಮೇಲಿನ ದಾರ ಕಾಣೆಯಾಗಿತ್ತು. ಎಲ್ಲಿ ಹೋಯ್ತು ಎಂಬುದು ಸುಶೀಲೆಗೆ ತಿಳಿಯದಾಯ್ತು.

ಸುಶೀಲೆ ಹೆಣವಾಗಿ ಮಲಗಿದ್ದ ಹೆಗ್ಡೆಯನ್ನು ತೊಳೆದು, ಬಿಳಿ ಬಟ್ಟೆ ಸುತ್ತಿಟ್ಟು. ಸುಗಂಧ ದ್ರವ್ಯ ಸುರಿದು. ವಾಸನೆ ಕಡಿಮೆಯಾಯಿತು ಎಂದಾಗ ನಾಣಿಯನ್ನು ಕರೆದಳು. ನಾಣಿ ಬಂದು ಅವನ ಜೊತೆಗೆ ಬಂದಿದ್ದ ಇನ್ನೊಬ್ಬರು ಸೇರಿಕೊಂಡು ಹೆಣವನ್ನು ಮನೆಯ ಎದುರು ಎತ್ತಿಕೊಂಡು ಹೋದರು. ಸುಶೀಲಾ ‘ಥೂ ಎಷ್ಟು ತೊಳೆದರೂ ಆ ಬ್ರಾಹ್ಮಣನ ಹೊಲೆ ವಾಸನೆ ಹೋಗ್ತಾನೆ ಇಲ್ಲಾ. ಎಷ್ಟು ಅಂಟುವಾಳ ಕಾಯಿ ಸುರಿದರೂ ಹೋಗಲಾರದೇಕೋ? ಹುಳ ಹರಿಯುತ್ತಿತ್ತು ಮುಖದ ಮೇಲೆ ಯಾರ ಶಾಪವೋ?’ ಸುಶೀಲಾ ಅಂಟುವಾಳದ ರಸ ಕೈಗೆ ಗಸ ಗಸ ತಿಕ್ಕಿಕೊಂಡಳು.

ಹೆಗ್ಡ್ರು ಹೆಣ ಮನೆಯಿಂದ ಹೊರ ಹೋದದ್ದೆ ಏನೋ ಘನತರವಾದ ವಾಸನೆಯ ಅಲೆಯೊಂದು ಮನೆಯ ಒಳಕೋಣೆಯಿಂದ ಹೆಣದ ಹಿಂದೆ ಹಿಂದೆ ಹರಿದು ಹೋಗುತ್ತಿತ್ತು. ಹೆಣ ಹೊತ್ತವರು ಹೆಣ ಹೊತ್ತ ಹೆಗಲು ಬಿಟ್ಟು ಇನ್ನೊಂದು ಕೈಯಿಂದ ಮೂಗು ಮುಚ್ಚಿ ಮುನ್ನಡೆದಿದ್ದರು. ಹೆಣದ ಹಿಂದೆ ಹಿಂದೆ ಜನ ಹೋಗದೆ ಹೆಣಕ್ಕಿಂತ ಮುಂದೆ ಹೊರಟಿದ್ದರು.

ಗಬ್ಬು ವಾಸನೆಯ ಆ ವರ್ತುಲ ದಾಟಿ ಹೊರಬಂದರೆ ಸಾಕು ಎಂಬ ಭಾವನೆ ಎಲ್ಲರಲ್ಲೂ ಹೆಣವನ್ನು ಕಟ್ಟಿಗೆಯ ರಾಶಿಯ ಮೇಲೆ ಹೇಗೆ ಮಲಗಿಸಿದ್ದರೋ, ಯಾರೋ ಕ್ಯಾನುಗಟ್ಟಲೇ ಸೀಮೆಎಣ್ಣೆ ಸುರಿದರು. ಮಗ ಒಂದು ಕೈಯಲ್ಲಿ ಮೂಗು ಮುಚ್ಚಿಕೊಂಡೇ ಕಡ್ಡಿ ಗೀರಿದ. ದಗ್ಗನೆ ಬೆಂಕಿ ಹೊತ್ತಿ ಉರಿಯತೊಡಗಿತು. ಮನೆಯ ಕಡೆ ಹೊರಟಿದ್ದ ಸುಶೀಲೆ ತಲೆಗೆ ಚಕ್ರ ಬಂದಂತಾಗಿ ವಾಂತಿ ಮಾಡಿಕೊಳ್ಳತೊಡಗಿದಳು. ಹುಳಿ ಹುಳಿ ವಾಂತಿಯಾಗುತ್ತಲೇ ಹೊಟ್ಟೆಯಲ್ಲಿ ಜೀವವೊಂದು ಮಿಸುಕಿದಂತೆ ಅನುಭವವಾಯ್ತು.


(ಕೆಂಡಸಂಪಿಗೆಯಲ್ಲಿ ಪ್ರಕಟವಾದದ್ದು )

Friday, May 27, 2011

- ಸಂಜ್ಞೆ -

ಸುಡುಗಾಡು ಸುಂಟಿಕೊಂಬು ಹಾಗಂತ
ಹೇಳಿದ್ದು ನಮ್ಮೂರ ಎಮ್ಮೆ ಕಾಯುವ ಹುಡುಗ !?
ಏನಕ್ಕೆ ಅಂತೀರ ?
ನಾನದೇನೋ ಬರೀತಿನಂತಲ್ಲ ಅದೇ ಕವಿತೆ ಅದಕ್ಕೆ !
ಎಮ್ಮೆ ತಿನ್ನುವ ಹುಲ್ಲು, ಕರ ಹಾಕುವ ಸಮಯ
ಕರಾರುವಕ್ಕಾಗಿ ನೆನಪಿಟ್ಟುಕೊಳ್ಳುತ್ತಾನೆ ಅವನು
ಕಾಡಲ್ಲಿ ಎಮ್ಮೆ ಕಾಯುವ ಬದಲು
ಕವಿತೆ ಗೀಚುತ್ತ ಕುಳಿತಾಗೆಲ್ಲಾ ಆತ ಹೇಳುತ್ತಾನೆ
ಅವನದೇನೋ ಬರೆಯುತ್ತಿದ್ದ ಸುಡುಗಾಡು ಸುಂಟಿಕೊಂಬು !
ನಾನೂ ಬರೆಯುತ್ತಿದ್ದೇನೆ ಅಕ್ಷರ ಬಲ್ಲವರಿಗೆ
ಮಾತ್ರ ಅರ್ಥವಾಗುವ ಪದಗಳನ್ನು
ತೆರೆದ ಜೀವನದ (?) ಕುರಿತು ನಿಗೂಢ ಸಂಜ್ಞೆಗಳನ್ನು.

Saturday, March 19, 2011

ನೆನಪುಗಳೆಲ್ಲ ಅಂಗಡಿ ಇಟ್ಟಿದ್ದವು....

ಮೊನ್ನೆ ನಮ್ಮೂರ ಜಾತ್ರೆಯಲ್ಲಿ ನೆನಪುಗಳೆಲ್ಲ ಅಂಗಡಿ ಇಟ್ಟಿದ್ದವು
ಬಿರು ಬಿಸಿಲಿಗೆ ತಂಪು ಲಿಂಬು ಪಾನಕ
ದೂಳು ಒರೆಸಿಕೊಂಡ ಬಿಳೀ ಕರ್ಚೀಪು ...
ಗಾಜಿನ ಪೆಟ್ಟಿಗೆಯೊಳೂ ರುಂಡ ಮುಂಡ ಕಡಿದುಕೊಂಡು ನಗುವ ಹೆಣ್ಣು
ಅವೆಲ್ಲದರೆದುರು ನಮ್ಮೂರ ಜಾತ್ರೆಯಲ್ಲಿ ನೆನಪುಗಳೆಲ್ಲ ಅಂಗಡಿ ಇಟ್ಟಿದ್ದವು...

ಗುಡ್ಡದಾಚೆಯ ನಮ್ಮ ಮನೆ ಕಾಣುವ ದೊಡ್ಡ ತೊಟ್ಟಿಲು
ಹತ್ತಿ ಕುಳಿತಾಗ ಯಾರೊ ಬಿದ್ದು ಸತ್ತರಂತೆ
ನನ್ನ ನೆನಪುಗಳೇನೋ ಎಂದು ಕೆಳ ನೋಡಿದೆ
ನೆನಪು ಕೊಳ್ಳಲು ಹೋದವನಂತೆ ಅವನು ತಲೆಯೊಡೆದು ಸತ್ತಿದ್ದ
ನೆನಪುಗಳೆಲ್ಲಾ ಅಂಗಡಿಯೊಳಗೆ ಕೂತು ನಗುತ್ತಿದ್ದವು
ಸುತ್ತಲಿದ್ದವರೆಲ್ಲ ಅಳುತ್ತಿದ್ದರು ತೊಟ್ಟಿಲು ಮೇಲೆ ಹೋಗಿ ಕೆಳ ಬರುತ್ತಿತ್ತು.

ಹಲ್ಲು ಉದುರಿದ ನಮ್ಮವ್ವನಿಗಿದು ಎಷ್ಟನೆಯ ಜಾತ್ರೆಯೋ
ಕಳೆದ ಜಾತ್ರೆಯಲ್ಲೇ ಮಂಡಕ್ಕಿಯಲ್ಲಿಯ ಕಲ್ಲು ಕೊನೆಯ ಹಲ್ಲು ಕಳಚಿತ್ತಂತೆ
ಕಣ್ಣರಳಿಸಿ ಈಗ ಹುಡುಕಿದ್ದಳು ಅಂಗಡಿಯಲ್ಲೆಲ್ಲಾದರೂ ಕಳಚಿದ ಹಲ್ಲು ಸಿಗಬಹುದೇ ?

ಜಾತ್ರೆಯೆಲ್ಲಾ ಹುಡುಕಿದರೂ ಅವಳ ಹಲ್ಲು
ನನ್ನ ನೆನಪು ಎಲ್ಲೂ ಸಿಗಲಿಲ್ಲ
ಆದರೂ ನಮ್ಮೂರ ಜಾತ್ರೆಯಲ್ಲಿ ನೆನಪುಗಳೆಲ್ಲ ಅಂಗಡಿಯಿಟ್ಟಿದ್ದಂತೂ ನಿಜ !
ಆದರೆ ವ್ಯಾಪಾರಕ್ಕಲ್ಲ !?

Saturday, December 18, 2010


ಗಾಜು ಗೋಲದೊಳಗಿನ ಮೀನು
ಆಗಾಗ ಗಾಜಿಕೆ ಮುತ್ತಿಕ್ಕಿ ನಗುತ್ತದೆ
ಗೋಳದ ಪಕ್ಕ ಯಾರಾದರೂ ಸುಳಿದಾಗ
ಅವರನ್ನು ಮುಟ್ಟಲು ಹವಣಿಸುವಂತೆ...

ವಿಶಾಲ (?) ಪಂಜರದಲ್ಲಿರುವ ದೊಡ್ಡ ಗಿಡುಗ
ಆಗಾಗ ಹಾರಿ ಹಾರಿ ಮತ್ತೆ ಕುಳಿತುಕೊಳ್ಳುತ್ತದೆ
ಅದನ್ನು ಹತ್ತಿರದಿಂದ ಯಾರಾದರೂ ದಿಟ್ಟಿಸಿದಾಗ...

ಕನಸಿನಲ್ಲಿ ಕಂತೆ ನೋಟು ಕಂಡ ಮಾರನೇ ದಿನ
ಅಂಗಿ ಕಿಸೆಯಲ್ಲಿ ಏನೋ ಕಸಿವಿಸಿ
ಕಂತೆ ನೋಟ ನೆನಪು ದಿನವೆಲ್ಲ...

ಮೀನು ಗಾಜು ದಾಟದು, ಗಿಡುಗ ಬಾನು ನೋಡದು
ಕಿಸೆಯ ಕಸಿವಿಸಿ ಮುಗಿಯದ ಮಾತು...
ಹರಿವ ನದಿಯ ಮೀನಿಗೆ ಗಾಜು ಮನೆ
ವಿಶಾಲ ಬಾನಿನ ಗಿಡುಗಕ್ಕೆ ಪಂಜರ
ಹರಿದ ಕಿಸೆಯ ಮನುಷ್ಯನಿಗೆ ಕಂತೆ ಕನಸು...

Monday, April 26, 2010

ಸಿಗದ ನಕ್ಷತ್ರದ ಮೋಹಕ್ಕೆ ಸಿಕ್ಕ ಸಾಲುಗಳು



ಹೇಳದ ಉಳಿದ ಮಾತುಗಳು
ನಿದ್ದೆಯೊಳಗೆಲ್ಲಾ ಕನವರಿಕೆಯಾಗಿ
ಬೆಳಗಾದರೂ ಎಚ್ಚರಾಗದೇ ಮಲಗಿದೆ...
********

ಅರಿತು ನಗುವ ನೈದಿಲೆಯೆ
ಮನಸ ಅರಳಿಸೋ ಭಾವನೆಯೆ
ಜೀವದಾಸರೆಯ ಧಾತ್ರಿಯೆ
ನಿನ್ನೊಲವ ಬಚ್ಚಿಡದಿರು
ನಾ ಬಂದಾಗ....

********
ನಮ್ಮೂರ ದಾರಿತುಂಬೆಲ್ಲ
ನಿನ್ನದೇ ಮಾತುಗಳು
ಒಂದೊಂದೆ ಆರಿಸಿಕೊಳ್ಳುತ್ತ
ಜೋಪಾನ ಮಾಡುತ್ತಾ ನಡೆದೆ ಹಾದಿ ಹೋದದ್ದೇ ತಿಳಿಯಲಿಲ್ಲ.

*********

ಮಾತು ಮಾತಲ್ಲೆ ಕಳೆದು ಹೊಗಿದ್ದೆವಲ್ಲೇ
ಹುಟ್ಟು ಹಾಕುವ ಮೊದಲೇ
ನನ್ನೆದೆಯ ನಾವೆ ಮಗುಚಿಕೊಳ್ಳುತ್ತಿತ್ತಲ್ಲೇ....

*********

ಕೊನೆಯಿಲ್ಲದ ಕಡೆಲೆಲ್ಲಿದೆ
ಅಲೆ ಮುಟ್ಟದೆ ದಡವ ?
ದಟ ಮುಟ್ಟುವ ಮರಳಲ್ಲವೆ
ಮುತ್ತಾಗುವ ಕೆಲವು
ಕಡಲಲ್ಲಿದೆ ಒಡಲಲ್ಲಿದೆ ಎಲ್ಲವು..
ಮುತ್ತಾಗುವ ಮರಳಾಗುವ ಹೊತ್ತಲ್ಲಿದೆ ಎಲ್ಲವು
ಭಾನಲ್ಲವೆ ಕಡಲಲ್ಲವೆ ಎಲ್ಲದರ ಮೂಲ
ಮನಸಿಲ್ಲವೆ ಕನಸಿಲ್ಲವೆ ನಾವ್ ಅದರದೆ ಮೇಳ.....
**********


ಸದ್ದಿರದೆ ಸರಿದು ಹೋದವರ
ಮಮತೆಯ ನೆನಪಲ್ಲಿ ನಿದ್ದೆ ಹಾಳಾಗದಿರಲಿ
ಕಣ್ಣು ಒದ್ದೆಯಾಗದಿರಲಿ..
***********

ನಿ ಎದ್ದೆಯೇನೋ ಬೆಳಕಾಗಿದೆ ಇಳೆಯೆಲ್ಲ
ನೀ ನಕ್ಕೆಯೇನೋ ಹೂ ಅರಳಿದೆ ಇಲ್ಲೆಲ್ಲ
ನೀ ಇದ್ದರೆ ಇಳೆ ನೀ ಇದ್ದರೆ ಹಸಿರು
ಭೂಮಿ ಬೆಳಗುವ ಭಾನುವಿಗಿದೋ ನಮನ...
************

ಮಳೆ ಸುರಿದ ಮೇಲೆ ತಂಪಾಗುವ ಇಳೆಯಂತಾಗಿದೆ ಮನಸು
ಸುರಿದ ಮಳೆಗೂ ಪಡೆದ ಇಳೆಗೂ
ಸಂಬಂಧ ಶಾಶ್ವತವಾಗಿರಲಿ...
**********

ನೆಲದ ಕುಸುಮವ ನಭದ ನಕ್ಷತ್ರ ಕೈಚಾಚಿ ಕರೆದಂತೆ
ನಾನು ಹುಟ್ಟಿದಾಗಲೇ ಕಂಡಿದ್ದೆ ಕನಸು
ಆಗ ಮೂಡಿದ ಭಾವ ಈಗ ಬದುಕಾಗಿದೆ..
********

ಕತ್ತಲ ಭಾನ ತುಂಬೆಲ್ಲ
ಚಿತ್ತಾರ ಬಿಡಿಸಿ
ಮನಸ ತುಂಬೆಲ್ಲ ಕನಸ ಸುವಾಸನೆ ಬೀರಿ
ಚಂದ್ರನ ಪಕ್ಕದಲಿ ನಗುವ ಕೈಗೆಟುಕದ
ನಕ್ಷತ್ರ ನನ್ನ ಕುಸುಮ...

********

ಚದುರುವ ಮೋಡಗಳ ಮರೆಯಿಂದ
ಇಣುಕಿ ನಗುವ ದಿಕ್ಕು ತಪ್ಪಿದವನಿಗೆ
ದಾರಿ ತೋರುವ ದಿಕ್ಸೂಚಿ ನೀನು...
*********

ಬನದೊಳಗಿನ ಹೂವ ಮುಗುಳ್ನಗೆಯ ಹೊತ್ತವಳೆ
ನದಿಯ ಜುಳುಜುಳುವಿನಂತ ದನಿಯವಳೆ
ಸೂರ್ಯಂಗೆ ಸ್ಪೂರ್ತಿ ನೀಡೋ ಭೂರಮೆಯೆ
ನಿದ್ದೆಯಿಂದೆದ್ದು ನಿನ್ನ ನಗು ಮೊಗವನ್ನೊಮ್ಮೆ
ಹೊರ ತೋರಿಸು ಹೂವುಗಳು ಅರಳಿಕೊಳ್ಳುವವು...
*********

ಬೆಚ್ಚಗೆ ಅಡಗಿದ್ದ ಹೂ ಕನಸುಗಳೆಲ್ಲ
ಮರಗಿಡಗಳ ಮುಡಿಯೇರುವ ದಿನ
ನಿನ್ನ ಕನಸುಗಳೆಲ್ಲ ಕೈಗೂಡಲಿ ಗೆಳತಿ.
ಖುಷಿಯ ನಗು ಮುಡಿದು ಅರಳಿ ನಗುವ ನಿನ್ನ ಮೊಗ ನೋಡಿ
ನಲಿವ ಸುಖ ನನ್ನದಾಗಲಿ ಗೆಳತಿ....
*********

ಇರುವ ಭಾವನೆಯ ಬಚ್ಚಿಟ್ಟು
ಬಾಳುವ ಬಂಡ ಬದುಕು ರೂಡಿಯಾಗಿದೆ ಕಣೆ ಗೆಳತಿ
ನಿನ್ನ ಸುಖದಲ್ಲಿ ನನ್ನ ಮುಖ ಕಾಣುವ
ಹಂಬಲದಲಿ ಮನಸು ಬಂಡೆಯಾಗಿದೆ ಗೆಳತಿ...
*********

ಈಗಷ್ಟೆ ಹುಟ್ಟಿರುವ ಸಾಲು
ಭಾವ ಹಳೆಯದು
ಅದು ನೀನಿಲ್ಲದೆ ಹೊಳೆಯದು
ಭಾವಕ್ಕಷ್ಟು ಬದುಕಿಗಷ್ಟು
ಬೆಡಗು ಇಳಿಸಿದ ಬೆಡಗಿ ನೀನು
ನಿನ್ನದೇ ಭಾವನೆಯ ಕೈಗೊಂಬೆ ನಾನು....
********

Tuesday, April 20, 2010



Copyright:Dinesh M

Tuesday, January 26, 2010

ಸುಮ್ಮನೆ ಮೂಡಿದ ಸಾಲುಗಳು....



ಸೀಸದಲಿ ಬರೆದ ಚಿತ್ರವನು ನಿಮಿಷದಲಿ ಒರೆಸಿ ತೆಗೆದಂತೆ
ತೆಗೆಯಲಾಗದು ಎದೆಯಲಿ ನೀ ಬಿಡಿಸಿದ ಚಿತ್ರ ಮರೆಯಲಾಗದು
ನಿನ್ನ ನೆನಪನು ಚಿತ್ತ !

*****************
ಕಾಮನ ಬಿಲ್ಲಿಗೆ ಬಣ್ಣವೇ ಇಲ್ಲ ಇದು ನಿಜವೇ ?
ನನಗೇನೊ ಅನುಮಾನ ಬಗೆಹರಿಸೋಣವೆಂದರೆ
ಪಕ್ಕದಲ್ಲಿ ನೀನಿಲ್ಲ ನೀ ಇಲ್ಲದೆ ಬಣ್ಣವೆಲ್ಲಿಂದ !
*********

ಬರೀ ಕನಸ ಬಗ್ಗೆಯೇ ಮಾತನಾಡಿದ್ದೆಯಲ್ಲ
ಅದಕೆ ಇರಬೇಕು ನೀ ಎಲ್ಲವನ್ನೂ ಕನಸಾಗಿಸಿದ್ದು
********

ನೀ ಇರದ ಕನಸಿಗೆ ಮೂರೆ ಅಕ್ಷರ
ನೀ ಇರದ ಜೀವನವೂ ಮೂರೇ ಅಕ್ಷರ
*****

ನಾ ಬರೆದ ಬರಹಗಳೆಲ್ಲ ಬರೀ ಬರಹಗಳಲ್ಲ
ಎಂದೂ ಕೈಗೂಡದ ಕನಸುಗಳೇ ಅವೆಲ್ಲ
*****

ಬರೆದಂತೆ ನಾ ಬರಿದಾಗುತಿರುವೆ ಮೂಳೆಗಂಟಿದೆ ಚರ್ಮ
ಆದರೂ ಭದ್ರವಾಗಿದೆ ಹೃದಯ ನಿನ್ನ ನಿರೀಕ್ಷೆಯಲ್ಲಿ
*****

ಭಾವನೆಗಳೇ ವಿಚಿತ್ರ ಹಿಂಡಾಗಿ ಸಿಕ್ಕ ಮೀನೊಮ್ಮೆ
ತುಂಡಾಗಿ ಬಿದ್ದ ಬಲೆ ಇನ್ನೊಮ್ಮೆ
*******

ಎಷ್ಟಾದರಿರಲಿ ಭಾರ ಹೊರುವುದು ಕಷ್ಟವೇನಲ್ಲ
ತೂಕವಿಲ್ಲದ ಮನ ಭಾರವಾದಾಗ ಹೊರುವುದು ಸುಲಭವಲ್ಲ
*****

ನೇಣಿಗೆ ಹೋಗಿ ಸಾಯುವ ಮೊದಲು ಶಾಯರಿ ಬರೆವಾಸೆ
ಭಾವನೆಗಳ ಭಾರಕ್ಕೆ ಕುಣಿಕೆ ಹರಿಯಬಾರದಲ್ಲ !
*****

ಮುಗಿದೇ ಹೋಯಿತು ಎಂದುಕೊಂಡ ಜೀವನಕ್ಕೆ
ಹೊಸ ಕೊನೆಯ ಬರೆವ ಹುನ್ನಾರವೇಕೆ ಹುಡುಗಿ ?
******
ಹರಿದೆಸೆದ್ದಿದ್ದೆನೆ ನಿನಗಾಗಿ ನಾ ಬರೆದ ಪತ್ರಗಳ ಹೊಸದನ್ನು ಬರೆವ ಸಲುವಾಗಿ
ಕೊನೆಗೂ ಹರಿದೆಸೆದೆ ಗಾಳಿಗೆ ನೀ ನನ್ನ ಚಿಗುರೊಡೆದ ಹೊಸ ಕನಸುಗಳ...
*******

ವಿರಹ ಎಂಬುದು ಮೂರೇ ಅಕ್ಷರ ಒತ್ತಿಲ್ಲ ಒತ್ತಡವಿಲ್ಲ
ಆದರೂ ಅದು ಅನುಭವಿಸುವವರಿಗೇ ಗೊತ್ತು ಅದು ಸುಡುವ ಬಗೆ ..
*******

ಭಾವನೆಗಳನ್ನು ಹೇಗಿವೆಯೋ ಹಾಗೇ ಹರಿಯಬಿಟ್ಟಿದ್ದಕ್ಕೆ
ನಾನೀಗ ಚುಕ್ಕಾಣಿ ಹರಿದ ಹಡಗು
ಗಂಟು ಬೀಳಬೇಕಿತ್ತು ಪ್ರಾಸ, ಛಂದಸ್ಸು ಗಣಗಳಿಗೆ !
*******

ಪೌರ್ಣಿಮೆಯು ಉರಿಬಿಸಿಲಂತೆ ಕಾಡುವುದು
ನೆರಳೆಂದು ನೆರಳಾಗದು ತೃಷೆ ನೀಗಿಸದು ನೀರು
ಇದಕ್ಕೆಲ್ಲ ಕಾರಣ ನೀನೇ ನೀರೆ !
*****

ಕಣ್ಣೆರಡು ಕೂಡಿದ್ದು ಒಮ್ಮೆ ಮಾತ್ರ ಎಷ್ಟೋ
ಮಾತುಗಳು ಹೊರಬಂದಿದ್ದು ಆ ಮೌನದಲ್ಲೇ..!
******

ಗರಿಗೆದರಿದ ನಲಿವ ನವಿಲ ಕಂಡಂತೆ ಕನಸು
ಗರಿ ಉದುರಿ ಬೋಳಾದ ನವಿಲು ನರಳಿದಂತೆ ಮನಸು ...
********

ವಸಂತದಲಿ ನಾ ಎಂದೂ ಕೋಗಿಲೆ ಗಾನ ಕೇಳಲಿಲ್ಲ
ಶಿಶಿರದಲಿ ಹುಡುಕಿದರೆ ಅದು ದೊರೆಯುವುದೇ ?
******

ಕುಕಿಲ ನಾನಾದೆ ನಿನ್ನ ಸ್ನೇಹದೊಲುಮೆಯ ತಿಂದು
ಕೇಳುವವರ್ಯಾರು ನಾ ಹಿತವಾಗಿ ಹಾಡಿದರೆ ಇಂದು !
*****

ಇರುವೇಳು ಸ್ವರದಲ್ಲಿ ಮೂಡುವ ರಾಗಗಳೆಷ್ಟೋ
ನೀ ಇದ್ದ ಮನದಲ್ಲಿ ಮೂಡಿದ ಕನಸುಗಳೆಷ್ಟೋ !
*****

ಗಿಡದ ಹೂ ಕಿತ್ತರೆ ಮತ್ತೆ ಅರಳಬಹುದು
ಮನದ ಪ್ರೀತಿ ಸತ್ತರೆ ಮತ್ತೆ ಮೂಡಬಹುದೇ ?
******

ಹಾಡುವವರಿದ್ದರೆ ಸ್ವರಕ್ಕೆ ಬೆಲೆ
ಸ್ವರವಿಲ್ಲದಿದ್ದರೆ ಹಾಡಿಗೆಲ್ಲಿಯ ನೆಲೆ ?
****

ನೆನಪು ಮೆದುಳಿಗಾದರೂ ನೋವು ಹೃದಯಕ್ಕೇಕೆ ?
ನೀ ಆಡಿದ ಮಾತನೆಲ್ಲ ಕವನವಾಗಿ ಬರೆವಾಸೆ
ನಾ ಬರೆವ ಕವನ್ಗಳಿಗೆಲ್ಲ ನಿನ್ನ ಹೆಸರೇ ಶೀರ್ಷಿಕೆ
*****

ಕಣ್ಮುಚ್ಚಿದಾಗ ಕಣ್ಣೆದುರೇ ಇರುವಿ
ಕಣ್ಬಿಟ್ಟಾಗ ಕಾಣದಾಗುವೆ
ಅದಕೆ ನಾನು ಕಣ್ಮುಚ್ಚಿ ಕುಳಿತಿರುವೆ...

ಸೂಚನೆ:ಸುಮಾರು ಆರು ವರ್ಷಗಳ ಹಿಂದೆ ಬರೆದ ಸಾಲುಗಳು ಸ್ನೇಹಿತರೊಬ್ಬರ ಒತ್ತಾಯಕ್ಕೆ ಇಲ್ಲಿ ಪ್ರಕಟಿಸುತ್ತಿದ್ದೇನೆ.

Tuesday, November 17, 2009

ವಿಪರ್ಯಾಸ !

ಮೊಗದಲ್ಲಿನ ನಗುವಾಗುತ್ತಾರೆ ಕೆಲವರು
ಹೃದಯದ ಬಡಿತವಾಗುತ್ತಾರೆ ಇನ್ನ್ಯಾರೋ
ಬದುಕಿಗೇ ಸ್ಪೂರ್ತಿಯಾಗುತ್ತಾರೆ ಕೆಲವರು
ಅವರಿಲ್ಲದೇ ಬದುಕು ಹೇಗೆ ಸಾಧ್ಯ ಹೇಳಿ ?

ಪ್ರೀತಿಯ ಬೆಳಕಲ್ಲಿ ನೋವಿನ ಕತ್ತಲೆಯೇಕೆ?
ನಾನ್ಯಾರನ್ನ ಬಯಸುತ್ತೇನೆಯೋ ಅವರೇ
ಏಕೆ ನನ್ನ ನೋಯಿಸುತ್ತಾರೋ ?
ನನ್ನ ಬದುಕಿನಲ್ಲಿ ಅವರಿರಲಾಗದಿದ್ದರೆ
ಅಲ್ಲಾಹ್‌ ಯಾಕೆ ಅಂತವರನ್ನು ನನಗೆ ಭೇಟಿಯಾಗಿಸುತ್ತಾನೋ ?

ಸೂಚನೆ: ಉರ್ದು ಶಾಯರಿಯೊಂದರ ಸ್ಪೂರ್ತಿಯಿಂದ

Monday, November 16, 2009

ಪ್ರಶ್ನೆ ಇದ್ದರೆ ಉತ್ತರ ಕೊಡಬೇಡ !

ಏನಾದರೂ ಪ್ರಶ್ನೆ ಇದ್ದರೆ ದಯವಿಟ್ಟು ಉತ್ತರ ಕೊಡಬೇಡ
ಮನದೊಳಗೆ ನೋವಿದ್ದರೆ ಯಾರೊಂದಿಗೂ ಹಂಚಿಕೊಳ್ಳಬೇಡ....

ನಿನ್ನ ನೆನಪಿಗಿದ್ದ ಕಡೆಯ ಕೊಂಡಿಯೂ ಕಳಚಿಹೋಯಿತು.
ಎಲ್ಲ ಅನುಭವಗಳಂತೆ ಉಪಯೋಗಕ್ಕೆ ಬಾರದ ಅಕ್ಷರಗಳ ಸಾಲಾಯ್ತು !
ನೋವು ಹೆಚ್ಚಾಯಿತೇ ಹೊರತು ಹೇಳಿಕೊಂಡಂತಾಗಲಿಲ್ಲ.

ಸ್ವಾರ್ಥವಿಲ್ಲದ ಜೀವಗಳೆರಡರ ಬಾಂಧವ್ಯ ಬಲಿಯಾಯ್ತು
ಕಾಣದ ಭವಿಷ್ಯಕ್ಕಾಗಿ, ಹೊಲಸು ತುಂಬಿದ ಸಮಾಜಕ್ಕಾಗಿ !
ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು ಉತ್ತರ ಕೊಡಬೇಡ.

ವಿಚಿತ್ರ ಆದರೂ ಸತ್ಯವೆಂಬಂತೆ ಕೂಡಿಕೊಂಡವರು
ಕಳೆದುಕೊಂಡರು ಕಳೆದು ಪಡೆದುಕೊಂಡರು
ಥೂ ! ಕೂಡಿಸಿ ಕಳೆವ ಕರುಣಾಮಯಿ(?)ಗೆ ಕಡೆಗೊಂದು ದಿಕ್ಕಾರ !
ಕಲ್ಲಾಗಿ ಕುಳಿತಿರುವವನೆ ಪ್ರಶ್ನೆ ಇದ್ದರೆ ಉತ್ತರ ಕೊಡಬೇಡ...

Thursday, November 12, 2009

ನಿನ್ನೆ ರಾತ್ರಿಯ ಕನಸಿನಲ್ಲಿ....




ನಿನ್ನೆ ರಾತ್ರಿಯ ಕನಸಿನಲ್ಲಿ
ನಾನು ಚಪ್ಪಲಿ ಕಳೆದುಕೊಂಡೆ
ದೇವಸ್ಥಾನದಲ್ಲಿ ಮೂರ್ತಿ ಇರಲಿಲ್ಲ !

ನಿನ್ನೆ ರಾತ್ರಿಯ ಕನಸಿನಲ್ಲಿ
ನಾನು ಕಚ್ಚಲು ಬಂದ ಹಾವನ್ನು ಹಿಡಿದು ಕೊಂದೆ
ವಿಷ ತಾಕಲಿಲ್ಲ ನಾನು ಬದುಕಿದ್ದೆ !

ನಿನ್ನೆ ರಾತ್ರಿಯ ಕನಸಿನಲ್ಲಿ
ನಾನು ನಕ್ಷತ್ರ ಕಂಡೆ
ಬೆಳಿಗ್ಗೆಯವರೆಗೂ ಏಣಿ ಜೋಡಿಸುತ್ತಿದ್ದೆ ಕೈಗೆಟುಕಲಿಲ್ಲ !


ನಿನ್ನೆ ರಾತ್ರಿಯ ಕನಸಿನಲ್ಲಿ
ನಾನು ಅವಳ ಕಂಡೆ
ಬಹಳ ಬದಲಾಗಿದ್ದಳು ನನ್ನ ಹಡೆದಾಗ ಆಕೆ ಹಾಗಿರಲಿಲ್ಲ !

ನಿನ್ನೆ ರಾತ್ರಿಯ ಕನಸಿನಲ್ಲಿ ನಾನು ಸತ್ಯ ಕಂಡುಕೊಂಡೆ
ಅವಳ ಪಡೆದುಕೊಂಡೆ ಸುಳ್ಳಲ್ಲ ಅದು,
ನಾನೇ ನಕ್ಷತ್ರವಾಗಿದ್ದೆ ಅವಳೇ ನಾನಾಗಿದ್ದೆ !

ನಿನ್ನೆ ರಾತ್ರಿಯ ಕನಸಿನಲ್ಲಿ
ನಾನು ನನ್ನ ಕಂಡೆ
ವ್ಯತ್ಯಾಸವೇ ತಿಳಿಯಲಿಲ್ಲ ಅದು ನಾನಾಗಿರಲಿಲ್ಲ !


ಸೂಚನೆ: ಡ್ರೀಮ್ ಅನಾಲಿಸಿಸ್ ಪ್ರಕಾರ ಇಲ್ಲಿಯ ಪ್ರತಿಮೆಗಳನ್ನು ಹೆಣೆಯಲಾಗಿದೆ.

Tuesday, November 10, 2009

ಚಿಗುರು ಮೂಡದಿರಲಿ.....!


ಕೊಳಲೂದುತ ನಿಂತ ಕೃಷ್ಣ ಮತ್ತು ಗರಿಬಿಚ್ಚಿ ನರ್ತಿಸುವ ನವಿಲು ಒಂದೇ ಅನ್ನಿಸುವಂತಾಯ್ತು. ಅದೇಕೊ ಕೊಳಲ ದನಿ, ನವಿಲು ನರ್ತನ, ಕೃಷ್ಣ ಗಾಂಭಿರ್ಯ ಎಲ್ಲ ಒಂದೇ, ಕೊಳಲೂದುವ ಹರಿಯೇ ಗರಿಬಿಚ್ಚಿದ ನವಿಲು, ಗರಿಬಿಚ್ಚಿದ ನವಿಲೇ ಕೊಳಲೂದುವ ಕೃಷ್ಣ. ಏನೂ ವ್ಯತ್ಯಾಸ ಕಾಣದು ನವಿಲುಗರಿ ಕಂಡರೂ ಕೃಷ್ಣ ಕಣ್ಣೆದುರಿಗೆ, ಕೊಳಲ ಸ್ವರ ಹೊರಡಿಸುವ ಕಿಂಡಿ ಕಂಡರೂ ಕೃಷ್ಣ !

ಒಂದೇ ಒಂದು ದಿನ ನೆನಪ ತೆಕ್ಕೆಯಿಂದ ಹೊರಬಂದರೆ ಬರಡು ಅನ್ನಿಸುವ ಜೀವನ. ಎಂಥಾ ಮೌನ ಇಳಿಬಿದ್ದ ಹೆರಳ ಮಡಿಲಲ್ಲಿ ಕುಳಿತ ಮಲ್ಲಿಗೆಯ ಮೊಗ್ಗು ಅರಳುವ ಸದ್ದು ಕೇಳುವಷ್ಟು ಮೌನ ಇಲ್ಲಿದೆ. ನಾನು ನಕ್ಷತ್ರ ನೋಡಲು ಕುಳಿತು ದಿನಗಳಾಯ್ತು . ಮೋಡ ಕಟ್ಟಿದ ಆಕಾಶದಲ್ಲಿ ನಿಶ್ಯಬ್ದ. ಮೋಡ ಮಳೆಯಾಗದು ಅತ್ತ ಶುಭ್ರ ಆಕಾಶವನ್ನೂ ತೋರದು. ಅದೇನು ವಿಪರ್ಯಾಸವೋ ಅಥವಾ ಪ್ರಕೃತಿಯೂ ಈ ಘಟನೆಗೆ ಪೂರಕವೋ ಹುಣ್ಣಿಮೆಯಲ್ಲಿ ಕಂಡ ಚಂದ್ರ ಚೂರು ಚೂರಾದರೂ ಕಾಣಿಸಿಕೊಳ್ಳ ಬಾರದೇ ? ಮುಚ್ಚಿದ ಮೋಡ ಇಂಚಾದರೂ ಮರೆಯಾಗಬಾರದೇ ?

ಹ್ಹ್‌... ಮನುಷ್ಯ ಹೃದಯವನ್ನು ನಂಬಿ ಚಿರಂತನವಾದುದದನ್ನು ಕಟ್ಟಲು ಆಸೆ ಪಡುವುದು ಮೂರ್ಖತನ. ಎಲ್ಲ ಮುಗಿದು ಬೀಳುತ್ತದೆ ಹೌದು ಪ್ರೇಮ, ಸ್ನೇಹ, ಸೌಂಧರ್ಯ ಎಲ್ಲವೂ ವಿಸ್ಮ್ರತಿಯ ಆಳಕ್ಕೆ ಸರಿದು ಹೋಗುತ್ತದೆ ! ನನ್ನ ಇಷ್ಟದ ಕವಿ ಚಾರ್ಲ್ಸ್ ಬೋದಿಲೇರ್‌ ಹೇಳಿದ ಮಾತಿದು. ಇಷ್ಟು ದಿನ ನಂಬಿದ್ದ ನಾನು ಜೀವನದ ಎಲ್ಲಾ ಪರಿಸ್ಥಿತಿಗಳನ್ನೂ ಹಾಗೆಯೇ ಕಳೆದವನು. ಈಗ ನಂಬಲಾಗುತ್ತಿಲ್ಲ. ವಿಸ್ಮ್ರತಿಯ ಆಳಕ್ಕೆ ಇಳಿದ ಎಲ್ಲ, ಮನದ ಸಾಗರದ ಮೇಲೆ ತೇಲಿ ತೇಲಿ ಮತ್ತೆ ಜೀವನದ ತೀರಕ್ಕೆ ಬಡಿಯುವುದು ಏತಕ್ಕೋ !

ಎಲ್ಲ ಮರೆತು ಬರಡಾಗಿದ್ದ ಮನದ ಮರ ಮತ್ತೇಕೋ ಚಿಗುರು ಮೂಡಿಸಿಕೊಳ್ಳುವ ತವಕ ತಾಳುತ್ತಿದೆ. ಬೇಡ ಎನ್ನುವ ಬುದ್ಧಿ ಬೇಕು ಎನ್ನುವ ಮನಸು ! ಬೇಡ ನಾನು ಒಣಗಿದ ಮರವಾಗಿದ್ದರೇನೆ ಚೆಂದ. ಯಾವ ಹಕ್ಕಿಯೂ ಈ ಮರದಲ್ಲಿ ಗೂಡು ಕಟ್ಟಬಾರದೂ ನಾನು ಒಮ್ಮೆ ಮಾತ್ರ ಹಸಿರಾಗಿ ಉರಿದು ಹೋಗುವ ಮರ. ಇಲ್ಲಿ ಪ್ರತಿ ವಸಂತ ವಸಂತವಲ್ಲ. ನಾನು ಎಲ್ಲ ಮರಗಳ ಹಸಿರು ಕಂಡು ಕಣ್ಣರಳಿಸುವ ಕವಿ. ನಾನು ಹೀಗೆ ಇರಬೇಕು ಹಸಿರಾದರೆ ಹಸಿರಾದ ಮರದ ಉಸಿರು ಕೇಳದು. ನಾನು ಹಸಿರಾಗುವ ಮರಕ್ಕೆ ಉಸಿರಾಗಬೇಕು. ಅಲ್ಲಿರುವ ಖುಷಿ ಕಾಣಬೇಕು. ನನ್ನೆದೆಯ ಬರಹಕ್ಕೆ ಈ ಬರಡೇ ಹೆಚ್ಚಿನ ಸ್ಪೂರ್ತಿ.

ಮುಂಬರುವ ವಸಂತವೇ ನನ್ನ ಅರಳಿಸದಿರು ನಾನು ಒಣಗಿರಬೇಕು..... !

*ಸೂಚನೆ: ಹಳೆಯ ಡೈರಿಯ ಹಾಳೆಯಲ್ಲಿ ಯಾವತ್ತೋ ಬರೆದಿಟ್ಟ ಸಾಲುಗಳು...

Sunday, November 8, 2009

ನೆನಪಿಸಿಕೊಳ್ಳುವ ಆಟ ...


ಮರೆಯುವುದಕ್ಕೆ ಮರೆವು ಬೇಕು ಮನಸಿನಿಂದ ಮರೆಯಾಗಬೇಕು
ಪಕ್ಕದ ಮನೆಯ ಕಿಡಕಿಯಾಗಿದ್ದರೆ ಗೋಡೆ ಕಟ್ಟಿ ಮರೆಮಾಚುತ್ತಿದ್ದೆ !
ಆಚೆ ಬೀದಿಯಲ್ಲಿ ಕಣ್ಣಿಗೆ ಬೀಳುವ ಹುಡುಗಿಯಾಗಿದ್ದರೆ ಆ ಬೀದಿ ತಪ್ಪಿಸುತ್ತಿದ್ದೆ
ಇದೋ ಕಣ್ಣಿಗೆ ಕಾಣದ್ದು ಎಂದೂ ಕಾಣದ್ದೂ ಏನ ಮರೆಮಾಚಲಿ
ನೆನಪಿಸಿಕೊಳ್ಳುವ ಮನಸಿಗೆ ಬೇಲಿ ಹಾಕಲೇ ? ಎದೆ ಮಧ್ಯ ಬಗೆದು ಗೋಡೆ ಕಟ್ಟಲೆ ?

ನನ್ನ ಖುಷಿಗಲ್ಲದಿದ್ದರೂ, ನನಗೂ ಮರೆಯುವುದು ಬೇಕಿತ್ತು ....
ಕಾಣುವುದು ಕಾಡುವುದಕ್ಕಿಂತ ಕಾಣದ್ದು ಕಾಡುವುದು ಹೆಚ್ಚು
ಕಾಣಿಸದೆ ಕಂಡಂತಾಗಿ ಮರೆಯಾಗುವ ಅಲ್ಲೆಲ್ಲೋ ಇರುವ (?) ದೇವರಂತೆ
ಮರೆತೆ ಮರೆತೆ ಎಂದು ಹೇಳಿಕೊಳ್ಳುತ್ತಲೇ ನೆನಪಿಸಿಕೊಳ್ಳುವ ಮರೆಯುವ ಆಟ
ತಪ್ಪಿ ಬಿಡಲಿ, ಇಲ್ಲೇ ಮುಗಿದು ಬಿಡಲಿ ಎಂದುಕೊಂಡೆ
ಈಗ ?


Thursday, November 5, 2009

ಸತ್ಯ ಮತ್ತು ಮರುಳು....



ನನ್ನೊಳಗಿನ ಭಾವವನ್ನೆಲ್ಲ ಮರುಳು ಎಂದೆಣೆಸಿದ ನಿನ್ನ ಮನಸಿಗೆ ನಾ ಏನ ಹೇಳಲಿ ?
ಪ್ರತಿ ಕ್ಷಣ ಭಾವಸ್ಪುರಣ ಅದು ರತಿಸುಖದಂತದಲ್ಲ ಅನಂತ ಆನಂದ ಸಾಕ್ಷಾತ್ಕಾರ ಕೆಳದಿ.

ಕಿಲಿಮಣೆಯಲ್ಲಿ ಕುಟ್ಟಿದ ಅಕ್ಷರಕ್ಕೆಲ್ಲಿ ಭಾವನೆ ಅದು ನಮ್ಮೊಳಗಿನದ್ದನ್ನು ನೋಡಿಕೊಳ್ಳುವ ಕನ್ನಡಿ
ನೀ ಹೇಗಿರುವೆಯೋ ಹಾಗೆ ಅದು ಕಾಣುವುದು, ನೀ ಎದುರು ನಿಂತಾಗ ನನ್ನ ಬಿಂಬ ಕಾಣದಲ್ಲಿ ಕೆಳದಿ.

ಮುಚ್ಚಿಟ್ಟು ಹೇಳಿದರೆ ಸ್ವಚ್ಚ ಎಂದೆಣಿಸುವ ನೀನು ಬಿಚ್ಚಿಟ್ಟರೇಕೆ ಬದುಕು ಸುಳ್ಳು ?
ಹೇಳುವ ಸತ್ಯವನ್ನೆಲ್ಲ ಸುಳ್ಳೆಂದೆಣಿಸಿದರೆ ತಪ್ಪು ನಿನ್ನದೇ ಹೊರತು ನನ್ನದಲ್ಲವಲ್ಲ ಕೆಳದಿ.

ಮಾತು ಬಿಡು ಬರಹ ಬಿಡು ಎಲ್ಲ ಬಿಟ್ಟರು ನೆನಪು ಕಾಡದಿರದೆ ?
ದಿನ ಕಳೆಯುವುದರೊಳಗಾಗಿ ನಿನ್ನ ನೆನಪಾಗದಿದ್ದರೇ ನನ್ನ ಮನ ಸುಳ್ಳು ಕೆಳದಿ.

ಆಟ ಆಡುವ ಮನಸು ನನ್ನದಲ್ಲ ಹೂಟ ಹೂಡುವ ಬಯಕೆಯೂ ನನಗಿಲ್ಲ
ಗಂಗೆಯೇ ಕೊಳಕಾಗಿರುವ ಕಾಲದಲ್ಲಿ ನಾ ಶುಭ್ರ ಎಂದರೆ ನಂಬುವವರ್ಯಾರು ಕೆಳದಿ ?

Tuesday, November 3, 2009

ಪರಮಾತ್ಮನಿಗೆ...


ನಾ ಹೇಳುವ ಮೊದಲೆ ನನ್ನೊಳಗು
ಅರಿಯುವ ನೀನು !

ನೀ ಹೇಳುವ ಮೊದಲೆ
ನಿನ್ನೊಳಗ ಅರಿಯುವ ನಾನು !

ಆ ನೀನು ಈ ನಾನು
ಬೇರೆ ಬೇರೆ ಹೇಗೆ ಹೇಳು ?

ಆತ್ಮ ಧರಿಸಿದ ದೇಹ
ದೇಹ ಅರಸುವ ಭಾವ
ಆ ದೇಹ ಈ ದೇಹ ಎಲ್ಲ ನಿನ್ನೊಳೊಂದಾಗುವ
ಆತ್ಮಕ್ಕೆ ಸಾರಥಿಯಲ್ಲವೇನು ?

ಯಾವ ದೇಹದಲ್ಲಿದ್ದರೇನು
ಹುಡುಕುವುದು ಪರಮ ಆತ್ಮವನ್ನೇ ಅಲ್ಲವೇ ನಾವು ?

ಇನ್ನೆಷ್ಟು ದಿನ ಇದ್ದೀತು ಹೇಳು
ನೇರಿಗೆ ಬೀಳುವ ಈ ದೇಹವೆಂಬ ಹಸಿ ಸುಳ್ಳು ?

ನೋಡುವ ಕಣ್ಣಲ್ಲವೇ ಬೆನ್ನತ್ತುವುದು ದೇಹವನ್ನು ?
ಆತ್ಮವಲ್ಲ ಬಿಡು ಅದು ಮಂಗ ಬುದ್ಧಿ !

ಕಣ್ಮುಚ್ಚಿ ಅನುಭವಿಸಿದಾಗಲೇ ಅರಿಯುವುದು
ಕಡುಗಪ್ಪೇ ಬೆಳಕು !

ಆ ನೀನು ಈ ನಾನು
ಆಕಾರವೆಲ್ಲಿಯದು ಕಾಣೆ ?

Wednesday, September 23, 2009

ನಿಶ್ಯಬ್ಧವಾಗಿರಿ ಎಲ್ಲ ಮಾತನಾಡುತ್ತಿದ್ದಾರೆ !

ತಲೆ ತುರಿಸಿಕೊಳ್ಳುತ್ತ ಎದುರು ಕುಳಿತ ಹುಡುಗಿ
ಕಾದಂಬರಿ ಓದುವಾಗೆಲ್ಲಾ ರೋಮಾಂಚನಗೊಳ್ಳುತ್ತಾಳೆ
ಆಚೀಚೆ ನೋಡಿ ಅದೇನೋ ಬರೆದುಕೊಳ್ಳುವ ಪಕ್ಕದವಳು
ಬೀಜಗಣಿತದ ಸೂತ್ರ ಯೋಚಿಸುತ್ತಾಳೆ.

ಉದ್ದಕ್ಕೆ ಜೊಡಿಸಿಟ್ಟ ಪುಸ್ತಕಗಳಲ್ಲೆಲ್ಲ ಹುಡುಕಾಡಿ ತಂದ
ರಾಶಿ ಪುಸ್ತಕದಲ್ಲಿ ಎಲ್ಲಾದರೂ ರೋಮ್ಯಾನ್ಸ್‌ ಕಂಡಿತೇ
ಪುಟ ತಿರು ತಿರುಗಿಸಿ ನಿಟ್ಟುಸಿರಾಗುತ್ತಾನೆ ಹುಡುಗ
ಕೊನೆ ಪುಟದಲಿದ್ದ ಮೊಬೈಲು ನಂಬರಿಗೆ
ಬಟನ್‌ ಒತ್ತಿದಾಗ ಕನಸು ಚಿಗುರುತ್ತದೆ
ಅತ್ತ ನಾಟ್‌ರೀಚೆಬಲ್‌ ಧ್ವನಿ ಉಲಿಯುತ್ತದೆ.

ಸ್ಪರ್ಧಾ ಪರೀಕ್ಷಗೆ ಓದಲು ಕುಳಿತವಗೆ
ಉತ್ತರ ಯಾವುದು ’ಎ’ನೋ ’ಬಿ’ನೋ
ಗೊಂದಲದಲಿ ಅಂದಾಜು ಟಿಕ್ಕು ಹಾಕಿ ಉತ್ತರಕ್ಕೆ
ಹಾಳೆ ತಿರುವುತ್ತಾನೆ,ಪಕ್ಕ ಕುಳಿತವಳು
ಓರೆಗಣ್ಣಿನಲ್ಲಿ ನೋಡುತ್ತಾಳೆ ಉತ್ತರ ಕೇಳಲೇ ?

ನಿಶ್ಯಬ್ಧವಾಗಿರಿ..!
ಮಾತನಾಡದೇ ಕುಳಿತ ಎಲ್ಲರೂ ಮಾತನಾಡುತ್ತಿದ್ದಾರೆ
ಕಣ್ಣುಗಳಲ್ಲೇ, ತಾವು ತಂದಿಟ್ಟುಕೊಳ್ಳುವ ಪುಸ್ತಕಗಳಲ್ಲೇ
ಹಾಳೆ ತಿರುಗಿಸುವ ರಭಸದಲ್ಲಿ, ಪೆನ್ನು ಕಚ್ಚುವ ನೆವದಲ್ಲಿ
ಮೈ ಮುರಿದು ಆಕಳಿಸಿ ಕೊನೆಯಲ್ಲಿ ಕುಳಿತ ಹುಡುಗಿಯ
ದಿಟ್ಟಿಸುವಾಗ, ನಿಶ್ಯಬ್ಧವಾಗಿರಿ ಎಲ್ಲ ಮಾತನಾಡುತ್ತಾರೆ
ತಲೆ ತುರಿಸಿಕೊಳ್ಳುವ ಹುಡುಗಿ
ಕಣ್‌ಪಿಳುಕಿಸುವ ಹುಡುಗ ಎಲ್ಲ ಮಾತನಾಡುತ್ತಿದ್ದಾರೆ ನಿಶ್ಯಬ್ಧವಾಗಿ..!

Tuesday, September 8, 2009

ಸಣ್ಣಕಥೆ; ‘ಮಾಯಾ’


ಸಿದ್ದಾಪುರದ ಮುಗದೂರಿನ ನಾಟಕದ ಮಾಸ್ತರ ಚಂದ್ರಶೇಖರನಿಗೆ ಮೊನ್ನೆ ಬುಧವಾರ ಸಂತೆಯಲ್ಲಿ ಸಿಕ್ಕ ಸ್ನೇಹಿತ ರಾಮಚಂದ್ರ, ಬಿಳಗಿ ಸಮೀಪದ ಹೂವಿನ ಮನೆ ಗ್ರಾಮದಲ್ಲಿ ಒಂದು ನಾಟಕ ಆಡಿಸುವ ಪ್ರೊಜೆಕ್ಟ್ ದೊರಕಿದೆ, ಅಲ್ಲಿಯ ಮಹಿಳಾ ಮಂಡಳದವರಿಗೆ ನಾಟಕ ಕಲಿಸಬೇಕು. ಒಂದು ಉತ್ತಮವಾದ ನಾಟಕ ಆಯ್ದುಕೊಂಡು ನಾಳೆಯೇ ನೀನು ಹೂವಿನ ಮನೆಗೆ ಹೊರಡ ಬೇಕು ಎಂದು ಮಾತು ಶುರುವಿಟ್ಟ.

ಒಂದೇ ಉಸುರಿನಲ್ಲಿ ಮಾತನಾಡಿದ ರಾಮಚಂದ್ರನನ್ನು ತಡೆದು ಚಂದ್ರಶೇಖರ ‘ಅದ್ಯಾಕೋ ಹಂಗೆ ಆರು ತಿಂಗಳಿಗೆ ಹುಟ್ಟಿದಂಗೆ ಆಡ್ತೀಯಾ? ಬಾ ನಿರ್ಮಲಾ ಹೋಟೆಲ್‌ಗೆ ಹೋಗಿ ಬಿಸಿಬಿಸಿ ಚಾ ಕುಡಿತಾ ಮಾತಾಡೋಣ’ ಎಂದು ಅವನನ್ನು ಎಳೆದುಕೊಂಡು ಹೊರಟ. ಹೋಟೆಲ್‌ನ ಮೂಲೆಯ ಟೇಬಲ್‌ನಲ್ಲಿ ಕುಳಿತುಕೊಂಡು ಚಂದ್ರಶೇಖರ ಚಹಾಕ್ಕೆ ಆರ್ಡರ್ ಮಾಡಿದ. ‘ಈಗ ಹೇಳು ಏನು ವಿಷಯ’ ಎಂದು ಪೀಠಿಕೆ ಹಾಕಿದ. ಅದಕ್ಕೆ ರಾಮಚಂದ್ರ ‘ಎರಡು ದಿನದಲ್ಲಿ ನಾನು ಅಲ್ಲಿಗೆ ಬರುತ್ತೇನೆ. ಅಲ್ಲಿ ಹೋದವನು ವೆಂಕಟರಮಣ ಭಟ್ರು ಅಂತ ಒಬ್ಬರು ಊರ ಮುಖಂಡರಿದ್ದಾರೆ. ನನಗೆ ತುಂಬಾ ಪರಿಚಿತರು ಅವರ ಮನೇಲಿ ಉಳಿದುಕೋ. ನಾನು ಬಂದ ನಂತರ ನಾಟಕಕ್ಕೆ ಪಾತ್ರಗಳನ್ನು ಆಯ್ಕೆ ಮಾಡೋಣವಂತೆ. ಅಲ್ಲಿಯವರೆಗೆ ನೀನು ಊರ ಪರಿಸರ ಹಾಗೂ ಯಾವ ನಾಟಕ ಅಲ್ಲಿ ಸೂಕ್ತ ಎಂಬುದನ್ನು ಗುರುತಿಸಿಟ್ಟುಕೋ’ ಎಂದವನು ಗಡಿಬಿಡಿಯಲ್ಲಿ ಹೊರಟೇ ಬಿಟ್ಟ. ಇಲ್ಲಿಯವರೆಗೆ ಮುಗದೂರು, ಕಣಸೆ, ಕೊಂಡ್ಲಿ ಎಂದು ತಿರುಗುತ್ತ, ಆಚೀಚೆ ಇರುವ ತನ್ನ ಸ್ನೇಹಿತರನ್ನೇ ಕಟ್ಟಿಕೊಂಡು ನಾಟಕ ಮಾಡಿಸುತ್ತಿದ್ದ ಚಂದ್ರಶೇಖರನಿಗೆ ಬರೀ ಹೆಂಗಸರನ್ನು ಕಟ್ಟಿಕೊಂಡು ನಾಟಕ ಆಡಿಸಬೇಕು, ಅದೂ ಹೂವಿನ ಮನೆಯ ಮಹಿಳಾ ಮಣಿಗಳಿಗೆ, ಸವಾಲಿನ ಹಾಗೂ ಖುಷಿಯ ವಿಷಯ ಎನಿಸಿತು.

ಮುಗದೂರಿನಿಂದ ಹೂವಿನ ಮನೆ ಅಬ್ಬಬ್ಬಾ ಅಂದರೆ ಸುಮಾರು ೩೦ ಕಿಲೋ ಮೀಟರ್ ಇರಬಹುದೇನೋ. ಮುಗದೂರಿನಿಂದ ಸಿದ್ದಾಪುರಕ್ಕೆ ಹೋಗಿ ಅಲ್ಲಿಂದ ಹೂವಿನ ಮನೆಗೆ ಬಸ್ಸನ್ನು ಹಿಡಿಯಬೇಕಿತ್ತು. ಮಾರನೇ ದಿನ ಎದ್ದವನೇ ಚಂದ್ರಶೇಖರ ತನ್ನ ಪಕ್ಕಾ ನಿರ್ದೇಶಕನ ದಿರಿಸುಗಳನ್ನು ಹಾಗೂ ಕೆಲವು ನಾಟಕದ ಪುಸ್ತಕಗಳನ್ನು ಒಂದು ಹತ್ತಿಯ ಜೋಳಿಗೆಗೆ ತುಂಬಿಕೊಂಡು ಹೊರಡಲು ರೆಡಿಯಾದ. ಬಸ್ ಸ್ಟಾಂಡ್ ಹಿಂದೆ ಸೈಕಲ್ ಇಟ್ಟು ಹೋಗಬಹುದು ಎಂದುಕೊಂಡು ತನ್ನ ಸೈಕಲ್ ತೆಗೆದುಕೊಂಡು ಸಿದ್ದಾಪುರದ ಕಡೆ ಸವಾರಿ ಹೊರಟ.

********

ಹೂವಿನ ಮನೆಯ ಕಡೆ ಹೋಗುವ ಬಸ್ಸು ತುಂಬಿ ತುಳುಕುತಿತ್ತು. ಹೇಗೋ ಬಸ್ ಹತ್ತಿದವನಿಗೆ ಡ್ರೈವರ್ ಹಿಂದಿನ ಸೀಟೊಂದು ಕಾಲಿ ಇರುವುದು ಕಾಣಿಸಿತು. ಇಷ್ಟೆಲ್ಲ ಜನ ಜೋತಾಡಿಕೊಂಡು ನಿಂತಿದ್ದಾರೆ ಆದರೆ ಯಾರೂ ಆ ಸೀಟಿನೆಡೆಗೆ ಹೋಗುತ್ತಿಲ್ಲವಲ್ಲ ಎಂಬ ಆಶ್ಚರ್ಯದೊಂದಿಗೆ ಎಲ್ಲರನ್ನೂ ದೂಡಿಕೊಂಡು, ಅವರ ಕೆಂಗಣ್ಣನ್ನು ಎದುರಿಸುತ್ತ ಕಾಲಿ ಕಂಡ ಸೀಟಿನೆಡೆಗೆ ನುಗ್ಗಿದ. ಕೆದರಿದ ಕೂದಲಿನ ಸುರೂಪಿ ಹೆಂಗಸೊಬ್ಬಳು ತಾನು ಒಂದು ಸೀಟಿನಲ್ಲಿ ಕುಳಿತದ್ದಲ್ಲದೆ ಪಕ್ಕ ಬಿದಿರ ಬುಟ್ಟಿಯೊಂದನ್ನು ಇಟ್ಟು ಕುಳಿತುಕೊಂಡಿದ್ದಳು. ಪಕ್ಕಕ್ಕೆ ಹೋಗಿ ನಿಂತ ಚಂದ್ರಶೇಖರನನ್ನು ನೋಡಿದ ಹೆಂಗಸು ಬುಟ್ಟಿಯ ಕಡೆಗೊಮ್ಮೆ ನೋಡಿ, ತೆಗೆದು ಸೀಟಿಗೆದುರು ಇರುವ ಜಾಗದಲ್ಲಿ ಇಟ್ಟು ಕುಳಿತುಕೊಳ್ಳಲು ಅನುವು ಮಾಡಿಕೊಟ್ಟಳು. ಚಂದ್ರಶೇಖರ ತನ್ನ ಹೆಗಲ ಚೀಲವನ್ನು ಇಳಿಸಿ ಅವಳ ಪಕ್ಕದಲ್ಲಿ ಕುಳಿತುಕೊಂಡ. ಯಾವುದೋ ಯೋಚನೆಯಲ್ಲಿ ಮುಳುಗಿದ್ದಂತೆ ತೋರುತ್ತಿದ್ದ ಅವಳು ಆಗಾಗ ತಂತಾನೆ ಮಾತನಾಡಿಕೊಳ್ಳುತ್ತಿದ್ದುದನ್ನು ಚಂದ್ರಶೇಖರ ಗಮನಿಸಿದ. ಇವಳ ಸಮಸ್ಯೆ ಏನು ಎಂದು ಕೇಳಬೇಕೆನಿಸಿತು. ಬಸ್ಸು ಹೊರಟ ನಂತರದಲ್ಲಿ ನಿಧಾನಕ್ಕೆ ಮಾತನಾಡಿಸಿದರಾಯ್ತು ಎಂದುಕೊಂಡು ಸುಮ್ಮನಾದ. ಕೆಲವು ನಿಮಿಷಗಳ ನಂತರ ಪಕ್ಕದಲ್ಲಿ ಕುಳಿತವಳು ಸೊಂಟಕ್ಕೆ ಸಿಕ್ಕಿಸಿದ್ದ ಪಾಲಿತಿನ್ ಕವರ್ ತೆಗೆದು ಒಂದು ಹಿಡಿ ಅಡಿಕೆ, ಎರಡೆರಡು ಎಲೆಗಳನ್ನೂ, ಜೊತೆಗೆ ಒಂದಿಷ್ಟು ತಂಬಾಕಿನ ಎಸಳನ್ನೂ ಬಾಯಿಗೆಸೆದುಕೊಂಡು ಕುಳಿತಳು. ಎಲ್ಲವನ್ನೂ ಗಮನಿಸಿದ ಇವನಿಗೆ ಈಕೆ ಹೂವಿನ ಮನೆಯವಳೇ ಆಗಿದ್ದರೆ ನಾನು ನಿರ್ದೇಶಿಸುತ್ತಿರುವ ನಾಟಕದಲ್ಲಿ ಒಂದು ಪಾತ್ರ ಕೊಡಬಹುದೇನೋ ಎಂದೆನಿಸಿತು.

ಸಿದ್ದಾಪುರದಿಂದ ಹೂವಿನ ಮನೆಗೆ ಹೋಗುವ ಕುಮಟಾ ರಸ್ತೆಯನ್ನು ಇತ್ತೀಚೆಗೆ ರಿಪೇರಿ ಮಾಡಿದ್ದರಿಂದ ಏರು ತಗ್ಗುಗಳಿಲ್ಲದ ಹಾದಿಯಲ್ಲಿಯಲ್ಲಿ ಬಸ್ಸು ತೊಟ್ಟಿಲಂತೆ ತೂಗುತ್ತಿತ್ತು. ಚಂದ್ರಶೇಖರನಿಗೆ ನಿದ್ದೆ ಬಂದಂತೆನಿಸಿ ಪಕ್ಕಕ್ಕೆ ಕುಳಿತವಳನ್ನು ಮಾತನಾಡಿಸುವ ಎಂದುಕೊಂಡು ಅವಳೆಡೆಗೆ ನೋಡಿದ. ಅವಳೋ ಕುಪ್ಪುಸದಿಂದ ಹೊರಗಿಳಿದಿದ್ದ ಎದೆಯನ್ನು ಯಾವುದೇ ಲಜ್ಜೆಯಿಲ್ಲದೆ ಒಳಸೇರಿಸುವುದರಲ್ಲಿ ಮಗ್ನಳಾಗಿದ್ದಳು. ಅವಳ ಈ ಅವತಾರ ನೋಡಿದ ಚಂದ್ರಶೇಖರನಿಗೆ ತಾನು ಹೋಗುತ್ತಿರುವುದು ಹಳ್ಳಿಗೆ ಅಲ್ಲಂತೂ ಎಲ್ಲರೂ ತುಂಬಿದೆದೆಯವರೇ ಆಗಿರುತ್ತಾರೆ. ಹೇಗಪ್ಪಾ ಅವರನ್ನು ನಾಟಕದಲ್ಲಿನ ಗಂಡು ಪಾತ್ರಗಳಿಗೆ ಹೊಂದಿಸುವುದು? ಎಂದು ಪೋಲಿ ಯೋಚನೆಯೊಂದು ಹಾಯ್ದು ಹೋಯ್ತು. ಈತ ಅವಳೆಡೆಗೆ ನೋಡುತ್ತಿರುವುದನ್ನು ಗಮನಿಸಿದ ಆಕೆ, "ತಾವು ಯಾವೂರಿಗೆ ಹೊರಟಿದ್ದು" ಎಂಬಂತೆ ಪ್ರಶ್ನೆ ಎಸೆದು ಮತ್ತೆ ತಾಂಬೂಲ ಧ್ಯಾನ ಮಗ್ನಳಾದಳು. ತಾನು ಹೂವಿನ ಮನೆಗೆ ಹೊರಟಿರುವುದು ಎಂದು ಹೇಳಿ ಸುಮ್ಮನಾದ. ಒಮ್ಮೆಗೆ ಆಶ್ಚರ್ಯಗೊಂಡವಳಂತೆ ಆಕೆ "ಓ ಹೌದಾ ಹಂಗಾದ್ರೇ ನೀವೂ ನಮ್ಮೂರಿಗೆ ಹೊಂಟಿರೋದು" ಎಂದು ಇಷ್ಟಗಲ ನಗೆ ನಕ್ಕಳು. ಕಿಡಕಿಯ ಹೊರ ತಲೆಹಾಕಿ ಪಿಚಕ್ಕನೆ ಉಗುಳಿ, ಏನೋ ಗಡಿಬಿಡಿಗೆ ಬಿದ್ದವಳಂತೆ ಬಾಯಿಯಿಂದ ಹೊರಗಿಳಿದ ಕವಳದ ರಸವನ್ನು ಕೈಯಿಂದ ಒರೆಸಿಕೊಳ್ಳುತ್ತ "ಅಲ್ಲಿ ಯಾರ ಮನೆಗೆ ಹೊರಟಿರೋದು ?" ಎಂಬ ಪ್ರಶ್ನೆ ಕೇಳಿ ಉತ್ತರದ ನಿರೀಕ್ಷೆಯಲ್ಲಿ ಕುಳಿತಳು. ತಾನು ನಾಟಕದ ಮಾಸ್ತರ ಎಂದು ಹೇಳಲಿಚ್ಚಿಸದ ಚಂದ್ರಶೇಖರ "ಭಟ್ರ ಮನೆಗೆ" ಎಂದು ಹೇಳಿ ಸುಮ್ಮನಾದ. "ಅರೇ ಎಂಟ್ರಮಣ ಭಟ್ರ ಮನೆಗೆ ಹೊಂಟಿದ್ರೋ.." ಎಂದು ರಾಗವೆಳೆದಳು. ನಾನು ಹೆಸರೇ ಹೇಳದಿದ್ದರೂ ವೆಂಕಟ್ರಮಣ ಭಟ್ರ ಮನೆ ಎಂದು ಇಕೆಗೆ ಹೇಗೆ ಗೊತ್ತಾಯ್ತು ಎಂದು ಚಂದ್ರಶೇಖರನಿಗೆ ಆಶ್ಚರ್ಯವಾಯ್ತು. ಸ್ವಲ್ಪ ಹೊತ್ತು ಸುಮ್ಮನಿದ್ದ ಆಕೆ "ಓಹೋ ಎಂಟ್ರಮಣ ಭಟ್ರ ಕೂಸು ಮಾಯಮ್ಮನ ನೋಡೋಕೆ ಹೊರಟಿರೋ ಮಾಣಿಯೋ ನೀವು?’ ಎಂದು ಕೇಳಿದಳು. ಬಣ್ಣದಲ್ಲಿ ಮಾತ್ರ ಬ್ರಾಹ್ಮಣನಂತಿರುವ ಚಂದ್ರಶೇಖರನಿಗೆ ತನ್ನನ್ನು ಮಾಣಿ ಎಂದು ಆಕೆ ಕೂಗಿದ್ದಕ್ಕೆ ಒಳಗೊಳಗೆ ಖುಷಿಯಾಯ್ತು. ಆ ಖುಷಿಯಲ್ಲಿ ಮಾತನಾಡುವಾಗ ಅವಳ ಮುಖದಲ್ಲಿ ಉಂಟಾದ ಬದಲಾವಣೆಗಳನ್ನು ಚಂದ್ರಶೇಖರ ಗಮನಿಸಲಿಲ್ಲ. ಮಾಯಾ ಹೇಗಿರಬಹುದು? ಭಟ್ರಿಗೆ ಅವಳೊಬ್ಬಳೇ ಮಗಳೋ ಹೇಗೆ? ಮತ್ತೆ ರಾಮಚಂದ್ರ ಏನೂ ಹೇಳಲೇ ಇಲ್ಲವಲ್ಲಾ! ಗಡಿಬಿಡಿಯಲ್ಲಿದ್ದ ಮರೆತನಂತ ಕಾಣುತ್ತದೆ. ಇರಲಿ ನಾನು ಅಲ್ಲಿಗೇ ಹೋಗುತ್ತಿದ್ದೇನಲ್ಲ ನೋಡಿದರಾಯ್ತು. ಹೇಗಿದ್ದಾಳೋ ಏನೋ? ಹೇಗಾದ್ರೂ ಮಾಡಿ ಅವಳನ್ನು ತಾನು ನಿರ್ದೇಶಿಸುತ್ತಿರುವ ನಾಟಕದ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ಭಟ್ಟರ ಕೂಸು ತೆಳ್ಳಗೆ ಬೆಳ್ಳಗೆ ಚೆನ್ನಾಗೇ ಇರ‍್ತಾಳೆ. ಒಳಗೊಳಗೆ ಖುಷಿಯಾದ ಚಂದ್ರಶೇಖರ ಸಾಧ್ಯವಾದರೆ ಅಲ್ಲಿರುವಷ್ಟು ದಿನ ಭಟ್ಟರ ಕೂಸಿನ ಜೊತೆ ಚೆನ್ನಾಗೇ ಇದ್ದು ತನ್ನ ಕಾಲೇಜು ದಿನಗಳ ಯೋಚನೆಯಂತೆ ಭಟ್ಟರ ಕೂಸನ್ನೇ ಮದುವೆಯಾಗುವ ಕನಸೂ ಕೈಗೂಡಿಸಿಕೊಳ್ಳುವುದು ಎಂದು ಲೆಕ್ಕ ಹಾಕಿದ. ಕ್ಷಣದಲ್ಲಿ ಎಲ್ಲವನ್ನೂ ಯೋಚಿಸಿದ ಚಂದ್ರಶೇಖರ ಅವಳ ಪ್ರಶ್ನೆಗೆ ಏನೂ ಉತ್ತರ ಕೊಡದೆ ಸುಮ್ಮನಾದ. ತಾನು ಆಡಿಸಲು ಹೊರಟಿರುವ ನಾಟಕಕ್ಕಿಂತ ಬ್ರಾಹ್ಮಣರ ಕೂಸಿನ ಮನಸು ಕದಿಯಲು ಏನೇನು ಮಾಡಬಹುದು ಎಂಬುದನ್ನು ಯೋಚಿಸುತ್ತ ಹಾಗೆಯೇ ನಿದ್ದೆ ಹೋದ.

ಭುವನಗಿರಿಯ ಕೆರೆ ದಾಟುತ್ತಲೇ ಇರುವ ಕ್ರಾಸ್‌ನಲ್ಲಿ ಬಸ್ಸು ತಿರುಗಿಕೊಂಡಾಗ ಪಕ್ಕನೇ ಈತನಿಗೆ ಎಚ್ಚರವಾಯಿತು. ‘ಇನ್ನೇನು ಒಂದು ಹತ್ತಿಪ್ಪತ್ತು ನಿಮಿಷ ಅಷ್ಟೇ ಊರು ಬಂದು ಬಿಡತೈತಿ’ ಎಂದು ಪಕ್ಕಕ್ಕೆ ಕುಳಿತವಳು ಹೇಳಿದಳು. ಇವನು ಓಹೋ ಎಂದು ಮುಖ ಮಾಡಿ ಕುಳಿತ. ಇಲ್ಲಿಯವರೆಗೆ ಎದುರು ಇಟ್ಟ ಬುಟ್ಟಿಯ ಕಡೆಗೆ ಗಮನ ಹರಿಸದ ಈತ ಅದರಿಂದ ಬರುತ್ತಿರುವ ಶಬ್ಧದಿಂದ ಕುತೂಹಲ ತಾಳಲಾರದೆ ಎದುರಿರುವ ಬುಟ್ಟಿಯ ಕಡೆಗೆ ಬೆರಳು ಮಾಡಿ ಏನದು ಎಂದು ಅವಳನ್ನು ಕೇಳಿದ. ‘ಓ ಅದಾ? ನಾಟಿ ಕೋಳಿ. ಸಂತೆಗೆ ಅಂತ ತಗಂಡು ಹೋಗಿದ್ದೆ ಆದರೆ ನಿನ್ನೇನೆ ಸಂತೆ ಮುಗಿದು ಹೋಯ್ತಂತೆ ಅದ್ಕೆ ವಾಪಾಸ್ ತಗಂಡು ಬಂದೆ’ ಎನ್ನುತ್ತಾಳೆ. ಅರೇ ಇದೇನಿದು ಸಿದ್ಧಾಪುರದ ಸುತ್ತಮುತ್ತಲಿನ ಎಲ್ಲರಿಗೂ ತಿಳಿದಿದೆ ಬುಧವಾರ ಸಂತೆಯೆಂದು ಇವಳಿಗೆ ಗೊತ್ತಿರಲಿಲ್ಲವಾ? ಚಂದ್ರಶೇಖರ ಕ್ಷಣ ಯೋಚಿಸಿದ. ತನ್ನ ಯೋಚನೆಯನ್ನು ಅವಳಿಗೆ ತಿಳಿಸುವಾ ಎಂದುಕೊಂಡು ಅವಳೆಡೆಗೆ ನೋಡಿದ ಆಕೆ ಆಗಲೇ ಇನ್ನೊಂದು ಕವಳಕ್ಕೆ ರೆಡಿಯಾಗುತ್ತಿದ್ದಳು.

*******

‘ಯಾರ್ರೀ ಅದು ಹೂವಿನ ಮನೆ ಸ್ಟಾಪ್‌ನವರು ಇಳಿದುಕೊಳ್ರೀ’ ಎಂದು ಕಂಡಕ್ಟರ್ ಕೂಗಿದ್ದನ್ನು ಕೇಳಿದ ಚಂದ್ರಶೇಖರ ಸೀಟಿನಿಂದ ಮೇಲೆದ್ದ. ಬಸ್ಸಿನಿಂದ ಇಳಿದು ಆಚೀಚೆ ನೋಡಿ ಭಟ್ಟರ ಮನೆ ದಾರಿ ಯಾರನ್ನು ಕೇಳುವುದು ಎಂದು ನೋಡುತ್ತಿದ್ದ. ಅಷ್ಟರಲ್ಲೇ ಬಸ್ಸಿನೊಳಗಿಂದ ಆ ಹೆಂಗಸು ಹಿಡಿರೀ ಹಿಡಿರೀ ಎಂದು ಕೂಗಿಕೊಂಡದ್ದನ್ನು ಇತ ಕೇಳುತ್ತಾನೆ. ಯಾಕೆ ಎಂದು ಯೋಚಿಸುವಷ್ಟರಲ್ಲಿ ಕೊ ಕ್ಕೊ ಕ್ಕೋ... ಎನ್ನುತ್ತ ಕೋಳಿಯೊಂದು ಈತನ ತಲೆಯನ್ನು ಸವರಿ ಹಾರಿಹೋಯ್ತು. ಅದರ ಹಿಂದೆಯೇ ಅದೇ ಕೆದರಿದ ಕೂದಲ ಹೆಂಗಸು ಹಿಡ್ಕೋಳಿ ಹಿಡ್ಕೋಳಿ ನನ್ನ ಕೋಳಿ ಹಾರ್‌ಹೋಯ್ತು ಎಂದು ಕೂಗುತ್ತಾ ತಡಬಡಿಸಿ ಬಸ್ಸಿಳಿಯಲು ಹೆಣಗುತ್ತಿದ್ದಳು. ಬಸ್ಸಿಳಿದು ನಿಂತ ಚಂದ್ರಶೇಖರನಲ್ಲಿ ಅದೆಲ್ಲಿತ್ತೋ ಉಮೇದು ಕೋಳಿಯ ಹಿಂದೆ ಓಡತೊಡಗಿದ. ಕೋಳಿ ಓಡಿ ಓಡಿ ಸುಸ್ತಾಗಿ ವಿಶಾಲ ಬಯಲಿನ ಮಧ್ಯೆ ನಿಂತಿತು. ಈತ ಬಾ ಬಾ ಬಾ ಎನ್ನುತ್ತ ಕಾಲಿ ಕೈಯಲ್ಲಿ ಕಾಳು ಹಿಡಿದವನಂತೆ ನಟಿಸುತ್ತ ಕೋಳಿಯನ್ನು ಹಿಡಿದುಕೊಂಡ. ಅವನ ಹಿಂದೆ ಓಡಿ ಬಂದ ಹೆಂಗಸು ಈತನಿಂದ ಕೋಳಿಯನ್ನು ತೆಗೆದುಕೊಂಡು ಆತ ಕೋಳಿಯನ್ನು ಹಿಡಿಯುವ ಹುಮ್ಮಸ್ಸಿನಲ್ಲಿ ಬಿಟ್ಟು ಓಡಿ ಬಂದಿದ್ದ ಚೀಲವನ್ನು ಕೊಟ್ಟು ಸಣ್ಣ ಹುಡುಗಿಯಂತೆ ನಾಚಿ ನಕ್ಕಳು. ಏನೋ ಅದ್ಭುತವಾದುದನ್ನು ಸಾಧಿಸಿದೆ. ಊರಿಗೆ ಕಾಲಿಡುತ್ತಲೇ ಒಂದು ಜಯ ಸಿಕ್ಕಿತು, ಇನ್ನು ನಾಟಕ ಚೆನ್ನಾಗಾಗುವುದಂತು ಗ್ಯಾರಂಟಿ ಎಂದು ಚಂದ್ರಶೇಖರ ಅಂದುಕೊಂಡ. ವೆಂಕಟ್ರಮಣ ಭಟ್ರ ಮನೆ ವಿಳಾಸವನ್ನು ಅವಳಲ್ಲೇ ಕೇಳಿದರಾಯ್ತು ಎಂದುಕೊಳ್ಳುವುದರೊಳಗಾಗಿ ಆಕೆ ಅಷ್ಟು ದೂರ ಹೋಗಿಯಾಗಿತ್ತು. ಅವಳೆಲ್ಲಿ ಮೊದಲೇ ಹೋಗಿ ವೆಂಕಟ್ರಮಣ ಭಟ್ಟರಲ್ಲಿ ಮಾಯಮ್ಮನ ನೋಡೋಕೆ ಯಾರೋ ಗಂಡು ಬರ‍್ತಾ ಇದ್ದಾರೆ ಎಂದು ಹೇಳಿ ಬಿಡುವಳೋ ಎಂದು ಇವನಿಗೆ ಕ್ಷಣ ಭಯವಾಯ್ತು.

ರಸ್ತೆ ದಾಟಿ ಆಚೆ ಇರುವ ಕಿರಾಣಿ ಅಂಗಡಿಯಲ್ಲಿ ಭಟ್ಟರ ಮನೆ ದಾರಿ ಕೇಳಿದರಾಯ್ತು ಎಂದು ಅಲ್ಲಿಂದ ಹೊರಟ. ಕಿರಾಣಿ ಅಂಗಡಿಯಲ್ಲಿ ಒಂದು ಸಿಗರೇಟು ಕೊಂಡು ಅವರಲ್ಲಿ ಇನ್ನೇನು ವೆಂಕಟ್ರಮಣ ಭಟ್ರ ಮನೆ ವಿಳಾಸ ಕೇಳಬೇಕು ಎಂದುಕೊಳ್ಳುವಷ್ಟರಲ್ಲೇ ಅಂಗಡಿಯಾತ ‘ವೆಂಕಟ್ರಮಣ ಭಟ್ರ ಮನೆ ದಾರಿ ಕೇಳೋಕೆ ಯೋಚನೆ ಮಾಡ್ತಾ ಇದಿರೋ’ ಎಂದು ನಗುತ್ತ ಕೇಳಿದ. ಚಂದ್ರಶೇಖರನಿಗೆ ಆಶ್ಚರ್ಯದ ಜೊತೆಗೆ ಈ ಊರಲ್ಲಿ ಭಟ್ರ ಪಾಪ್ಯುಲಾರಿಟಿ ಬಗ್ಗೆ ಹೆಮ್ಮೆ ಎನಿಸಿತು. ಸ್ನೇಹಿತ ಹೇಳಿದಂತೆ ವೆಂಕಟ್ರಮಣ ಭಟ್ರು ಈ ಊರಿನ ಎಲ್ಲರಿಗೂ ಪರಿಚಯವಿರುವಂತಹ ದೊಟ್ಟ ಮನುಷ್ಯರೇ ಇರಬಹುದು. ಆದರೇ ಅಂಗಡಿಯವನ್ಯಾಕೆ ಅದನ್ನು ವ್ಯಂಗ್ಯ ನಗುವಿನ ದಾಟಿಯಲ್ಲಿ ಕೇಳಿದ ಎಂಬುದು ಆತನಿಗೆ ತಿಳಿಯಲಿಲ್ಲ.

ಭಟ್ರ ಮನೆ ಹಾದಿ ಕೇಳಿ ಹೊರಟವನಿಗೆ ಮೊದಲು ಸಿಕ್ಕಿದ್ದು ಹರಿಜನರ ಕೇರಿ. ಕೇರಿ ದಾಟುತ್ತಲೇ ಎಲ್ಲ ಗುಡಿಸಲುಗಳನ್ನು ನುಂಗಿ ಹಾಕುವಂತೆ ಕಾಣುತ್ತಿತ್ತು ವಿಶಾಲವಾದ ಮನೆ. ಏನೊಂದು ವಿಚಾರಿಸದೆ ಖಾತ್ರಿಗೊಂಡವನಂತೆ ಆ ಮನೆಯ ಕಡೆ ಹೆಜ್ಜೆ ಹಾಕಿದ. ಮಾಯಮ್ಮನ ನೊಡೋಕೆ ಬಂದಿರೋ ಗಂಡೋ ನೀವು? ಎಂದು ಯಾರೋ ಕೂಗಿದಂತಾಯ್ತು. ಆಚೀಚೆ ನೋಡಿದ ಯಾರೂ ಕಾಣಲಿಲ್ಲ. ತನ್ನ ಭ್ರಾಂತಿಗೆ ತಾನೇ ನಗುತ್ತ. ಹೇಗಿರಬಹುದು ಮಾಯಾ? ಎಂದು ಯೋಚಿಸುತ್ತ ದೊಡ್ಡ ಮನೆಯ ಎದುರು ಬಂದು ನಿಂತ.

ಅಡಿಕೆ ಮರಗಳ ಕಂಬಗಳನ್ನು ನಿಲ್ಲಿಸಿ ಮೇಲೆ ಅಡಿಕೆಯ ದಬ್ಬೆ ಹೊದೆಸಿ ಮಾಡಿದ ಚಪ್ಪರವಿರುವ ದೊಡ್ಡ ಅಂಗಳದಲ್ಲಿ ಬಂದು ನಿಂತಾಗ ಅಲ್ಲಿ ಯಾರೂ ಕಾಣಲಿಲ್ಲ. ಎತ್ತರದ ಹಜಾರದ ಮೆಟ್ಟಿಲು ಹತ್ತಿ ಕಡುಗಪ್ಪು ಬೀಟೆಯ ಮರದಿಂದ ಮಾಡಿದ ದೊಡ್ಡ ಬಾಗಿಲಿಗೆ ಇದ್ದ ಚಿಲಕವನ್ನು ಬಡಿದು, ಒಂದೆರಡು ಸಲ ಸದ್ದು ಮಾಡಿ ಕಾಯುತ್ತಿದ್ದ. ಕೆಲವು ನಿಮಿಷಗಳಾದರೂ ಯಾರೂ ಬಾಗಿಲು ತೆಗೆಯುವ ಲಕ್ಷಣ ಕಾಣಲಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿ ಸುಮ್ಮನಾಗುವ ಬದಲು ಭಟ್ರೇ... ಎಂದು ಕೂಗಿದ. ಮಾಯಾ ಬಂದು ಬಾಗಿಲು ತೆಗೆಯಬಹುದು ಎಂದು ಕಲ್ಪಿಸಿಕೊಂಡ. ಮಾಯಾ ಎಂದು ಕೂಗಲೇ? ಎಂದು ಕ್ಷಣ ಯೋಚಿಸಿದ. ಬಂದೆ ಬಂದೆ ಎಂದು ಗಂಡು ಧ್ವನಿ ಅದ್ಯಾವುದೋ ತುದಿಯಿಂದ ಕೂಗಿದಂತಾಯ್ತು. ಕೆಲ ಕ್ಷಣಗಳ ನಂತರ ಯಾರದೂ? ಎಂದು ಪ್ರಶ್ನಿಸುತ್ತ ಗಂಡು ಜೀವವೊಂದು ಬರುತ್ತಿರುವುದನ್ನು ಈತನ ಕಿವಿ ಗಮನಿಸಿತು. ವ್ಯಕ್ತಿ ಹತ್ತಿರ ಬರುತ್ತಿರುವುದನ್ನು ಈತ ಆ ಧ್ವನಿ ದೊಡ್ಡದಾಗುವುದರಿಂದ ಗುರುತಿಸಿದ. ಮಾಯಾ ಜೊತೆಗಿರಬಹುದೇ? ಅಥವಾ ಬಾಗಿಲ ಮರೆಯಲ್ಲಿ ನಿಂತು ನನ್ನ ಕದ್ದು ನೋಡಬಹುದೇನೋ ಎಂದುಕೊಂಡ. ಅಥವಾ ಆ ಹೆಂಗಸು ಬಂದು ಹೇಳಿರಬಹುದೇನೋ? ಸೀರೆ ಗೀರೆ ಉಟ್ಟುಕೊಂಡು ತಯಾರಾಗುತ್ತಿರಬಹುದು. ಹಾಗೆನಾದ್ರೂ ಆಗಿದ್ರೇ ನಾನು ಏನು ಮಾಡುವುದು ಎಂದು ಯೋಚಿಸಿದ.

ಬಾಗಿಲು ಕಿರ್ ಎಂದು ಶಬ್ಧ ಮಾಡುತ್ತ ತೆರೆದುಕೊಂಡಿತು. ತಲೆಗೆ ರುಮಾಲು ಸುತ್ತಿದ್ದ ಬೆಳ್ಳಂ ಬಿಳಿ ಬಣ್ಣದ ದೇಹವೊಂದು ಇಣುಕಿ ನೋಡಿತು. ಇವರೇ ವೆಂಕಟ್ರಮಣ ಭಟ್ರು ಇರಬಹುದೋ ಎಂದು ಈತ ಯೋಚಿಸುವುದನ್ನು ಗಮನಿಸಿದ ವ್ಯಕ್ತಿ ‘ಯಾರು ನೀವು, ಏನಾಗಬೇಕಿತ್ತು?’ ಎಂದು ಪ್ರಶ್ನೆ ಎಸೆದು ನೋಡುತ್ತ ಕುಳಿತಿತು. ಅವರ ಮುಖದಲ್ಲಿದ್ದ ಆಶ್ಚರ್ಯ ಹಾಗೂ ಕುತೂಹಲ ಗಮನಿಸಿದ ಚಂದ್ರಶೇಖರ ಆ ಹೆಂಗಸು ಇವರಿಗೆ ಏನೂ ಹೇಳಲಿಲ್ಲ ಎಂಬುದನ್ನು ಊಹಿಸಿದ. ಆದರೂ ತಾನು ಯೋಚಿಸಿದಂತೆ ನಡೆದರೆ ನಾನು ಮಾಯಾಳನ್ನು ಮದುವೆಯಾಗುವುದು ಗ್ಯಾರಂಟಿಯಲ್ಲವೇ ಎಂದುಕೊಂಡು ನಿಂತಲ್ಲೇ ಆಚೀಚೆ ಮಾಯಾ ಕಾಣಬಹುದೋ ಎಂದು ಗಮನಿಸಿದ.

ಚಂದ್ರಶೇಖರ ತನ್ನ ಹೆಸರು ಮತ್ತು ಅವರ ಪರಿಚಯದ ರಾಮಚಂದ್ರನ ಕುರಿತು ತಿಳಿಸಿ. ತಾನು ನಾಟಕದ ಮಾಸ್ತರು ಎಂಬುದನ್ನು ಹೇಳಿ, ವೆಂಕಟ್ರಮಣ ಭಟ್ರು... ಎಂದು ರಾಗವೆಳೆದ. ಅವನ ಈ ಸಂಶಯ ಕಂಡ ಎದುರು ನಿಂತ ಆಕೃತಿ ನಾನೇ ವೆಂಕಟ್ರಮಣ ಭಟ್ಟ ಎಂದು ಅವನ ಸಂಶಯವನ್ನು ಬಗೆಹರಿಸಿತು. ‘ನೀವು ಬಂದಿದ್ದು ಒಳ್ಳೆದಾಯ್ತು. ರಾಮಚಂದ್ರನೇ ಕರೆದುಕೊಂಡು ಬರ‍್ತಾನಂತ ಅಂದುಕೊಂಡಿದ್ದೆ. ದಾರಿಯಲ್ಲಿ ಏನು ತೊಂದ್ರೆ ಆಗಿಲ್ಲವಲ್ಲ? ಬನ್ನಿ ಒಳಗೆ’ ಎಂದು ಕರೆದು ಅವರು ಮನೆಯೊಳಗೆ ನಡೆದರು.

ಬೀಟೆ ಮರದಿಂದ ಮಾಡಿದ ಹೆಬ್ಬಾಗಿಲಿನಿಂದ ಒಳಗೆ ಕಾಲಿಡುತ್ತಲೇ ಕೆಲವು ಹೆಜ್ಜೆಗಳ ನಂತರ ಗವ್ವೆನ್ನುವ ಕತ್ತಲು ಕಣ್ಣಿಗೆ ಅಡರಿಕೊಂಡಿತು. ಮುಂದೆ ಎಲ್ಲಿ ಕಾಲಿಡಬೇಕು ಎಂದು ಗೊತ್ತಾಗದೇ ಚಂದ್ರಶೇಖರ ಅಲ್ಲೇ ನಿಂತು ಮುಂದಿನ ದಾರಿ ಕಾಣಬಹುದೋ ಎಂದು ಕಾಯುತ್ತಿದ್ದ. ಒಳಗೆ ಕತ್ತಲಲ್ಲಿ ಲೀನವಾದ ಭಟ್ಟರು ಈತ ಬರದಿರುವುದರಿಂದ ಮತ್ತೆ ವಾಪಸು ಬಂದರು. ಅವರು ಬರುವುದನ್ನು ಹೆಜ್ಜೆ ಸದ್ದಿನಿಂದ ತಿಳಿದ ಈತ ಹೆಜ್ಜೆ ಕಿತ್ತಿಟ್ಟ, ಕತ್ತಲಿಂದ ಮುಂದಿರುವುದು ಕಾಣದ್ದರಿಂದ ಬಾಗಿಲ ಚೌಕಟ್ಟಿಗೆ ದಡಾರನೆ ತಲೆ ಬಡಿಸಿಕೊಂಡ.

ಅಷ್ಟರಲ್ಲೇ ಬಂದ ಭಟ್ಟರು ‘ಅಯ್ಯೋ ತಲೆಗೆ ತಾಗಿತೊ? ಬಗ್ಗಿ ಬನ್ನಿ, ಕತ್ತಲಿದೆ. ಕತ್ತಲು ನಮಗೆ ರೂಡಿಯಾಗಿದೆ’ ಎಂದು ಮುಂದೆ ನಡೆದರು. ಚಂದ್ರಶೇಖರನಿಗೆ ತಾನೆಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿಯಲಿಲ್ಲ. ಅಲ್ಲಲ್ಲಿ ಮಣ್ಣ ಗೋಡೆಯ ಕಂಡಿಯಿಂದ ಬರುವ ಬೆಳಕು ಬಿಟ್ಟರೆ ಅಲ್ಲಿ ನಡು ಹಗಲಿನಲ್ಲೂ ಘೋರ ಕತ್ತಲಿತ್ತು. ಬಾಗಿಲು ಬಂದಾಗೆಲ್ಲಾ ತಡವರಿಸಿ ತಡವರಿಸಿ ತಲೆಯನ್ನು ಆದಷ್ಟು ಬಗ್ಗಿಸಿ ಅವರ ಹಿಂದೆ ಹಿಂದೆ ನಡೆಯತೊಡಗಿದ. ಭಟ್ಟರು ಮುಂದೆ ಹೋಗಿದ್ದರು. ಈತ ಕತ್ತಲಲ್ಲಿ ಕವಣೆ ಬೀಸಿದಂತೆ ನಡೆಯುತ್ತಿದ್ದ. ಅದೆಷ್ಟನೇ ಕೋಣೆಯೋ? ಕೋಣೆಯ ಮೂಲೆಯಿಂದ ಯಾರೋ ಗೆಜ್ಜೆ ಸದ್ದು ಮಾಡುತ್ತ ಅವನ ಹಿಂದಿನಿಂದ ಹೊರಗೆ ಓಡಿ ಹೋದಂತಾಯ್ತು. ಇಲ್ಲಿಯವರೆಗೆ ಧೈರ್ಯದಿಂದ ಹೆಜ್ಜೆ ಹಾಕಿದವನಿಗೆ ಒಮ್ಮೆಗೆ ಭಯ ಎನಿಸಿತು. ತಕ್ಷಣ ಅವನಿಗೆ ಮಾಯಾ ನೆನಪಾದಳು. ಸದ್ದು ಹೋದ ದಾರಿಯಲ್ಲಿ ತಿರುಗಿ ನೋಡಿದ. ಕತ್ತಲೋ ಕತ್ತಲು, ತಾನೆಲ್ಲಿದ್ದೇನೆ ಎಂಬುದೇ ಈತನಿಗೆ ತಿಳಿಯಲಿಲ್ಲ. ಮುಂದೆ ನಡೆದ ಭಟ್ಟರು ಎಲ್ಲಿ ಹೋದರೋ? ತಾನು ಈ ಕತ್ತಲ ಕೂಪದಿಂದ ಹೇಗೆ ಹೊರ ಹೋಗುವುದು ಎಂಬ ಯೋಚನೆಯಲ್ಲಿ ಮುಳುಗಿದ. ತಡಬಡಾಯಿಸಿ ಆದಷ್ಟು ಭಟ್ಟರ ಸಮೀಪಕ್ಕೆ ಹೋಗಲು ಹವಣಿಸಿದ. ಆದರೂ ಹೆಜ್ಜೆ ಕಿತ್ತಿಡುವುದು ಕಷ್ಟವಾದಾಗ ಭಟ್ರೇ... ಎಂದು ಕೂಗಿದ. ಅದೆಲ್ಲಿಂದಲೋ ಕತ್ತಲ ಒಳಗಿಂದ ಎಲ್ಲಿದ್ದೀರಿ ಮಾಸ್ತರೇ? ಇಲ್ಲಿ ಬನ್ನಿ ಹೀಗೆ ಎಂದು ಧ್ವನಿಯೊಂದು ಕರೆದಂತಾಯ್ತು. ಈತನಿಗೆ ತನಗೆ ಮಾತ್ರ ಕಾಣುತ್ತಿಲ್ಲವೋ ಅಥವಾ ಈ ಮನೆಯ ಒಳಗೇ ಹೀಗಿದೆಯೋ ಎಂಬ ಗೊಂದಲ ಉಂಟಾಯ್ತು.

ಕ್ಷಣ ಸುಮ್ಮನೆ ನಿಂತು ಕತ್ತಲಲ್ಲಿರುವ ಬೆಳಕನ್ನು ಗುರುತಿಸಲು ಸಮಯ ಮಾಡಿಕೊಟ್ಟ. ಸ್ವಲ್ಪ ಸಮಯದ ನಂತರ ಅಲ್ಲೆಲ್ಲೋ ದೂರದಲ್ಲಿ ಸಣ್ಣಗೆ ಬೆಳಕು ಬರುತ್ತಿರುವಂತೆ ಕಾಣಿಸತೊಡಗಿತು. ಬೆಳಕು ಕಂಡ ಕಡೆಗೆ ಸರಸರ ಹೆಜ್ಜೆ ಹಾಕಿದ. ಕತ್ತಲ ಕೋಣೆಗಳನ್ನು ದಾಟಿಕೊಂಡು ಬೆಳಕಿರುವ ಕೊನೆಯ ಕೋಣೆಗೆ ಬಂದು ತಲುಪಿದ. ಭಟ್ಟರು ಹಿತ್ತಿಲಲ್ಲಿ ಒಣಗಿಸಿದ ಕಾಳು ಮೆಣಸಿನಲ್ಲಿ ಕಾಲಾಡಿಸುತ್ತ ನಿಂತಿದ್ದರು.

ಈತ ಬರುವುದನ್ನೇ ಕಾಯುತ್ತಿದ್ದವರಂತಿದ್ದ ಭಟ್ಟರು ‘ನನಗೆ ಈ ನಾಟಕ ಗೀಟಕದ ಹುಚ್ಚಿಲ್ಲ ನೋಡಿ. ಅದೇನೋ ನಮ್ಮೂರಿನ ಹೆಂಗಸರ ತಲೆಯಲ್ಲಿ ಆ ರಾಮಚಂದ್ರ ಹುಳಬಿಟ್ಟು ಹೋಗಿದ್ದಾನೆ. ಊರ ಹೆಂಗಸರೆಲ್ಲ ನಾಟಕ ನಾಟಕ ಅಂತ ಒಂದೇ ಸಮನೆ ಒತ್ತಾಯ ಮಾಡಿದ್ದರಿಂದ ಊರ ಹಿರಿಯನಾದ ನಾನು ನಿಮ್ಮನ್ನು ಕರೆಸುವಂತಾಯ್ತು. ಅದಿರಲಿ ಒಳಗಿನ ಕತ್ತಲೆಗೆ ಹೆದರಿಕೊಂಡಿರೋ?’ ಎಂದು ಪ್ರಶ್ನೆ ಎಸೆದು ಒಣಗಿಸಿದ ಕಾಳು ಮೆಣಸಿನ ಬೀಜದಲ್ಲಿ ಕಾಲಾಡಿಸಿ ಬೆರಳಿನಿಂದ ಕಸ ತೆಗೆದು ಎಸೆಯತೊಡಗಿದರು. ‘ಇಲ್ಲಾ, ಹೆದರಿಕೆಯೇನೂ ಆಗಲಿಲ್ಲ, ಆದರೆ ಹೊರಗೆ ದಾರಿಯೆಲ್ಲಿದೆ ಎಂದು ತಿಳಿಯದೇ ಕ್ಷಣ ಗೊಂದವಾಯ್ತು.’ ಎಂದು ಈತ ಹೇಳಿದ್ದನ್ನು ಅವರು ಕೇಳಿಸಿಕೊಂಡಂತಿರಲಿಲ್ಲ.

ಚಂದ್ರಶೇಖರನ ಮಾತಿಗೆ ಯಾವ ಪ್ರತಿಕ್ರಿಯೆಯೂ ನೀಡದೆ ಭಟ್ಟರು ‘ಇಲ್ಲೇ ಹಿಂದೆ ನಮ್ಮ ಹಿತ್ತಿಲು ಮನೆ ಇದೆ. ಗಾಳಿ ಬೆಳಕು ಸಾಕಷ್ಟು ಬರುವಂತ ಮನೆ ಅದು. ನೀವು ನಮ್ಮೂರಲ್ಲಿ ಇರುವಷ್ಟು ದಿನ ಅಲ್ಲಿರಬಹುದು. ಊಟ ತಿಂಡಿಗೆಲ್ಲ ಇಲ್ಲೇ ಪಕ್ಕದಲ್ಲಿರುವ ಪೂಜಾರಿಯ ಹೋಟೆಲಿಗೆ ಹೇಳುತ್ತೇನೆ. ನಿಮಗೆ ಊಟ ಮಾಡಬೇಕೆನಿಸಿದಾಗ ಅಲ್ಲಿ ಹೋಗಿ ಊಟ ಮಾಡಬಹುದು. ಬನ್ನಿ ಹಿತ್ತಿಲ ಮನೆ ತೋರಿಸ್ತೀನಿ’ ಎಂದು ಪಕ್ಕದಲ್ಲಿದ್ದ ಚಪ್ಪಲಿ ಮೆಟ್ಟಿ ನಡೆಯತೊಡಗಿದರು. ಚಪ್ಪಲಿಯನ್ನು ಮನೆಯ ಎದುರಗೇ ಬಿಟ್ಟು ಬಂದಿದ್ದ ಚಂದ್ರಶೇಖರ ಹಾಗೇ ನಡೆಯತೊಡಗಿದ. ಭಟ್ರು ತಮ್ಮ ಸಂಸಾರದ ಬಗ್ಗೆ ಏನೂ ಹೇಳುತ್ತಿಲ್ಲವಲ್ಲ ಎಂದು ಯೋಚಿಸುತ್ತ ನಡೆಯುತ್ತಿದ್ದವನ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು. ಅಮ್ಮಾ ಎಂದು ಈತ ಕೂಗಿದ್ದ ಕಂಡು ಭಟ್ಟರು ಹಿಂದೆ ತಿರುಗಿದರು. ‘ಅಯ್ಯೋ ಮುಳ್ಳು ಕಪ್ಪಿತೋ? ನಾನೆಂತ ದಡ್ಡ ನೋಡ್ರಿ, ನಿಮ್ಮನ್ನು ಹಂಗೆ ಹೊರಗಿನಿಂದಲೇ ಹಿಂದಿನ ಮನೆಗೆ ಕರೆದುಕೊಂಡು ಬರಬಹುದಾಗಿತ್ತು. ನಾನು ಕಡೆಗೆ ಆಳಿನ ಕೈಯಲ್ಲಿ ಚಪ್ಪಲಿಯನ್ನು ಕಳುಹಿಸುತ್ತೇನೆ. ನೀವು ನಿಧಾನ ಬನ್ನಿ. ಒಳ್ಳೇದೆ ಆಯ್ತು ನಿಮ್ಮನ್ನು ಮನೆಯೊಳಗಿಂದ ಕರೆದುಕೊಂಡು ಬಂದಿದ್ದು. ನಮ್ಮ ಮನೆಯೊಳಗಿನ ಕತ್ತಲ ಪರಿಚಯ ಆದಂಗಾಯ್ತು’ ಎಂದು ನಕ್ಕರು. ಚಂದ್ರಶೇಖರ ಕಾಲಿಗೆ ಚುಚ್ಚಿದ್ದ ಮುಳ್ಳನ್ನು ತೆಗೆದೆಸೆಯುವಾಗ ಪಕ್ಕನೆ ಈತನಿಗೆ ಬಸ್ಸಿನಲ್ಲಿ ಆ ಹೆಂಗಸು ಹೇಳಿದ ಮಾಯಾ ನೆನಪಾದಳು. ಭಟ್ಟರಲ್ಲಿ ಕೇಳಿ ಬಿಡಲೇ ಎಂದು ಯೋಚಿಸಿ ಮುಂದೆ ಹೋಗುತ್ತಿದ್ದ ಅವರ ಸನಿಹಕ್ಕೆ ಹೋಗಲು ಜೋರಾಗಿ ನಡೆಯತೊಡಗಿದ. ಭಟ್ಟರ ಸನಿಹ ಹೋಗುತ್ತಲೇ ‘ಮನೆಯಲ್ಲಿ ಯಾರೂ ಕಾಣಲಿಲ್ಲ, ಒಬ್ಬರೇ ಇರುವುದೋ?’ ಎಂದು ಪ್ರಶ್ನೆ ಎಸೆದು ಅವರತ್ತ ನೋಡಿದ. ಯಾವುದೋ ಗಹನ ಆಲೋಚನೆಯಲ್ಲಿ ಸುಮ್ಮನೆ ಮುಂದೆ ನಡೆಯುತ್ತಿದ್ದ ಅವರಿಂದ ಯಾವ ಉತ್ತರವೂ ಬರಲಿಲ್ಲ. ಕೇಳಬಾರದಿತ್ತೇನೋ ಎಂದುಕೊಂಡು ಅವರ ಜೊತೆ ಸುಮ್ಮನೆ ನಡೆದ.

ಚಂದ್ರಶೇಖರನ ಪ್ರಶ್ನೆಯ ನಂತರ ಒಂದೂ ಮಾತನಾಡದ ಭಟ್ಟರು ಹಿತ್ತಿಲ ಮನೆಯ ಬೀಗ ಹಾಕಿಲ್ಲದ ಬಾಗಿಲನ್ನು ಸರಿಸುತ್ತ. ‘ಇದೇ ನೋಡ್ರಿ ನಮ್ಮ ಹಿತ್ತಿಲ ಮನೆ. ಆಗಾಗ ನಮ್ಮ ಕೆಲಸದವರು ಇಲ್ಲಿ ಉಳಿದುಕೊಳ್ಳುವುದುಂಟು.’ ಎಂದು ನಕ್ಕದ್ದು ಈತನಿಗೆ ನಿರಾಳವೆನಿಸಿತ್ತು. ನಾನು ಕೇಳಿದ ಪ್ರಶ್ನೆ ಇವರಿಗೆ ಸಿಟ್ಟು ತರಿಸಲಿಲ್ಲವಲ್ಲ ಸಧ್ಯ ಎಂದುಕೊಂಡ. ಸಾಕಷ್ಟು ಬೆಳಕಿರುವ ಹಾಗೂ ಈಗಿನ ಜಮಾನಾದ್ದು ಎನಿಸುವಂತಹ ವಾಸ್ತು ಇರುವ ಸಣ್ಣ ಚೊಕ್ಕದಾದ ಮನೆ ಅದು. ಭಟ್ಟರು ಅಲ್ಲೇ ಇರುವ ಖುರ್ಚಿಯಲ್ಲಿ ಕೂತು ಚಂದ್ರಶೇಖರನಿಗೆ ‘ಇಲ್ಲೇ ಹಿಂದೆ ಸ್ನಾನದ ಮನೆ ಇದೆ. ಹಿತ್ತಿಲ ಬಾಗಿಲ ದಾಟಿ ಹೋದರೆ ಅಲ್ಲೇ ಕಕ್ಕಸು ಮನೆ. ನೀವು ಸುಧಾರಿಸಿಕೊಂಡು ಊಟಕ್ಕೆ ಹೊರಡಿ. ಯಾವುದಕ್ಕೂ ಸಂಕೋಚ ಮಾಡಿಕೊಳ್ಳಬೇಡಿ. ನಾನು ಹೋಗಿ ಪೂಜಾರಿ ಹೋಟೆಲ್‌ಗೆ ಹೇಳಿ ಬರುತ್ತೇನೆ. ನಾಟಕದ ಕನಸು ಕಾಣುತ್ತಿರುವ ನಮ್ಮ ಮಹಿಳಾ ಮಂಡಳದವರಿಗೂ ಹೇಳಿ ಬರುತ್ತೇನೆ. ನಾಳೆ ಸಂಜೆ ಅವರೆಲ್ಲರನ್ನೂ ಸಭೆ ಸೇರಲು ಹೇಳುತ್ತೇನೆ’ ಎಂದರು. ಈತ ಆಯ್ತು ಎಂದು ಹೇಳಿದ್ದನ್ನು ಅವರು ಕೇಳಿದರೋ ಇಲ್ಲವೋ. ಎದ್ದು ‘ನೀವು ಸುಧಾರಿಸಿಕೊಳ್ಳಿ ನಾನು ಸಂಜೆ ಸಿಗುತ್ತೇನೆ’ ಎಂದು ಹೊರಟರು. ಭಟ್ಟರು ತಮ್ಮ ಸಂಸಾರದ ಬಗ್ಗೆ ಕೇಳಿದರೂ ಏನು ಹೇಳಲಿಲ್ಲವಲ್ಲ. ಮಾಯಾ ಇಲ್ಲೆಲ್ಲಾದ್ರೂ ಕಾಣಬಹುದೋ ಎಂದು ಅತ್ತಿತ್ತ ಹುಡುಕುವಂತೆ ಚಂದ್ರಶೇಖರ ತೋಟದ ಮರದ ಸಾಲಿನಲ್ಲೆಲ್ಲ ಕಣ್ಣಾಡಿಸಿದ.

ಮನೆಯನ್ನೆಲ್ಲ ಒಮ್ಮೆ ಅವಲೋಕಿಸಿದ ಚಂದ್ರಶೇಖರ ಮುಖ ತೊಳೆದು ಗೋಡೆಯಲ್ಲಿ ನೇತಾಡುತ್ತಿರುವ ಕನ್ನಡಿಯೊಳಗೆ ಇಣುಕಿದಾಗ ಅಲ್ಲಿ ಅಂಟಿಸಿದ್ದ ಕೆಂಪು ಬಿಂದಿ ಕಂಡಿತು. ಮನಸೊಳಗಿದ್ದ ಮಾಯಾ ದುತ್ತನೆ ಎದುರು ನಿಂತಂತೆ ಆತನಿಗೆ ಎನಿಸಿತು. ಈ ಕನ್ನಡಿಯೊಳಗೆ ಅವಳ ಮುಖ ಹೇಗೆ ಕಾಣಬಹುದು ಎಂದು ಕಲ್ಪಿಸಿಕೊಂಡ. ಅವಳೆಲ್ಲಾದರೂ ಕುತೂಹಲದಿಂದ ಹಿತ್ತಿಲ ಮನೆಯಲ್ಲಿರುವ ನನ್ನ ನೋಡಲು ಬರಬಹುದೇ ಎಂದು ಕಿಡಕಿಯಲ್ಲಿ ಇಣುಕಿಣುಕಿ ನೋಡಿದ. ಅವೆಲ್ಲ ಯೋಚನೆಯ ನಡುವೆ ಭಟ್ಟರೇಕೆ ಅವರ ಸಂಸಾರದ ವಿಷಯ ಹೇಳಲಿಲ್ಲ. ಮಾಯಾ ತುಂಬ ಸುಂದರಿಯೇ ಇರಬೇಕು. ಭಟ್ಟರು ಪರಿಚಯಿಸಿಕೊಟ್ಟಿದ್ದರೆ ನನ್ನ ನಾಟಕದಲ್ಲಿ ಅವಳಿಗೊಂದು ಪಾತ್ರ ನೀಡಬಹುದಿತ್ತು ಎಂದುಕೊಂಡ. ತನ್ನ ಕಾಲೇಜು ದಿನಗಳ ಕನಸು ಇನ್ನೇನು ನನಸಾಗೇ ಬಿಟ್ಟಿತು ಎಂದು ಸುಮ್ಮಸುಮ್ಮನೆ ಖುಷಿಯಾದ.

ಆದರೂ ಮನಸೊಳಗೆ ಹೊಕ್ಕ ಮಾಯಾ ಹೊರಬರಲೇ ಇಲ್ಲ. ಕೈಕಾಲು ತೊಳೆದುಕೊಂಡು ಮನೆಯ ಕಿಡಕಿಯ ಹತ್ತಿರ ಇದ್ದ ಆರಾಮ ಖುರ್ಚಿಯಲ್ಲಿ ಕುಳಿತುಕೊಂಡ. ಬಹಳ ಹೊತ್ತಿನವರೆಗೆ ಕಿಡಕಿಯ ಆಚೆ ಕಾಣುವ ಭಟ್ಟರ ಮುಖ್ಯ ಮನೆಯ ಬಾಗಿಲನ್ನೇ ನೋಡುತ್ತ ಕುಳಿತ. ಅವಳೆಲ್ಲಾದರೂ ಹೊರಗೆ ಬರಬಹುದೋ ಎಂದು ಕಾಯ್ದ. ಒಮ್ಮೆ ಇದೇನು ಹುಚ್ಚು ನನಗೆ ಅವಳ್ಯಾರೋ ಬಸ್ಸಿನಲ್ಲಿ ಹೇಳಿದಳು ಎಂದು ನಾನು ಇಷ್ಟೆಲ್ಲಾ ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದುಕೊಂಡು, ಊಟಕ್ಕಾಗಿ ಭಟ್ಟರು ಹೇಳಿದ ಪೂಜಾರಿ ಹೋಟೆಲ್ ಹುಡುಕಿ ಹೊರಟ.

ಅಷ್ಟರಲ್ಲಾಗಲೇ ಊರ ತುಂಬೆಲ್ಲಾ ನಾಟಕದ ಮಾಸ್ತರು ಬಂದ ಸುದ್ದಿ ಹರಡಿತ್ತು. ‘ಸಿದ್ದಾಪುರದಿಂದ ಮಾಸ್ತರೊಬ್ಬರು ಮಯಿಳಾ ಮಂಡಳದ ಹೆಂಗಸರಿಗೆ ನಾಟಕ ಕಲ್ಸಾಕೆ ಬಂದಾರಂತೆ. ನಮ್ಮ ಹೆಂಗಸರು ಅವನಹತ್ರ ನಾಟಕ ಕಲಿಬೇಕಾ’ ಎಂದು ಊರ ಹಳೆ ಕುಡುಕರೆಲ್ಲ ಪೆಟ್ಟಿಗೆ ಅಂಗಡಿಗಳಲ್ಲಿ ಬಿದಿರು ಮಟ್ಟಿಯ ಪಕ್ಕದ ಕಳ್ಳಬಟ್ಟಿ ಮಾರುವವನ ಸುತ್ತ ಕುಳಿತು ಮಾತನಾಡತೊಡಗಿದರು. ಏರು ಮಧ್ಯಾಹ್ನವೇ ಹೂವಿನ ಮನೆಯ ಕಳ್ಳಬಟ್ಟಿ ಮಾರುವ ಬಿದಿರು ಮಟ್ಟಿಗಳ ಆಚಿಚೆಯೆಲ್ಲ ಜನ ತುಂಬಿ ಹೋದರು. ನಾಟಕದ ಮಾಸ್ತರರ ನೆಪದಲ್ಲಿ ಎಲ್ಲಾ ಎರಡೆರಡು ಲೋಟ ಜಾಸ್ತಿ ಕುಡಿದರು. ಗುಟಕಾ ಪರಾಗ್‌ಗಳ ಮಾಲೆಯನ್ನೇ ಕೆಲವರು ಕೊರಳಿಗೆ ಹಾಕಿಕೊಂಡು ನೆನಪಾದಾಗೆಲ್ಲ ಜಗಿಯತೊಡಗಿದರು. ನಾಟಕದ ಮಾಸ್ತರನನ್ನೇ ಜಗಿಯುವಂತೆ, ಅವನನ್ನೇ ಗಟ ಗಟ ಕುಡಿದಂತೆ ಕನಸು ಕಾಣತೊಡಗಿದರು.

ಹೆಂಗಸರೆಲ್ಲ ಊರಿನ ನೀರು ಸೇದುವ ಬಾವಿ, ಬಟ್ಟೆ ತೊಳೆಯುವ ಕೆರೆಗಳಲ್ಲೆಲ್ಲ, ತಮ್ಮ ನಾಟಕದ ಉಮೇದಿಗೆ ಭಟ್ಟರು ಮಾಸ್ತರನನ್ನು ಕರೆಸಿದ್ದಕ್ಕೆ ಖುಷಿಯಾಗಿ ಮಾತನಾಡತೊಡಗಿದರು. ನಾಟಕದಲ್ಲಿ ಗಂಡು ಪಾತ್ರ ಹಾಕಲಾಗುವುದಿಲ್ಲ ಎಂಬ ಕಾರಣಕ್ಕೆ ಉಬ್ಬಿದೆದೆಯ ಹೆಂಗಸರು ತಮ್ಮ ಎದೆ ಈ ಪಾಟಿ ಬೆಳೆದುನಿಂತಿದ್ದಕ್ಕೆ ಮರುಗತೊಡಗಿದರು. ಅಯ್ಯೋ ಆಚೆ ಮನೆ ಹುಡುಗಿಯಂತೆ ಸಣ್ಣ ಎದೆ ಇದ್ದಿದ್ದರೆ ನಾನು ನಾಟಕದಲ್ಲಿ ಯಾವುದಾದರೂ ಗಂಡು ಪಾತ್ರ ಹಾಕಬಹುದಿತ್ತು. ಈ ನೆಪದಲ್ಲಾದರೂ ನನ್ನ ಗಂಡನಿಗೆ ಶೆಡ್ಡು ಹೊಡಿಬಹುದಿತ್ತು ಎಂದು ಮಾತನಾಡಿಕೊಳ್ಳತೊಡಗಿದರು.

ಪೂಜಾರಿ ಹೋಟೆಲ್ ಹುಡುಕಿ ಹೊರಟ ಚಂದ್ರಶೇಖರನನ್ನು ನೋಡಿದ ಊರ ಹೆಂಗಸರು ಈತ ನಾಟಕದ ಮಸ್ತರು ಎಂಬುದನ್ನು ಊಹಿಸಿದರು. ಮಾಸ್ತರು ಪೂಜಾರಿ ಹೋಟೆಲ್‌ಗೆ ಹೊರಟಿದ್ದಾರೆ, ಎಂಬ ಸುದ್ದಿ ಒಬ್ಬರಿಂದ ಒಬ್ಬರಿಗೆ ಹಿತ್ತಿಲ ಬಾಗಿಲ ಮೂಲಕ ದಾಟಿತ್ತು. ಹೆಂಗಸರೆಲ್ಲ ಒಬ್ಬೊಬ್ಬರಾಗಿ ಮನೆಯ ಹಿತ್ತಿಲಿನಿಂದ ಎದುರು ಬಾಗಿಲ ಬಳಿ ನಿಂತು ನಾಟಕದ ಮಾಸ್ತರನನ್ನು ಕುತೂಹಲ ಹಾಗೂ ನಾಚಿಕೆಯಿಂದ ನೋಡತೊಡಗಿದರು. ಕೆಲವು ಹೆಂಗಸರು ನಿಧಾನಕ್ಕೆ ಬೀದಿಯಲ್ಲಿ ನಡೆದು ಸುತ್ತ ಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ತಾವು ಟೆಂಟ್‌ನಲ್ಲಿ ನೋಡಿದ ರಾಜ್‌ಕುಮಾರ್ ಸಿನೆಮಾದ ಯಾವುದೋ ಪಾತ್ರವನ್ನು ನಟಿಸುತ್ತಲೋ, ಅಥವಾ ಯಾವುದೋ ನಾಯಕಿಯ ಮಾತುಗಳನ್ನು ಉದುರಿಸುತ್ತ ಹಾಗೆ ಬಂದು ಹೀಗೆ ಮಾಯವಾಗುತ್ತಿದ್ದರು. ಚಂದ್ರಶೇಖರನಿಗೆ ಹೆಂಗಸರ ಈ ವರ್ತನೆ ವಿಚಿತ್ರ ಎನಿಸಿತು. ಪೂಜಾರಿಯ ಹೋಟೆಲ್‌ನಲ್ಲಿ ಊಟ ಮಾಡಿದ ಚಂದ್ರಶೇಖರ ಊರೆಲ್ಲ ಒಂದು ಸುತ್ತು ಹೊಡೆದ. ಎಲ್ಲಾದರೂ ಆವತ್ತು ಬಸ್ಸಿನಲ್ಲಿ ಸಿಕ್ಕ ಹೆಂಗಸು ಕಾಣಬಹುದೋ ಅವಳಲ್ಲೇ ಭಟ್ಟರ ಮಗಳು ಮಾಯಾಳ ಕುರಿತು ಕೇಳಬಹುದು ಎಂದುಕೊಂಡ. ಊರೆಲ್ಲ ಸುತ್ತಿದರೂ ಆವತ್ತು ಅವನಿಗೆ ಆ ಹೆಂಗಸು ಕಣ್ಣಿಗೆ ಬೀಳಲಿಲ್ಲ.

ಆವತ್ತು ಸಾಯಂಕಾಲ ತಾನು ಉಳಿದುಕೊಂಡ ಹಿತ್ತಿಲ ಮನೆಯ ಸಮೀಪ ಭಟ್ಟರು ಬರಬಹುದೋ ಎಂದು ಚಂದ್ರಶೇಖರ ಕಾಯ್ದ. ಭಟ್ಟರು ಬರಲಿಲ್ಲ. ಜೊತೆ ಮಾತನಾಡಲೂ ಯಾರೂ ಇಲ್ಲದೆ ಯೋಚನೆಯಲ್ಲೆಲ್ಲ ನೀವು ಮಾಯಮ್ಮನ ನೋಡೋಕೆ ಹೊರಟಿರೋ ಗಂಡೋ? ಎಂಬ ಆ ಹೆಂಗಸಿನ ಮಾತೇ ಬರುತ್ತಿತ್ತು. ರಾತ್ರಿಯೆಲ್ಲ ಚಂದ್ರಶೇಖರ ನಿದ್ದೆ ಬರದೆ ಹೊರಳಾಡಿದ. ಕ್ಷಣಕ್ಕೊಮ್ಮೆ ಕಿಡಕಿಯ ಸಮೀಪ ಬಂದು ನೋಡಿದ. ಭಟ್ಟರು ಒಮ್ಮೆ ಬಿಟ್ಟು ಹೋದವರು ಮತ್ತೆ ಅವನಿದ್ದಲಲ್ಲಿಗೆ ಬರಲಿಲ್ಲ. ಭಟ್ಟರ ವರ್ತನೆ ಇವನಿಗೆ ವಿಚಿತ್ರವಾಗಿ ಕಾಣುತ್ತಿತ್ತು. ಅವರು ಮಾಯಾ ಬಗ್ಗೆ ಹೇಳದಿದ್ದುದೇಕೆ? ನಾನೆಲ್ಲಾದರೂ ಅವಳಿಗೆ ನಾಟಕದಲ್ಲಿ ನಟಿಸುವಂತೆ ಒತ್ತಾಯಿಸುತ್ತೇನೆ ಎಂದೋ? ಅಥವಾ ನನ್ನ ಮನಸ್ಸಿನಲ್ಲಿಯ ಯೋಚನೆ ಅವರಿಗೆ ತಿಳಿದುಬಿಟ್ಟಿತೋ? ಎಂದು ರಾತ್ರಿಯೆಲ್ಲ ಯೋಚಿಸಿದ.

ಬೆಳಿಗ್ಗೆ ಎದ್ದವನಿಗೆ ಮತ್ತದೇ ಕುತೂಹಲ ಮನದಲ್ಲಿ ಕೊರೆಯುತ್ತಿತ್ತು. ಏನಾದರಾಗಲಿ ನನ್ನ ಕುತೂಹಲವನ್ನು ಇವತ್ತು ತಣಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿಕೊಂಡ ಚಂದ್ರಶೇಖರ ಭಟ್ಟರನ್ನು ಈ ಕುರಿತು ಕೇಳಿ ಬಿಡಬೇಕು ಎಂದುಕೊಂಡು ಮುಖ ತೊಳೆದುಕೊಂಡು ಅವರ ದೊಡ್ಡ ಮನೆಯತ್ತ ಹೊರಟ. ಭಟ್ಟರ ಮನೆಯ ಹಿತ್ತಿಲ ಬಾಗಿಲ ಬಳಿ ನಿಂತು ಭಟ್ರೆ ಭಟ್ರೇ ಎಂದು ಕೂಗುತ್ತ ಬಾಗಿಲು ಬಡಿದ. ಭಟ್ಟರಿಲ್ಲದಿದ್ದರೆ ಮಾಯಾ ಬಂದು ಬಾಗಿಲು ತೆಗೆಯಬಹುದು ಎಂಬ ಆಸೆಯಿಂದ ಮತ್ತೆ ಮತ್ತೆ ಬಾಗಿಲು ಬಡಿದ.

ಮೈಯೆಲ್ಲಾ ಕಿವಿಯಾಗಿ ಯಾರಾದರೂ ಬರುವ ಸದ್ದು ಕೇಳುವುದೋ ಎಂದು ಆಲಿಸುತ್ತ ನಿಂತ. ಸ್ವಲ್ಪ ಹೊತ್ತು ಕಾದವನಿಗೆ ಯಾರೂ ಬರುವ ಲಕ್ಷಣ ಕಾಣಲಿಲ್ಲ. ಮತ್ತೊಮ್ಮೆ ಬಾಗಿಲು ಬಡಿದು ಭಟ್ಟರೇ ಎಂದು ಕರೆಯದೇ ಧೈರ್ಯ ಮಾಡಿ ಮಾಯಾ ಎಂದು ಕೂಗಿದ. ಯಾರೋ ಗೆಜ್ಜೆ ಸದ್ದು ಮಾಡುತ್ತ ಓಡಿ ಬಂದಂತಾಯ್ತು. ತನ್ನ ಕನಸು ಸಾಕಾರವಾಗುವ ಹಂತ ಬಂದೇ ಬಿಟ್ಟಿತು. ಅವಳನ್ನು ಒಲಿಸಿಕೊಳ್ಳಲು ತಾನು ಯಾವ್ಯಾವ ಪಟ್ಟುಗಳನ್ನು ಹಾಕಬೇಕು ಎಂದು ಆ ಕ್ಷಣದಲ್ಲೇ ಯೋಚಿಸಿದ. ಬಾಗಿಲ ಬಳಿ ಬಂದಂತೆ ಎನಿಸಿದ ಗೆಜ್ಜೆ ಸದ್ದು ಸುಮ್ಮನಾಯ್ತು. ಕ್ಷಣ ಕಾಯ್ದ... ಕ್ಷಣ ಕ್ಷಣ ಕಾಯ್ದ ಬಾಗಿಲು ತೆರೆದುಕೊಳ್ಳುವ ಲಕ್ಷಣ ಕಾಣಲಿಲ್ಲ.

ಮತ್ತೆ ಮಾಯಾ ಎಂದು ಕೂಗುವ ಧೈರ್ಯ ಈತನಿಗಾಗಲಿಲ್ಲ. ಭಟ್ರೆ ಎಂದು ಕೂಗುತ್ತ ಹೆದರುತ್ತ ಹುಂಬ ಧೈರ್ಯದಿಂದ ಬಾಗಿಲನ್ನು ನೂಕಿದ. ಕಿರ್ ಎಂದು ಸದ್ದು ಮಾಡುತ್ತ ಬಾಗಿಲು ತೆರೆದುಕೊಂಡಿತು. ಒಳಗೆ ಗವ್ವೆನ್ನುವ ಕತ್ತಲನ್ನು ನೂಕಿಕೊಂಡು ಕೋಣೆಯ ನಡುವಿನವರೆಗೆ ಬೆಳಕು ಸರ್ರನೆ ನುಗ್ಗಿತು. ಯಾರಾದರೂ ಇರಬಹುದೇ ಎಂದು ಇಣುಕಿದ ಯಾರೂ ಕಾಣಿಸಲಿಲ್ಲ. ಅಲ್ಲೆಲ್ಲೋ ಮುಂದಿನ ಕೋಣೆಯ ಕತ್ತಲಲ್ಲಿ ಗೆಜ್ಜೆಯ ಸದ್ದು ಓಡಿದಂತಾಯ್ತು. ಇನ್ನೇನು ಕನಸಿನ ಕೂಸು ಸಿಕ್ಕೇ ಬಿಟ್ಟಳು ಎಂದುಕೊಂಡ ಚಂದ್ರಶೇಖರ ಮಾಯಾ ಎಂದು ಕೂಗುತ್ತ ಮುಂದಿನ ಕೋಣೆಯ ಕತ್ತಲಲ್ಲಿ ಮುನ್ನುಗ್ಗಿದ.

ಭಟ್ಟರು ಎಲ್ಲಾದರೂ ನನ್ನ ಈ ಅವತಾರದಲ್ಲಿ ನೋಡಿದರೇ ತಾನು ಇಲ್ಲಿಗೆ ಬಂದ ಕೆಲಸದ ಗತಿಯೇನು? ತನ್ನನ್ನು ಇಲ್ಲಿಗೆ ಕಳುಹಿಸಿದ ರಾಮಚಂದ್ರನಿಗೆ ಹೇಗೆ ಮುಖ ತೋರಿಸಲಿ ಎಂಬ ಯೋಚನೆ ಅವನಿಗೆ ಆ ಕ್ಷಣ ಬರದಿರಲಿಲ್ಲ. ಎರಡೆರಡು ಬಾರಿ ಕರೆದರೂ ಭಟ್ಟರು ಬರದಿರುವುದರಿಂದ ಅವರು ಒಳಗೆ ಇಲ್ಲ ಎಂಬುದು ಖಾತ್ರಿಗೊಂಡವನಂತೆ ಮುಂದೆ ನಡೆದ. ಮುಂದೆ ಮುಂದೆ ಹೋದಂತೆ ಆ ಗೆಜ್ಜೆ ಸದ್ದು ಕತ್ತಲಲ್ಲಿ ಲೀನವಾಯ್ತು. ಆವತ್ತು ತಡವರಿಸುತ್ತ ದಾಟಿ ಬಂದ ಎಲ್ಲ ಕೋಣೆಗಳನ್ನು ಸರಾಗವಾಗಿ ಈತ ದಾಟಿ ಎದುರು ಕೋಣೆಗೆ ಬಂದು ತಲುಪಿದ್ದ. ಇಲ್ಲೇ ಎಲ್ಲಾದರೂ ಇರಬಹುದೋ ಎಂದು ತುಸು ತೆರೆದ ಬಾಗಿಲಿನ ಬೆಳಕಲ್ಲೇ ಕೋಣೆಯ ತುಂಬ ಸೂಕ್ಷ್ಮವಾಗಿ ಅವಲೋಕಿಸಿದ. ಮಾಯಾ... ಮಾಯಾ ಎಂದು ಒಂದೆರಡು ಬಾರಿ ಮೆಲ್ಲಗೆ ಕರೆದ. ಅಷ್ಟರಲ್ಲೇ ಹೊರಗೆ ಏನೋ ಗಲಾಟೆ ಕೇಳಿದಂತಾಗಿ ಬೆಚ್ಚಿದ ಚಂದ್ರಶೇಖರ ತುಸು ತೆರೆದುಕೊಂಡಿದ್ದ ಬಾಗಿಲನ್ನು ತೆರೆಯಲೋ ಬೇಡವೋ ಎಂದುಕೊಂಡು ತೆರೆದ.

ಯಾರನ್ನೋ ಜೋರಾಗಿ ಬಯ್ಯುತ್ತಿದ್ದ ಭಟ್ಟರು ಹಾಗು ಇನ್ನೂ ಎರಡು ಜನ ಯಾರನ್ನೋ ಎಳೆದುಕೊಂಡು ಜೀಪಿನೊಳಗೆ ನೂಕುತ್ತಿದ್ದರು. ಕುತೂಹಲಗೊಂಡ ಚಂದ್ರಶೇಖರ ಭಟ್ಟರನ್ನು ಕೂಗಿದ. ಉಳಿದ ಇಬ್ಬರಿಗೆ ಏನೋ ಹೇಳಿ ಇತ್ತ ಬಂದ ಭಟ್ಟರಿಗೆ ಏನು? ಯಾರದು? ಎಂದು ಕೇಳಿದ. ನಮ್ಮೂರಲ್ಲಿ ಒಬ್ಳು ಹುಚ್ಚಿ ಇದ್ದಾಳೆ ಇವತ್ತು ಅವಳ ಹುಚ್ಚು ಜಾಸ್ತಿಯಾಗಿಬಿಟ್ಟಿದೆ. ಅದಕ್ಕೆ ಅವಳನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿಸುತ್ತಿದ್ದೆ ಎಂದು ಸಹಜವೆಂಬಂತೆ ಭಟ್ಟರು ಹೇಳಿದರು. ತನ್ನ ಸುತ್ತ ಮುತ್ತಲಿನ ಜನರಿಂದಲೇ ತನ್ನ ನಾಟಕದ ಪಾತ್ರಗಳಿಗೆ ಸ್ಪೂರ್ತಿ ಪಡೆಯುವ ಚಂದ್ರಶೇಖರ ಅವಳ್ಯಾರು ನೋಡೋಣ ಎಂದುಕೊಂಡು ಅತ್ತ ಹೆಜ್ಜೆ ಹಾಕಿದ. ಇನ್ನೇನು ಜೀಪಿನ ಸಮೀಪ ಹೋಗಬೇಕು ಅನ್ನುವಷ್ಟರಲ್ಲಿಯೇ ಈತನ ತಲೆಯ ಮೇಲೆ ಜೀಪಿನೊಳಗಿಂದ ತಪ್ಪಿಸಿಕೊಂಡು ಬಂದ ಕೋಳಿಯೊಂದು ಹಾರಿ ಹೋಯ್ತು. ಯಾವುದೋ ಜೋಶ್ ಬಂದವನಂತೆ ಹಿಡಿಯಲು ಹೊರಟವನು ತಕ್ಷಣ ಏನೋ ಸತ್ಯ ತಿಳಿದವನಂತೆ ನಿಂತುಕೊಂಡ.

ಅಲ್ಲಿಗೆ ಜೀಪಿನಲ್ಲಿರುವ ಹೆಂಗಸು ಯಾರೆಂಬುದು ಚಂದ್ರಶೇಖರನಿಗೆ ಖಾತ್ರಿಯಾಯ್ತು. ಮುಂದೇ ಹೋಗದೆ ತಿರುಗಿ ಬಂದ ಚಂದ್ರಶೇಖರ ‘ಭಟ್ಟರೆ ನಾಳೆ ಬೆಳಿಗ್ಗೆ ರಾಮಚಂದ್ರ ಬರಬಹುದೇನೋ, ಇವತ್ತು ಒಮ್ಮೆ ಮಹಿಳಾ ಮಂಡಳದ ಸಭೆ ಸೇರಿಸಿ ಬಿಡೋಣ. ನಾಳೆ ಪಾತ್ರಗಳ ಆಯ್ಕೆ ಮಾಡಿಸಿ ನಾಟಕದ ತಾಲೀಮು ಪ್ರಾರಂಭಿಸಿ ಬಿಡುತ್ತೇನೆ. ನಿಮ್ಮ ಮನೆಯಲ್ಲಂತೂ ನಾಟಕಕ್ಕೆ ಪಾತ್ರ ಹಾಕುವಂತಹ ಹೆಂಗಸರು, ಹುಡುಗಿಯರು ಯಾರೂ ಇಲ್ಲವೆನಿಸುತ್ತದೆ ?!’ ಎಂದ. ‘ಏ! ಬೇಗ ಹೊರಡ್ರೋ’ ಎಂದು ಜೀಪಿನಲ್ಲಿದ್ದವರನ್ನು ಕೂಗುತ್ತಾ ಭಟ್ಟರು ಚಂದ್ರಶೇಖರನ ಪ್ರಶ್ನೆಗೆ ಉತ್ತರ ಕೊಡದೆ ಕತ್ತಲು ಮನೆಯೊಳಗೆ ಮುನ್ನಡೆದರು. ಅವರ ಹಿಂಬಾಲಿಸಿ ಒಳಗೆ ಕಾಲಿಟ್ಟ ಚಂದ್ರಶೇಖರನ ಕಾಲಿಗೆ ಕತ್ತಲಲ್ಲಿ ಏನೋ ಮೆತ್ತಗೆ ತಾಗಿದಂತಾಯ್ತು. ಏನಿರಬಹುದು ಎಂದು ಬಗ್ಗಿ ತಡಕಾಡಿದವನ ಮುಖ ಪರಚಿ ಗೆಜ್ಜೆ ಕಟ್ಟಿದ ಕರಿ ಬೆಕ್ಕೊಂದು ಬಾಗಿಲ ಸಂದಿನಿಂದ ಓಡಿ ಹೋಯ್ತು. ಹೊರಗಿನಿಂದ ‘ಹಿಡ್ಕೋಳಿ... ಹಿಡ್ಕೋಳಿ ನನ್ನ ಕೋಳಿ ಹಾರ್ ಹೋಯ್ತು’ ಎಂಬ ಕೂಗು ಕೇಳಿ ಬರುತ್ತಿತ್ತು.

[ಚಿತ್ರಗಳು-ವಿಷ್ಣು] ಕೆಂಡಸಂಪಿಗೆಯಲ್ಲಿ ಪ್ರಕಟವಾದದ್ದು

ಬೆಳಕು ಹಾರುವ ಮುನ್ನ …

ಬೆಳಕು ಹಾರುವ ಮುನ್ನ ಬೆಳಕಾಗುವಾಸೆ ಮನಕೆ
ಕನಸುಗಳನ್ನೆಲ್ಲ ನನಸಾಗಿಸುವಾಸೆ ಮನಕೆ.

ನದಿಯ ನಿನದದಲಿ ಇಜೋ ಮೀನಾಗೋ ಬಯಕೆ
ಹೊಳೆವ ಕಂಗಳ ಒಳಗೆ ಚೆಲುವಾಗಿ ಉಳಿವೆ
ಉರಿವ ಬಿಸಿಲಿಗೆ ತಂಪ ನೆರಳಾಗಿ ನಿಲುವೆ
ಸುರಿವ ಮಳೆಗೆ ಚಿಪ್ಪ ಮುತ್ತಾಗಿ ಬರುವೆ.

ಜೀವ ಜೀವವ ಬೆಸೆವ ಪ್ರೀತಿ ಫಲವಾಗಿ ನಲಿವೆ
ನೋವ ಮರೆಸುವ ನಗೆಯ ಅಲೆಯಾಗಿ ಉಲಿವೆ
ಕಾಣದಾ ದೊರೆ ನೀನು ಎಲ್ಲೆಲ್ಲೂ ಇರುವೆ
ನೀಡು ಶಕ್ತಿಯ ನನಗೆ ಬೆಳಕಾಗಿ ಮಡಿವೆ.

ಬಸಿರು:

ಅವಳೊಡಲು ಬಸಿರಾಗಿದೆ
ಯಾರದೋ ಪ್ರೀತಿಗೆ ಮನಸಿಟ್ಟು
ಗಂಡನ ಬಯಕೆಗೆ ದೇಹವಿಟ್ಟು
ಅವಳ ಒಡಲೀಗ ತುಂಬಿಕೊಂಡಿದೆ.

ಹುಟ್ಟದ ಮಗುವಿಗೇನು ಹೆಸರೋ ?
ಹಸಿರು ಮರದಡಿ ಮಾತಾಡಿಕೊಂಡ
ಹುಟ್ಟುವ ಮಗುವಿನ ಹೆಸರೇ ಇಡಬಹುದೇನೋ ?

ಕನಸ ಕಂಡಂತೆ ಕೂಸು
ಕುಣಿತ ಕರಾಟೆ ಎಲ್ಲ ಕಲಿಯಬಹುದೋ ?
ಬಹುದು … ಅದರಪ್ಪ ಪೋಲಿಸನಂತೆ
ಸಂಗೀತ ಕಷ್ಟವಾಗಬಹುದು ಕನಸು
ಅವಳೆದೆಯ ಕವಿಯದಂತೆ.

ಮಸ್ಸೂರಿಯಿಂದ ಪ್ರಿಯಕರ ತಂದ
ಮಪ್ಲರು ತಲೆಗೆ ಸುತ್ತಿ
ದೆಹಲಿಯ ಬೆಳ್ಳಂ ಬಿಳಿಯ ಸ್ವೆಟರು ದೇಹಕ್ಕಪ್ಪಿಸಿ
ಹೃಷಿಕೇಶದ ಹರಳು ಸುರಿದ ಬೆರಳು ನೆವರಿಸುತ್ತ
ತಾಳಿ ಕಟ್ಟಿದವನ ಕೂಸ ಹೊತ್ತು
ಎಲ್ಲ ನೆನಸಿಕೊಳ್ಳುತ್ತ ಕನಸಿಕೊಳ್ಳುತ್ತ
ಅವಳೊಡಲು ಬಸಿರಾಗಿದೆ.

ಮಗು ಮಗ್ಗುಲು ಬದಲಿಸಿದಾಗ
ಒಡಲ ತುಂಬೆಲ್ಲ ಕುಣಿದಾಗ
ಒಡಲ ನೋವು ಒತ್ತರಿಸಿಕೊಂಡಾಗ
ತಪ್ಪಿಯೂ ಮನಸು ತುಂಬಿಕೊಂಡವನ ಹೆಸರು ಬಾರದಿದಲಿ

ಯಾರದೋ ಪ್ರೀತಿಗೆ ಮನಸಿಟ್ಟು
ಯಾರದೋ ಬಯಕೆಗೆ ಒಡಲಿಟ್ಟು
ಅವಳ ಒಡಲೀಗ ತುಂಬಿಕೊಂಡಿದೆ…

ಗಝಲ್

ಕಾಡ ನೆತ್ತಿಯ ಮೇಲೆ ಅಂಗಾತ ಮಲಗಿ ನಕ್ಷತ್ರಗಳಲ್ಲಿ ನಿನ್ನ ಹುಡುಕುವೆ ಸಖಿ

ಉದುರಿ ಬೀಳುವ ಉಲ್ಕೆಯೆಲ್ಲ ನನ್ನತ್ತ ಬರುವ ನೀನೇ ಎನಿಸುತ್ತೆ ಸಖಿ

ಹೊಳೆಯ ದಡದಲ್ಲಿ ಕುಳಿತು ನೀರೊಳಗೆ ಕಣ್ಣಾಡಿಸುತ್ತೇನೆ ಸಖಿ

ದೃಷ್ಟಿಯೆಡೆಗೆ ಬರುವ ಮೀನ ಈಜಾಟದಲ್ಲಿ ನಿನ್ನದೇ ಸಂಭ್ರಮ ಕಾಣುತ್ತೇನೆ ಸಖಿ

ಎಲ್ಲೆಡೆ ನೀ ಇರುವೆ ಎಂದು ಕೊಂಡಾಗೆಲ್ಲಾ ನಿನ್ನ ಬಿಸಿ ಉಸಿರು ಹೃದಯಕ್ಕೆ ತಾಕುತ್ತದೆ ಸಖಿ

ಸತ್ತ ನೀ ಮತ್ತೆ ಬರಲಾರೆ ಮನಸಿಗದೆಲ್ಲಿ ತಿಳಿಯಬೇಕು ಪ್ರತೀ ಕ್ಷಣ ನಿನ್ನನೇ ಯೋಚಿಸುತ್ತೆ ಸಖಿ.

ಸುಮ್ಮನಿದ್ದುಬಿಡಿ...

ನಾ ಬರೆದ ಸಾಲುಗಳೇ
ಅರ್ಥ ಬದಲಿಸುವುದ ಬಿಟ್ಟುಬಿಡಿ !
ಅಸ್ತಿತ್ವವಿದ್ದೂ ವ್ಯಕ್ತಿತ್ವವಿಲ್ಲದ ಶಬ್ಧಗಳೇ ಸುಮ್ಮನಿದ್ದು ಬಿಡಿ
ಮನಸೊಳಗಿನ ಭಾವವನ್ನು ಕೇಳಿಕೊಳ್ಳಲು ಬಿಡಿ.

ಬರೀ ಆಕಾರಗಳಿಗೆ ಭಾವನೆಗಳೆಲ್ಲಿ ಬರಬೇಕು
ನಿರಾಕಾರಕ್ಕೇ ಅರ್ಥವೆಲ್ಲಿಯದು ?
ಭಾವಕ್ಕೆ ತಕ್ಕಂತೆ ರೂಪ ಬದಲಿಸಿ
ಮುಕ್ತ ಭಾವವ ಅಡಗಿಸಿ ಎಲ್ಲ ಕಲಸು ಮೆಲಸುಗೊಳಿಸುವ
ಅಕ್ಷರಗಳೇ ಭಾವನೆಗಳು ಹೇಗಿವೆಯೋ ಹಾಗೆಯೇ
ಅರ್ಥವಾಗುವಂತೆ ಸುಮ್ಮನಿದ್ದು ಬಿಡಿ !

ನಾ ಪ್ರೀತಿಸುವುದು ಭಾವನೆಯನ್ನ
ಬರಹವನ್ನೋ ಅಕ್ಷರಗಳನ್ನೋ ಅಲ್ಲ ತಿಳಿದು ಬಿಡಿ !

ಕುದುರೆ ಕಾಲಡಿಯ ರಾಗಿ ಸಸಿ

ರೇಸ್ ಕೋರ್ಸ್ ನಲ್ಲಿ ಕುದುರೆ ಓಡುವ ದಾರಿಯಲ್ಲಿ
ಬೆಳೆವ ಹಸಿರು ರಾಗಿ ನನ್ನ ಹೃದಯ !
ಕೆಲವೇ ದಿನಗಳಲ್ಲಿ ಡರ್ಬಿ ನಡೆಯುತ್ತೆ ಎಂದರೆ
ನೆನೆಸಿ ಕುದುರೆ ಓಡುವ ದಾರಿಯುದ್ದಕ್ಕೆ ಹರಡಿ
ಕುದುರೆ ಕಾಲಿಗೆ ಮೆತ್ತನಾಗುವಂತೆ ಬೆಳೆದು ಹಸಿರಾಗುತ್ತದೆ.
ಕುದುರೆ ಓಡುತ್ತದೆ ರಾಗಿ ನಲುಗುತ್ತದೆ.

ಅದೇನು ಖುಷಿಯೋ ಅದಕ್ಕೆ ಮತ್ತೆ
ಹಸಿರಾಗುತ್ತದೆ ಮುಂದೆ ಇನ್ನೊಂದು ರೇಸ್ ನಡೆಯುತ್ತದೆ ಎಂದುಕೊಂಡು
ಈ ಸಲ ಮತ್ತೆ ಹೊಸ ರಾಗಿ ಸಸಿ
ಹಳೆಯದೆಲ್ಲ ಸತ್ತಿರುತ್ತದೆ ಹೊಸದು ಹುಟ್ಟುತ್ತದೆ.
ಮತ್ತೇ ಕುದುರೆ ಓಡುತ್ತದೆ ರಾಗಿ ನಲುಗುತ್ತದೆ
ಅದೇನು ಖುಷಿಯೋ ?
ಕುದುರೆ ಕಾಲಡಿ ಸಿಕ್ಕು ನರಳುವುದಕ್ಕೆ...!

ಕವನಕ್ಕೆ ಬೇಕಾಗುವ ಸಾಮಗ್ರಿಗಳು

ಅಗತ್ಯವಿದ್ದರೆ ಮಾತ್ರ ;
ಆಗಷ್ಟೇ ಹಚ್ಚಿದ ಸಿಗರೇಟು
ತಳಕ್ಕೆ ಇಳಿದ ವಿಸ್ಕಿ

ಆದರೆ ಇವು ಮಾತ್ರ ಅತ್ಯಗತ್ಯ ;
ಉರಿದು ಬಿದ್ದ ಕನಸು
ಅಲ್ಲಿಲ್ಲಿ ಇಣುಕುವ ಖುಷಿ
ದೊಡ್ಡ ಕಣ್ಣುಗಳ ಹುಡುಗಿ
ಉದ್ದ ಕೂದಲ ಸುವಾಸನೆ
ಕದ್ದು ನೋಡುವ ನೋಟ
ಮೆಚ್ಚುಗೆ ಪತ್ರ !
ಸತ್ತು ಬಿಡುತ್ತೇನೆ ಎಂಬ ಭಯ
ಚಿಟಿಕೆ ವ್ಯಂಗ್ಯ
ಕೊಟ್ಟು ಮರೆತ ಭಾಷೆ
ಕೀಲಿ ಮಣೆಯಲ್ಲಿ ಭಾವ ಇಳಿಸಲು
ತಕ್ಕ ಭಾಷೆಯ ತತ್ರಾಂಶ.
ಎಲ್ಲ ಸೇರಿಸಿ ಅಕ್ಷರ ಪೇರಿಸಿದರೆ ಕವನ ರೆಡಿ.

ಅವರವರ ಭಾವಕ್ಕೆ ;
ಈಗೆಲ್ಲ ಗ್ಯಾಸು, ಮಿಕ್ಸಿ ರೆಡಿಮೇಡು ಫುಡ್ಡಿನ ಕಾಲ
ಅದ್ಯಾರಿಗೆ ಬೇಕು ಹೇಳಿ
ಹಳೆಯರು ಬರೆದದ್ದು
ಕುಳಿತು ಅರೆಯುವುದು
ಕಟ್ಟಿಗೆ ಕಡಿಯುವುದು
ಜ್ಙಾನ ಪೀಠ ಪಡೆದವರ ವ್ಯಾಖ್ಯಾನ
ಛಂಧ ಗಣ ಪ್ರಾಸ ಮಾತ್ರೆಗಳು !

ಗಡ್ಡದೊಳಗಿನ ದಿನಗಳು ..

ಸೆಲೂನಿನ ಒಳಗೆಲ್ಲ ಕನ್ನಡಿಗಳೋ ಕನ್ನಡಿ
ನಾನೆಲ್ಲಿ ಬಚ್ಚಿಟ್ಟುಕೊಳ್ಳೋಣ ಎಂದರೂ
ಎಲ್ಲ ಕಡೆ ನನ್ನ ಬಿಂಬ !

ಅದ್ಯಾಕಾದ್ರೂ ಬಂದೆನೋ ವರ್ಷಗಳಿಂದ
ಬಿಟ್ಟಿದ್ದ ಗಡ್ಡ ತೆಗೆಸಲು !
ಎಲ್ಲೆಡೆ ಸಾವಿರ ಬಿಂಬಗಳು ಕೂತಲ್ಲೇ 360 ಡಿಗ್ರಿ
ತಿರುಗುವ ಚೇರ್ ಮೇಲೆ ಕುಳಿತಾಗಂತೂ ಅನಂತ ಬಿಂಬಗಳು !
ಕಳೆದ ವರ್ಷದ ಒಂದೊಂದು ದಿನಕ್ಕೊಂದರಂತೆ
ಅಲ್ಲೆಲ್ಲೋ ಇನ್ನೊಒಒಒಒಒಂದು ಮೂಲೆಯವರೆಗೂ ರಾಶಿ ಬಿಂಬಗಳು !

ಗಡ್ಡ ತೆಗೆಯುವ ಮುನ್ನ ಬುರುಗು ನೊರೆಯನ್ನು
ಎಲ್ಲೆಡೆ ಸವರಿ ಕಪ್ಪು ಕೂದಲು ಕಾಣದಂತಾಗ
ಅದ್ಯಾಕೋ ನನಗೆ ಈಗಷ್ಟೇ ಪರಿಚಯವಾದ ಹುಡುಗಿ ನೆನಪಾದಳು
ಕನ್ನಡಿಯಲ್ಲಿ ನೋಡಿಕೊಂಡೆ.
ನೊರೆಯಲ್ಲೆಲ್ಲ ಅವಳೇ ನಗುತ್ತಿದ್ದಾಳೆ !

ನನ್ನೆದುರೇ ಡೆಟಾಲ್ ಒಳಗೆ ಕತ್ತಿಯನ್ನದ್ದಿ ಬ್ಲೇಡ್ ಬದಲಿಸಿದಾಗ
ಕನ್ನಡಿಯೊಳಗೆಲ್ಲ ಕತ್ತಿಗಳೋ ಕತ್ತಿಗಳು !
ಸ್ಯಾಂಪಲ್ಲಿಗೆ ಕಿವಿ ಹತ್ತಿರದ ಕೂದಲಿಗೆ ಕತ್ತಿ ತಾಕಿಸಿದಾಗ
ಕಳಚಿಬಿದ್ದಂತಾಗಿತ್ತು ಯಾವುದೋ ಒಂದು ದಿನ !

ಅದೆಷ್ಟು ಸಲೀಸಾಗಿ ನನ್ನ ಬದುಕಿನ ಒಂದೊಂದೆ ದಿನಗಳನ್ನು
ಚರಚರನೆ ಕಿತ್ತೊಗೆಯುತ್ತಿದ್ದಾನೆ ಈತ !
ಅರೇ ನಾನು ಬದುಕಿದ ದಿನಗಳೋ ಅವು ಬೇಡ ಬಿಡು
ಕತ್ತಿ ಆಗಲೇ ಸವರಿ ಹಾಕಿತ್ತು ನಾನು ಬದುಕಿದ ದಿನಗಳ.

ಕನ್ನಡಿ ನೋಡಿಕೊಂಡೆ ನಾನು ನನಗೇ ಪರಿಚಯವಿಲ್ಲ !
ಖುರ್ಚಿಯಿಂದ ಕೆಳಗಿಳಿದಾಗ ನೆಲದಲ್ಲಿ
ಸತ್ತು ಬಿದ್ದಿದ್ದವು ನೆನಪುಗಳು
ಕನ್ನಡಿ ನೋಡಿಕೊಂಡೆ ನಗುತ್ತಿದ್ದಳು ಇತ್ತೀಚೆಗೆ ಪರಿಚಯವಾದ ಹುಡುಗಿ !

ಜಾಹಿರು ಆತು... !

ಏನ್ ಹುಡುಕ್ತಿದ್ದಿ ? ಹುಳುಕು !
ನಿನ್ನೇ ರಾತ್ರಿ ನಾನೊಂದು ತಪ್ಪು ಮಾಡ್ದೆ !
ಮೇಕ್ ದಿ ಮೋಸ್ಟ್ ಆಪ್ ನೌ
ಹಾಸಿಗೆಯಲ್ಲುರುಳಿ ಕಣ್ಣು ಆಡಿಸಿದರೇ
ಜಾಹಿರಾತುಗಳ ಮಹಾಪೂರ !

ಈಗ ನನ್ನ ಪ್ರತಿ ಕ್ಷಣಕ್ಕೊಂದು ಜಾಹಿರಾತಿದೆ
ಸರ್ ಪ್ರೈಸ್ ಅಂತ ನನ್ನೆಂಡ್ತಿ ಎಲ್ಲಿ ಟಾಯ್ಲೆಟ್
ತೋರಿಸ್ತಾಳೋ ಎಂಬ ಭಯ !
ನಿಮ್ಮ ಮನೆಯವರಿಗೆ ಸರ್್ಪ್ರೈಸ್ ಕೊಡಬೇಕೋ
ಹೊಸದಾಗಿರುವ ನಿಮ್ಮ ಟಾಯ್ಲೆಟ್ ತೋರಿಸಿ.
ಅಬ್ಬಾಸ್ ಬಂದು ಹೋಗಿದ್ದಾನೋ ಏನೋ ?
ನಿನ್ನೆ ನಾನೊಂದು ತಪ್ಪು ಮಾಡ್ದೆ ಅಂತೆಲ್ಲಿ ಹೇಳಿ ಬಿಡ್ತಾಳೋ ?
ದಾರಿ ಗೊತ್ತಲ್ಲ ಹಾಗೆಲ್ಲಾ ಮಾಡೊಲ್ಲ ಬಿಡು
ಪರಿಹಾರ ಕಂಡುಕೊಂಡಾಗಿದೆ.

ಹೊರಗಡೆ ಬೈಕ್ ಬಂದು ನಿಂತಿತೆಂದರೆ ಭಯ
ಎಲ್ಲಿ ತನ್ನ ಮಕ್ಕಳನ್ನು ತನ್ನ ಅಕ್ಕಂದು ಎನ್ನುತ್ತಾಳೋ !
ಎಷ್ಟು ಬೇಕಾದರೂ ಎಸ್ಸೆಮ್ಮೆಸ್ ಕಳುಹಿಸಿ ಎಲ್ಲಾ ಫ್ರೀ
ಇನ್ ಬಾಕ್ಸ್ ಇಣುಕುವ ಸಾಹಸಕ್ಕಂತೂ ಕೈ ಹಾಕಲಾರೆ.

ಬಾಯಿ ಸರ್ಯಾಗಿ ತೊಳಕ್ಕೋ ಬೇಕು ಮೌತ್ ವಾಷ್
ಜಾಹಿರಾತು ನೆನಪಿಗೆ ಬರ್ತಾ ಇಲ್ಲಾ ಕುಡಿದಿದ್ದು
ಗೊತ್ತಾದರೆ ಕಷ್ಟ ವೈಟ್ ಮಿಸ್ಚೀಪ್ !?
ನಿನ್ನೇ ತಪ್ಪು ಮಾಡಿಲ್ಲಾ ತಾನೆ ?
ಇನ್ ಬಾಕ್ಸ್ ಔಟ್ ಬಾಕ್ಸ್ ನಲ್ಲಿರುವ ಎಲ್ಲ
ಎಸ್.ಎಂ ಎಸ್ ಅಳಿಸಿ ಹಾಕಬೇಕು ಒಳಗೊಳಗೆ
ಅಂದುಕೊಳ್ಳುತ್ತಾಳೆ ಅವಳು.
ಏನ್ ಹುಡುಕ್ತಿದ್ದಿ ? ಹುಳುಕು !

ಬೆಸ್ತು ಬಿದ್ದ ಕೋಗಿಲೆ...

ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಓಡಾಡುವ
ಶಾರ್ಟ್ ಸ್ಕರ್ಟ್, ಇಣುಕುವ ಕ್ಲೀವೇಜ್್ಗಳ
ಕಣ್ಣು ಕುಕ್ಕುವ ಬಿಳಿ ಚರ್ಮಗಳ ಕುಲುಕಾಟದಲ್ಲಿ
ಬೆಸೆದುಕೊಂಡ ಕೈಗಳಲ್ಲಿ ಕಾಫಿ ಬಾರ್್ನಲ್ಲಿಯ
ಕಾರ್ನರ್ ಸೀಟ್್ಗಳಲ್ಲಿ ಬೆಸೆದುಕೊಂಡ ಕಾಲ್ಗಳಲ್ಲಿ
ಅಲ್ಲೆಲ್ಲೋ ಹೂ ಕುಂಡದಲ್ಲಿ ಚಿಗುರಿದ ಬೊನ್ಸಾಯ್ ಮಾವಿನ ಗಿಡದಲ್ಲಿ
ಕಳೆದು ಕೊಂಡ ಪ್ರೀತಿಯನ್ನು ಹುಡುಕಿ ಕೂಗುತ್ತೇ ಕೋಗಿಲೆ !

ಮತ್ಯಾವುದೋ ಮೂಲೆಯಿಂದ ಬಂದ ಕೂಗನ್ನು ಹುಡುಕಿ
ಬೆಸ್ತು ಬೀಳುತ್ತೇ ಯಾರದೋ ಮೊಬೈಲ್ ರಿಂಗ್ ಟೋನ್್ಗೆ
ಅದೆಲ್ಲಿ ಮಾವಿನ ಚಿಗುರು ನೇರವಾಗೇ ಸಿಗುವ ಮ್ಯಾಂಗೋ ಸ್ಲೈಸ್
ಬಸಿರಿಲ್ಲದೇ ಹಡೆದ ಮಗುವಿನ ರೀತಿ ಕಂಡು ಧ್ವನಿ ಬದಲಿಸಿ ಹಾಡುತ್ತೆ.

ಕಂಡ ಕೂಡಲೇ ಹಾಯ್ ಎಂದು ಎದೆತಾಕುವಂತೆ ಅಪ್ಪುವ
ಸೊಂಟದ ಸುತ್ತ ಕೈ ಹಾಕಿ ಧೈರ್ಯವಾಗಿ ನಡೆವವರನ್ನು ಕಂಡಾಗ
ಅದೆಷ್ಟು ಸುಖವಿತ್ತು ತಾನು ಅದಕ್ಕಾಗಿ ಕಾದ ವರ್ಷಗಳಲ್ಲಿ
ಚಿಗುರು ಕಂಡಾಗಲೂ ಎದುರಿದ್ದು ಮರೆಯಲ್ಲಡಗಿ ಕುಣಿಸುವ
ಸುಪ್ಪಾಣಿ ಸುಂದರಿಯರೆಲ್ಲೋ ?

ಅದೆಲ್ಲಿಂದಲೋ ಚಿಗುರು ತಿಂದು ಬಂದ ಕೋಗಿಲೆ
ಇಲ್ಲಿ ಮೊಬೈಲ್ ರಿಂಗ್ ಟೋನ್ ಗೆ ಬೆಸ್ತು ಬೀಳುತ್ತೇ
ರೆಕ್ಕೆ ಕಳೆದುಕೊಂಡಳೇ ನನ್ನವಳು ಎಂದು ಮರುಗುತ್ತೆ !

ಕಲ್ಲೊತ್ತಿನ ಕೀವು ಮತ್ತು ಕವಿತೆ...!

ಕವಿತೆ ಕಾಲಿಗಾದ ಕಲ್ಲೊತ್ತಿನಂತೆ
ಕೂತಲ್ಲೇ ಕೂತಾಗ ಏನೂ ಇಲ್ಲದಂತೆ
ಕಾಲೆತ್ತಿ ಇಟ್ಟಾಗಲೇ ಟಿಂವ್ ಎನ್ನುವ ನೋವು.

ಏನೂ ಇಲ್ಲದಂತೆ ಆಳದಲ್ಲಿ ಇರುವಂತೆ
ಬರೆಯಬೇಕೆಂದು ಕೊಂಡಾಗ ಬರೆಸಿಕೊಳ್ಳದೆ
ಬಯಲಲ್ಲಿದ್ದಾಗ ಮನದಲ್ಲಿ ಗುನುಗಿಕೊಳ್ಳುತ್ತೆ
ಕಾಲೊತ್ತಿನ ಟಿಂವ್ ಎನ್ನುವ ನೋವಿನಂತೆ.

ಹೊಗೆ ಬಿಡುವ ಚಿಮಣಿ ಕೈಯಲ್ಲಿ ಹಿಡಿದು
ಜಂಗು ಹಿಡಿದ ದಬ್ಬಣ ಕಾಸಿ ಕಲ್ಲೊತ್ತು ಕಿತ್ತಂತೆ
ಸುಮ್ಮನೆ ಕಣ್ಮುಚ್ಚಿ ಪೆನ್ನಿಡಿದು ಕುಳಿತಾಗ
ಕಿತ್ತುಕೊಳ್ಳುವುದಿಲ್ಲ ಕಲ್ಲೊತ್ತು ಪ್ರಾಣ ಹೋಗುವಷ್ಟುನೋವು
ಬರೆದುಕೊಳ್ಳುವುದಿಲ್ಲ ಕವಿತೆ ಮನಸ ಕೋಣೆಯೆಲ್ಲ ಕಾಲಿ.

ಇದರ ಸಹವಾಸವೇ ಅಲ್ಲ !
ಕಲ್ಲುಪ್ಪು ಕಟ್ಟಿಕೊಂಡು ಕುಂಟುತ್ತಾ ನಡೆದಾಗ
ಎಲ್ಲ ಮರೆತು ಸುಮ್ಮನಿರುವಾಗ
ಬಿಚ್ಚಿಕೊಳ್ಳುತ್ತದೆ ಕಲ್ಲೊತ್ತು ಒಳಗಿನ ಕೀವು ಚೆಲ್ಲಿ
ಬರೆದುಕೊಳ್ಳುತ್ತದೆ ಕವಿತೆ
ಬಸ್ಸಿನ ಕಿಡಕಿಯಿಂದ ಗಾಳಿ ಕೆನ್ನೆಗಪ್ಪುವಾಗ
ಸುಳಿದ ಹಾಯ್ ಎನಿಸುವ ಭಾವದಂತೆ.

ಹೊರ ಸುರಿದ ಕಲ್ಲೊತ್ತಿನ ಕೀವು
ಬಸ್ಸ್ ಟಿಕೀಟಿನ ಅಡಿಗೆ ಬರೆದುಕೊಂಡ ಸಾಲು
ಸಹವಾಸವಲ್ಲ ಬೇಕೆಂದಾಗ ಎರಡೂ ಬಿಚ್ಚಿಕೊಳ್ಳುವುದಿಲ್ಲ
ಕೈಯಲ್ಲಿ ದಬ್ಬಣವಿದ್ದಾಗ ಕೈಯಲ್ಲಿ ಪೆನ್ನು ಇದ್ದಾಗ !

ಕಪಾಟಿನೊಳಗೆ ..

ಅದ್ಯಾರೋ ಹೇಳಿದ್ದ ಕಥೆ
ಅದ್ಯಾದರದ್ದೋ ಕವನ
ಬಯಲಾಗದ ಬದುಕ ತೆರೆದಿಡುವ ಬರಹ
ಬಣ್ಣ ಬಣ್ಣದ ಬಯಕೆ
ಮುಚ್ಚಿಟ್ಟ ಬಿಚ್ಚಿಟ್ಟ ಇನ್ಯಾವತ್ತೋ ಕೆದಕಿ ನೋಡಲು
ಅವಿತಿಟ್ಟ ಬದುಕ ಬವಣೆಯ
ಬರವಣಿಗೆಗೆಲ್ಲ ವರಲೆ ಮುತ್ತಿದೆ !

ಬದುಕ ಕಟ್ಟಿಕೊಳ್ಳುವ ಬರದಲ್ಲಿ
ಬದುಕ ಭಾವನೆಗಳನ್ನೆಲ್ಲ ಮಣ್ಣಾಗಿಸಿವೆ
ಯಾರದ್ದೋ ಕವನ
ಯಾರದ್ದೋ ಕಥೆ
ಯಾರದ್ದೋ ಕನಸು
ಎಲ್ಲ ಭಾವನೆಗಳಿಗೂ ಈಗ ಮಣ್ಣ ಬಣ್ಣ !

ಸರ್ಕಸ್



ಸಣ್ಣ ವೃತ್ತದೊಳಗೆ ದೇಹ ಕುಗ್ಗಿಸಿ

ಜೊತೆಗೆ ತನ್ನ ಸಣ್ಣ ತಮ್ಮನನ್ನು ಸೇರಿಸಿ

ದಾರಿಯಲ್ಲಿ ದೀಪ ಕೆಂಪು ತೋರಿದಾಗಲೆಲ್ಲಾ

ಕಸರತ್ತು ಮಾಡುವ ಪುಟ್ಟ ಹುಡುಗಿಯ ಕಣ್ಣಲ್ಲಿ

ಬದುಕು ಸರ್ಕಸ್ ಮಾಡುತ್ತೆ.

ಕೈಗೆಟುಕದ ಬಸ್ಸಿಸ ಕಿಡಕಿ ತಡವಿ

ಮುಖ ಸಣ್ಣದು ಮಾಡಿ ಬೇಡುತ್ತಾಳೆ

ಹಣವನ್ನೋ ಬದುಕನ್ನೋ ?

ಹಸಿರು ದೀಪ ಕಾಣುವ ಮುನ್ನ ಇನ್ನಷ್ಟು ಕಸರತ್ತು

ಕತ್ತು ಬಗ್ಗಿಸಿ ನೆಲಕ್ಕೆ ತಾಕಿಸಿ ಒಂದೆರಡು ಬಾರಿ ಹಾರಿ

ಕಣ್ಮುಚ್ಚಿ ಬಿಡುವುದರೊಳಗಾಗಿ ಹತ್ತಿರದ ಕಾರು ಕಿಡಕಿಯತ್ತ ಬರುತ್ತಾಳೆ.

ಬೇಡುತ್ತಾಳೆ ಬದುಕನ್ನೋ ಹಣವನ್ನೋ ?

ಸೊಂಟದಲ್ಲಿರುವ ತನ್ನ ತಮ್ಮನ ತಾಯಿ ಯಾರೋ ?

ತನ್ನೊಳಗೆ ಹರಿಯುವ ರಕ್ತ ಯಾರದ್ದೋ?

ನನ್ನ ಕಂಡು ಹಲ್ಗಿಂಜುವ ಕಾರೊಳಗಿನ ಮನುಷ್ಯನ ಮನಸ್ಸೆಂತದ್ದೋ ?

ಸಣ್ಣ ಕಬ್ಬಿಣದ ವೃತ್ತದೊಳಗೆ ತನ್ನ ತಮ್ಮನನ್ನು ಸೇರಿಸಿ ತೂರಿಕೊಳ್ಳುವಾಗೆಲ್ಲಾ

ಅವಳ ಕಣ್ಣಲ್ಲಿ ಪ್ರಶ್ನೆಗಳ ಬದುಕು ಸರ್ಕಸ್ ಮಾಡುತ್ತೆ.

ಹಸಿರು ದೀಪಕ್ಕೆ ಎಲ್ಲ ಮುಂದೋದಾಗ ಕೆಂಪು ದೀಪಕ್ಕೆ ಅವಳು ಕಾಯುತ್ತಾಳೆ.

ಒಂದು ಲಿಂಬು ತಂದು ಕೊಡು...

ಸತ್ಯ ಹುಡುಕಲು ಆಕೆ ಹೊರಟು ಹೋದಳು
ನಾವೆಲ್ಲಿಂದ ಬಂದವರು? ನಾವ್ಯಾಕೆ ಹುಟ್ಟಿದ್ದು ?
ನಾನೇ ಅಂತೆ ಅವಳ ಮಲ್ಲಿಕಾರ್ಜುನ
ಆದರೂ ನಾನೇ ಏಕೆ ಅವಳ ಮಲ್ಲಿಕಾರ್ಜುನ ?
ಹೊರಟು ಹೋದಳು ಪ್ರಶ್ನೆಯ ಪಾತಾಳ ಗರಡಿ ಹಿಡಿದು
ಅಕ್ಕಳಂತೆ...

ಸಾಧಿಸಿದ್ದೇನೆ ಎನ್ನುವ ಸಾಧು (?) ಹೇಳುತ್ತಾನೆ
ಒಂದು ಲಿಂಬು ತಂದುಕೊಡು ನಾನವಳ
ಹಿಂದಕ್ಕೆ ಕರೆಸುತ್ತೇನೆ
ನಿನ್ನ ತೆಕ್ಕೆಯಲ್ಲಿ ಅವಳ ಕರಗಿಸುತ್ತೇನೆ.

ಅದ್ಹೇಗೆ ಸಾಧ್ಯವೋ ?
ಪ್ರೀತಿಗೇ ಸಾಧ್ಯವಿಲ್ಲದ್ದು
ಕುಂಕುಮ ಹಚ್ಚಿದ ಹಳದಿ ಹಣ್ಣಿಗೆ !

ನೆನಪಿಡಿ ಚುನಾವಣೆ ಬಂದಿದೆ

ಚಿಗುರಿಕೊಂಡಿದೆ ಬಡವನ ಮನೆಯ
ಒಲೆಯ ಬೆಂಕಿ ಚುನಾವಣೆ ಬಂದಿದೆ
ದುಡಿಯದೆ ದುಡ್ಡು ಬಯಸದೇ ಬಾಡು
ಮನೆಯೆದುರು ಬಿಳಿ ಆನೆಗಳ ಜಾತ್ರೆ.

ಚಿಗುರಿಕೊಂಡಿದೆ ಬಡವನ ಮನೆಯ ಬೆಂಕಿ
ಕಸಿದುಕೊಳ್ಳಿ ಎಷ್ಟಾಗುತ್ತೋ ಅಷ್ಟು
ಬಿಟ್ಟರೇ ಸಿಗುವವರಲ್ಲ ಕಸಿದುಕೊಳ್ಳಿ
ಆ ಪಕ್ಷ ಈ ಪಕ್ಷ ಎಲ್ಲ ಪಕ್ಷಗಳನ್ನೂ ಕಿತ್ತು ತಿನ್ನಿ
ಕಡೆಗೆಲ್ಲ ಸಿಗುವವರಲ್ಲ.

ಮನೆಯೆದುರು ಬಂದು ಕೈ ಮುಗಿದರೆ
ಕಾಲ್ಬಿಳಲು ಹೇಳಿ ಮನೆಯೊಳಗೆ ಹತ್ತು ಓಟಿದೆ ಎನ್ನಿ
ಬಂದವರೆಲ್ಲರಿಗೂ ನಿಮ್ಮ ಮನೆಯ ಮುರಿದ ತಟ್ಟೆಯಲ್ಲಿ
ಆರತಿ ಎತ್ತಿ ಕೊಳಚೆ ನೀರ ಕುಡಿಯಲು ಕೊಡಿ
ನೀವೇನಂದರೂ ಮಾಡುತ್ತಾರೆ.
ಬಿಡಬೇಡಿ ಬಿಳಿಬಟ್ಟೆಗೆ ನಿಮ್ಮ ಕಷ್ಟ ತಾಕಲಿ.

ಆ ಪಕ್ಷ ಈ ಪಕ್ಷ ಎಲ್ಲ ಪಕ್ಷಗಳಿಗೂ ಆಶ್ವಾಸನೆ ಕೊಡಿ
ನೆನಪಿಡಿ ದಯವಿಟ್ಟು ಯಾರಿಗೂ ಮತ ಕೊಡಬೇಡಿ.

Sunday, July 12, 2009

ಹಳೆಯ ಹರಿದು ಮುಕ್ಕಾಗುತ್ತಿದ್ದ ಕಾಗದದಲ್ಲಿದ್ದ ಯಾವತ್ತೋ ಸುಮ್ಮನೆ ಬರೆದ ಸಾಲುಗಳು



ಎಲ್ಲಿಂದಲೋ ಪ್ರಾರಂಭವಾಗುವ ಬದುಕು ಎಲ್ಲೋ ಕೊನೆಗೊಳ್ಳುವವರೆಗೆ ನಿಗೂಢ. ಎಲ್ಲಿ ಪ್ರಾರಂಭ, ಬರೆದರೆ ಅದು ಸತ್ಯ,ಇತಿಹಾಸ. ಎಲ್ಲಿ ಕೊನೆಗೊಳ್ಳುವುದು ಬರೆದರೆ, ಕಲ್ಪನೆ, ಕಾವ್ಯ. ಕಣ್ಣು ಕಂಡದ್ದೆಲ್ಲ ಸತ್ಯ ? ಸಂಶಯ ಆರಂಭವಾಗುತ್ತೆ ಕಣ್ಣು ಕಾಣದೆ ಮನಸು ಕಂಡುಕೊಂಡದ್ದು ? ಅದೂ ಸತ್ಯ.

ಬದುಕು ಪ್ರಾರಂಭವಾಗಿದೆ ಅನ್ನಿಸುತ್ತಲೇ ಇಲ್ಲ. ಅನುಭವಗಳ ಎದೆಗೂಡು ಅನುಭವಗಳೇ ಇಲ್ಲ ಎಂದು ಕೊರಗುತ್ತಿದೆ. ಅನುಭವ? ಪ್ರಶ್ನೆ ಮೂಡುತ್ತೆ, ತಾಯೊಡಲ ಕತ್ತಲಿಂದ ಹೊರಬಂದದ್ದೊಂದು ಅನುಭವ ಬಹಳ ಖುಷಿಯಿತ್ತೇನೋ? ನೆನಪಾಗುತ್ತಿಲ್ಲ. ಮೊದಲ ತೊದಲ ನುಡಿ ನೆನಪಿಲ್ಲ. ಮೊದಲ ನಗು ? ಬೆಚ್ಚನೆ ತಾಯೊಡಲು ?

ಪ್ರೀತಿಯ ಕೈತುತ್ತು ? ನೆನಪಿದ್ದದ್ದು ಮಾತ್ರ ಅನುಭವವೋ ? ನೆನಪಿದ್ದದ್ದು ಮಾತ್ರ ಅನುಭವವೋ ?ನೆನಪುಳಿದದ್ದು ಮಾತ್ರ ಜೀವನವೋ ? ಎಲ್ಲೋ ಕಾಡೊಳಗೆ ಹುಟ್ಟುವ ಮರವೊಂದು ನೆನಪಿಟ್ಟುಕೊಳ್ಳುತ್ತೋ ? ತಾನೊಮ್ಮೆ ಎಲೆಯುದುರಿಸಿದ್ದು, ಇನ್ನೊಮ್ಮೆ ಹೂವಾದದ್ದು, ಮತ್ತೊಮ್ಮೆ ಹಣ್ಣಾದದ್ದು, ಬಿಸಿಲಿಗೆ ನೆರಳಾದದ್ದು. ಬಿಟ್ಟ ಕಣ್ಣು ಬಿಟ್ಟಂತೆ ಬೆಳೆದ ಮರವನ್ನೇ ಕಣ್ಣರಳಿಸಿ ನೋಡಿದ್ದೇನೆ. ಅದು ಯಾವತ್ತೂ ನಕ್ಕಂತೆನಿಸಿಲ್ಲ. ಅದು ಯಾವತ್ತೂ ಅತ್ತಂತೆನಿಸಲಿಲ್ಲ. ಎಲೆ ಉದುರಿಸಿದಾಗಲೂ ಅದೇ ಗಾಂಭಿರ್ಯ ಅದೇ ಶಾಂತ ಮುದ್ರೆ. ಹೂವಾದಾಗಲೂ ಅದೇ ನೋಟ, ಹಣ್ಣಾದಾಗಲೂ ನೆರಳಾದಾಗಲೂ.... ಬೇರು ಕಳಚಿಬಿದ್ದ ಮರ ಅತ್ತಿದ್ದು ನಾ ನೋಡಲಿಲ್ಲ. ಮುದುರಿ ಬೀಳುವ ಹೂವು ಅತ್ತದ್ದು ನಾ ಕಾಣಲಿಲ್ಲ. ಬದುಕು ಬಂದಂತೆ ಸ್ವೀಕರಿಸಿ ಬಣ್ಣ ಕೊಟ್ಟೋ... ಬಣ್ಣ ಕಳೆದುಕೊಂಡೋ ಬರಿದಾಗುವಾಗಲೂ ಬದುಕು....
..................................................

ಬ್ರಮೆ ತುಂಬಿದ ಬದುಕ ಹೂವು ಹೀರುವ ಮುನ್ನ ಬ್ರಮರ ಯೋಚನೆಗೆ ತೊಡಗುವುದೋ ? ತುಟಿಯಂಚಿನಲ್ಲಿ ಹರಿದು ಮಾತಾಗಿ ಹೊರಬರುವ ಮನದ ಭಾವನೆಗಳಿಗೆ, ಬರೀ ಕಂಡಂತಾಗಿ ಕಣ್ಮರೆಯಾಗುವ ಕಾಲ್ಪನಿಕ ಜೀವನ ಇರುತ್ತೆ. ಮಾತಾಗಿ ಹರಿವ ಭಾವನೆಗಳಿಗೆಲ್ಲ ಅಕ್ಷರದ ಅಕ್ಕರೆಯ ಅಂಗಿ ತೊಡಗಿಸಿದಾಗ ನಾವು ಸತ್ತರೂ ಸಾಯದಿರುವ ಒಂದು ಶಾಶ್ವತತೆ, ಜೀವನ ಒದಗಿ ಬರುತ್ತದೆ.
.............................................................
ಎಷ್ಟು ವಿಚಿತ್ರ ಜೀವನ ಎಲ್ಲಿದ್ದೆವೋ ಹೇಗಿದ್ದೆವೋ ಕತ್ತಲ ಭ್ರೂಣ ಸೀಳಿ ಹೊರಬಂದು ಬೆಳಕ ಹುಡುಕಾಡತೊಡಗಿ ಮತ್ತೆ ಕಾಣದಂತಾದಾಗಲೇ ಬೆಳಕು ಎಂಬ ಭಾವನೆ ಮೂಡಿ ಬದುಕು ಕಟ್ಟಿಕೊಳ್ಳುವ ಬೆಳಕು ಕಣ್ಣೊಳಗೆ. ಎಣಿಸಿದಂತೆ ನಡೆದರೆ ಬದುಕು . ಆಡಿದ ಮಾತುಗಳನ್ನೆಲ್ಲ ಮುತ್ತಿನ ಹಾರದಂತಾಗಿಸಿ ಮಾತು ಆಡಿದ್ದು ಮಾತ್ರವಲ್ಲ ಇದೋ ಇಲ್ಲಿದೆ ನೋಡು ಕೄತಿ. ಕಣ್ಣಿಗೊತ್ತಿ ಪೂಜಿಸುವ ಕೆಲಸ, ಮನಸೊಳಗಿಟ್ಟು ಮುದ್ದು ಮಾಡುವ ಕೆಲಸ ಬದುಕಿಗೆ ಬಿಟ್ಟಿದ್ದು; ಬದುಕುವ ಮನಸುಗಳಿಗೆ ಬಿಟ್ಟದ್ದು.
.........................................................
ಭಾವನೆಗಳೇ ಇಲ್ಲದಿರುವ ಮೌನ ನಿಜಕ್ಕೂ ಆಹ್ಲಾದಕರ. ಸುಮ್ಮನೆ ಅರಳಿನಿಂತ ಹೂವಿನಷ್ಟು ಸುಂದರ ಅದು. ಅದರ ಅನುಭೂತಿ ನನಗ್ಯಾಕೆ ಆಗಬಾರದು. ಅದು ಮತ್ತು ಬರಿಸುವಂತಹ ಸ್ಥಿತಿ. ಮನಸ್ಸು ಹಗುರ,ದೇಹ ಹಗುರ. ಸಂತಸದ ಅಂತ್ಯಕ್ಷಣ ಅದು. ಒಂದೇ ಒಂದು ಕ್ಷಣ ನನಗದರ ಅನುಭವ ಆಗಿದ್ದರೂ ಈ ಬದುಕು ಧನ್ಯವಾಗಿತ್ತು.
........................................

Searching Her Steps

Saturday, July 11, 2009

ಬದುಕು

ದಿನ ಹಗಲು ದಿನ ಇರುಳು
ಇವತ್ತು, ನಾಳೆ ಮುಂದ್ಯಾವತ್ತೂ ಇದೇ !
ನೋಡಿ ನೋಡಿ ಬೇಸತ್ತ ಬದುಕು
ಹಗಲಿಲ್ಲದ ಇರುಳಿಲ್ಲದ ಬದುಕ
ನೋಡಲು ಸತ್ತಿದೆ !

Sunday, April 19, 2009

ಅಮ್ಮ ಎಲ್ಲಿದ್ದಾಳೆ ? (ಸಣ್ಣ ಕಥೆ)

ನನಗೆ ಅಮ್ಮನೆಂದರೆ ಹೇಸಿಗೆ. ಥೂ... ಹಾಗೆಲ್ಲ ಹೇಳಬಾರದು. ನನಗೆ ಜನ್ಮ ನೀಡಿದ ಅಮ್ಮನ ಕುರಿತು ಹಾಗೆಲ್ಲ ಹೇಳಬಾರದು ಎಂದೆನಿಸುತ್ತದೆ ನನಗೆ. ಪ್ರಪಂಚವನ್ನು ದಿಟ್ಟಿಸಿ ನೋಡುವುದ ನಾನು ಕಲಿಯುವುದರೊಳಗೆ ನನ್ನ ಬೀದಿಪಾಲು ಮಾಡಿ ಬದುಕಿಗೆ ಹೆದರಿ ಅಥವಾ ನನ್ನ ಬದುಕು ಕಟ್ಟಿಕೊಡಲು ಸಾಧ್ಯವಾಗದೇ ಕೈಚೆಲ್ಲಿ ಎಲ್ಲೋ ಹೋದ ನನ್ನಮ್ಮನ ನೆನೆದರೆ ನನಗೆ ಸಿಟ್ಟು ಉಕ್ಕಿ ಬರುತ್ತದೆ. ಆದರೂ ಅಮ್ಮನನ್ನು ಇಷ್ಟೆಲ್ಲಾ ದ್ವೇಷಿಸುವ ನಾನು ಪದೇಪದೇ ಅವಳನ್ನು ಬಯಸುವುದೇಕೆ? ನನ್ನಮ್ಮ ಮತ್ತೆ ಸಿಗಲಿ ಎಂದೆನಿಸುವುದೇಕೋ? ನನ್ನಮ್ಮ ಇದ್ದಾಳೋ ಇಲ್ಲವೋ ?

ತೆಂಗಿನ ಮಡ್ಲು ಮೇಲೆ ಹೊದ್ದಿಸಿ ಅದಕ್ಕೊಂದು ತಗಡಿನ ಬಾಗಿಲಿರುವ ಸಣ್ಣ ಗುಡಿಸಲು ನನ್ನ ಮನೆ. ಮನೆ ಎದುರು ವಿಶಾಲ ಸಮುದ್ರ. ಸಮುದ್ರ ನೋಡಿದಾಗಲೆಲ್ಲ ನನಗೆ ಎಷ್ಟೋ ಸೂಕ್ಷ್ಮಗಳನ್ನು ಬಚ್ಚಿಟ್ಟುಕೊಂಡು ಯಾವೊಂದು ಪ್ರಶ್ನೆಗೂ ಉತ್ತರ ಕೊಡದೇ ಗಂಭೀರವಾಗಿ ನನ್ನ ಎದೆಗವಚಿ ಮಲಗುತ್ತಿದ್ದ ನನ್ನಮ್ಮ ನೆನಪಾಗುತ್ತಾಳೆ. ವಿಶಾಲ ಸಮುದ್ರದೆದುರಿನ ಪುಟ್ಟ ಗುಡಿಸಲು ಯಾವೊತ್ತು ಸಮುದ್ರದ ಆಗಾಧತೆಯ ಕುರಿತು ಚಿಂತಿಸಲಿಲ್ಲ. ಹೆಚ್ಚು ಸಮಯ ನನಗಿಂತ ನನ್ನಮ್ಮ ಮನೆಯಲ್ಲಿರುತ್ತಿದ್ದಳು, ನಾನೋ ಸಮುದ್ರದೆದುರು ಮರಳುಗೂಡು ಕಟ್ಟುವಾಟದಲ್ಲಿ ಯಾವತ್ತೂ ಮುಳುಗಿರುತ್ತಿದ್ದೆ. ನನ್ನಪ್ಪನ ಪ್ರೀತಿಯ ಆಡ್ಕೋ ಹೋಗ್' ಅನ್ನೋ ಮಾತಿಗೆ ನಾನು ನಿಷ್ಟನಾಗಿರುತ್ತಿದ್ದೆ.

ಅಪ್ಪ ಆಡ್ಕೋ ಹೋಗ್' ಅಂದ ನಂತರ ಮನೆಗೆ ಹೋಗೋದಕ್ಕೆ ಏನೋ ಒಂದು ರೀತಿಯ ಭಯವಾಗುತ್ತಿತ್ತು. ಅದಕ್ಕೆ ಮರಳುಗೂಡು ಕಟ್ಟುವಾಟ. ತೆರೆ ಹಿಂದ್ಹೋದಾಗ ಹಾಂ! ಈಗ ಬಯವಿಲ್ಲ ಎಂಬಂತೆ ಮುಖ ಮಾಡಿ ಕ್ಷಣಾರ್ಧದಲ್ಲಿ ಗೂಡುಕಟ್ಟಿ ತೆರೆ ಬಂದು ಗೂಡು ಎಳೆದ್ಹೋದಾಗ ಮತ್ತೆ ಅಯ್ಯೋ ಎಂಬಂತೆ ನಟಿಸುವುದು ನನ್ನ ದಿನನಿತ್ಯದ ಆಟ.
ನನಗೆ ನೆನಪಿದ್ದ ಹಾಗೆ ಇದು ದಿನನಿತ್ಯದ ಪರಿಪಾಠ ! ಬೆಳಿಗ್ಗೆ ಅದೆಲ್ಲಿಂದಲೋ ಅಪ್ಪ ಪ್ರತ್ಯಕ್ಷನಾಗಿರುತ್ತಿದ್ದ. ಇನ್ನೂ ನಿದ್ದೆಯಲ್ಲಿ ಉರುಳಾಡುತ್ತಿದ್ದ ನನ್ನ ಮುದ್ದಿನಿಂದ ಎಬ್ಬಿಸುತ್ತಿದ್ದ. ಮುಖ ತೊಳೆದ ನಂತರ ನನ್ನ ಊರ ಮುಂದಿನ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದ. ಜುಟ್ಟು ಬಿಟ್ಟ ಭಟ್ಟನೊಬ್ಬ ಪ್ರಸಾದ ನೀಡಿ ಹಣೆಗೆ ದೊಡ್ಡ ಕುಂಕುಮವನ್ನು ತನ್ನ ಕೈಯಾರೆ ಹಚ್ಚುತ್ತಿದ್ದ. ದೇವಸ್ಥಾನದ ಎದುರು ನಿಂತಿರುವ ಆಕಳಿನ ಹತ್ತಿರ ಕರೆದೊಯ್ದು ಇದು ನಮಗೆಲ್ಲಾ ದೇವ್ರು ಕಣೋ, ನಮಸ್ಕಾರ ಮಾಡು ಎನ್ನುತ್ತಿದ್ದಂತೆ ನಾನು ಕೈಯಿಂದ ಮೃದುವಾಗಿ ಮುಟ್ಟಿ ಕೈ ಮುಗಿಯುತ್ತಿದ್ದೆ. ಮನೆಗೆ ಬಂದವನು ಕುಚ್ಚಲಕ್ಕಿಯ ಗಂಜಿ ಕುಡಿಯುತ್ತಲೇ ಅಪ್ಪನ ಆಡ್ಕೋ ಹೋಗ್' ಎಂಬ ಪ್ರೀತಿಯ ಮಾತಿಗೆ ಸಮುದ್ರ ದಂಡೆಗೆ ಓಡುತ್ತಿದ್ದೆ.
ಮಧ್ಯಾಹ್ನ ಮನೆಗೆ ಬಂದ್ರೆ ಅಪ್ಪ ಇಲ್ಲ. ಅಮ್ಮ ಸ್ನಾನಕ್ಕೆ ಹೋಗಿರುತ್ತಿದ್ದಳು. ಸ್ನಾನದಿಂದ ಬಂದವಳೇ ನನ್ನ ಮೊಗ ತೊಳೆದು ದೊಡ್ಡಕ್ಕೆ ದೇವಸ್ಥಾನದ ಪೂಜಾರಿ ಇಟ್ಟ ಕುಂಕುಮವನ್ನು ಒರೆಸಿ ತೆಗೆಯುತ್ತಿದ್ದಳು. ಸ್ನಾನ ಮಾಡಿದ ನಂತರ ರಾತ್ರಿ ಆಗುವವರಗೆ ಅಮ್ಮ ಕುಂಕುಮ ಇಟ್ಟು ಕೊಳ್ಳುತ್ತಿರಲಿಲ್ಲ.

ಮಧ್ಯಾಹ್ನ ಊಟದ ನಂತರ ನಾನು ಗಾಢ ನಿದ್ರೆಗೆ ಜಾರುತ್ತಿದ್ದೆ. ಮನೆ ಎದುರಿನ ಕಟ್ಟೆ ನನ್ನ ನಿದ್ರೆಗೆ ಸೂಕ್ತ ಜಾಗವಾಗಿತ್ತು. ಸಂಜೆ ಎಚ್ಚರಾಗುತ್ತಲೇ ನಾನು ಎದ್ದು ನೋಡಿದ್ರೆ ಮನೆ ಬಾಗಿಲು ಮುಚ್ಚಿರುತ್ತಿತ್ತು. ಬಾಗಿಲು ಬಡಿದರೆ ಎದುರಿಗೆ ಬರುವ ಅಪ್ಪ ನನ್ನ ತಲೆ ನೇವರಿಸಿ ಮುದ್ದು ಮಾಡುತ್ತಿದ್ದ. ಲಘುಬಗೆಯಲ್ಲಿ ಮುಖ ತೊಳೆದ್ರೆ ನನ್ನ ಕರೆದುಕೊಂಡು ಅಪ್ಪ ಹೊರಡುತ್ತಿದ್ದ. ಹೋಗುವಾಗ ದಾರಿಯಲ್ಲಿ ಬಿಳಿ ಟೊಪ್ಪಿಯೊಂದನ್ನ ತೆಗೆದವನು ನನ್ನ ತಲೆಗೇರಿಸುತ್ತಿದ್ದ. ನನಗೆ ಆ ಟೊಪ್ಪಿಯನ್ನು ಹಾಕಿಕೊಳ್ಳುವುದೆಂದರೆ ಭಾರೀ ಖುಷಿ. ಊರ ಮುಂದಿನ ಮಸ್ಜಿದ್ಗೆ ನನ್ನ ಕರೆದೊಯ್ಯುತ್ತಿದ್ದ. ಗುಂಪುಗೂಡಿ ಸಾಲಾಗಿ ನಿಂತವರ ಮಧ್ಯೆ ನಾನು ನಿಲ್ಲುತ್ತಿದ್ದೆ. ಮಂಡಿಯೂರಿ ಕಣ್ಮುಚ್ಚಿ ಹಣೆ ಹಚ್ಚಿ ಎದ್ದರೆ ಬರುವಾಗ ಅಪ್ಪ ಆಲದ ಮರದ ಕೆಳಗಿನ ಆಕಳು ನೋಡಿದವನೇ ನಾಳೆ ನಿನಗೆ ಬಡಾ ಬಿರಿಯಾನಿ ತತರ್ೆನೆ, ಆಯ್ತಾ ಈಗ ಆಡ್ಕೋ ಹೋಗ್'. ಅಪ್ಪನ ಪ್ರೀತಿಯ ಮಾತಿಗೆ ನಿಲ್ಲದೇ ನಾನು ಸಮುದ್ರ ದಂಡೆಗೆ ಓಡುತ್ತಿದ್ದೆ. ಮತ್ತೆ ಮರಳು ಗೂಡು ಕಟ್ಟುವಾಟ.

ನನಗೆ ಇಬ್ಬರೂ ಅಪ್ಪಂದಿರೂ ಪ್ರಿಯರೇ ! ಬೆಳಿಗ್ಗೆ ದೇವಸ್ಥಾನ್ಕಕೆ ಕರೆದೊಯ್ಯುವ ಅಪ್ಪ. ಸಂಜೆ ಮಸ್ಜಿದ್ಗೆ ಕರೆದೊಯ್ಯುವ ಅಪ್ಪ. ಆದ್ರೆ ನನಗೇಕೆ ಒಬ್ಳೆ ಅಮ್ಮ ? ಇಬ್ಬರು ಅಪ್ಪಂದಿರಿದ್ದರೆ ಚೆನ್ನ ಎಂದೆನಿಸುತ್ತಿತ್ತು. ಒಬ್ಬ ಅಪ್ಪ ಮನೇಲಿದ್ದಾಗ ಹೂವು ಮುಡಿದು ಕುಂಕುಮ ಇಟ್ಟುಕೊಳ್ಳುತ್ತಿದ್ದ ಅಮ್ಮ, ಇನ್ನೊಬ್ಬ ಅಪ್ಪನಿದ್ದಾಗ ಕುಂಕುಮ ಇಡುತ್ತಿರಲಿಲ್ಲ. ನನ್ನ ಹಣೆಯ ಕುಂಕುಮವನ್ನೂ ಬಿಡದೇ ಒರೆಸಿ ತೆಗೆಯುತ್ತಿದ್ದಳು. ಅಮ್ಮ ಎರಡೂ ರೀತಿಯಲ್ಲೂ ನನಗೆ ಸುಂದರವಾಗೇ ಕಾಣುತ್ತಿದ್ದಳು.
'ಅಪ್ಪ' ರಾತ್ರಿ ಬರುತ್ತಿದ್ದ ಎಂದು ಅಮ್ಮ ಎಂದೋ ಹೇಳಿದ ನೆನಪು. ಆತ ಬಂದಾಗ ನಾನು ಎಂದೂ ಎಚ್ಚರ ಇರಲಿಲ್ಲ. ಬೆಳಿಗ್ಗೆ ಎದ್ದಾಗ ದೇವಸ್ಥಾನಕ್ಕೆ ಹೋಗೋದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ.
'ಅಪ್ಪ' ಮಧ್ಯಾಹ್ನ ಬರುತ್ತಿದ್ದ ಎಂದು ಅಮ್ಮ ಎಂದೋ ಹೇಳಿದ ನೆನಪು. ಅವನು ಬರುವುದರೊಳಗಾಗಿ ನಾನು ಮಧ್ಯಾಹ್ನ ಊಟ ಮಾಡಿ ನಿದ್ದೆಗೆ ಹೋಗಿರುತ್ತಿದ್ದೆ, ಅಮ್ಮ ತಪ್ಪದೇ ಎದೆಗವಚಿಕೊಂಡು ನಿದ್ದೆ ಮಾಡಿಸುತ್ತಿದ್ದಳು. ಎದ್ದಾಗ ಮನೆ ಎದುರಿನ ಕಟ್ಟೆಯ ಮೇಲಿರುತ್ತಿದ್ದೆ. ಸಾಯಂಕಾಲ ಅಪ್ಪನೊಂದಿಗೆ ಮಸ್ಜಿದ್ಗೆ ಹೋಗೋದನ್ನ ಮಾತ್ರ ತಪ್ಪಿಸುತ್ತಿರಲಿಲ್ಲ.
ಆದರೆ ಒಂದು ವಿಷಯ ನನಗೆ ಅರ್ಥ ಆಗ್ತಾ ಇರಲಿಲ್ಲ. ಇಬ್ಬರು ಅಪ್ಪಂದಿರು ಎಂದೂ ಎದುರು ಬದಿರಾಗಿರಲಿಲ್ಲ. ಅಮ್ಮ ಯಾವತ್ತೂ ಒಬ್ಬ ಅಪ್ಪನ ಕುರಿತು ಇನ್ನೊಬ್ಬ ಅಪ್ಪನೊಂದಿಗೆ ಮಾತನಾಡುತ್ತಿರಲಿಲ್ಲ. ವಿಚಿತ್ರ ಎಂದರೆ ನಾನು ಯಾವತ್ತೂ ಇವರಿಬ್ಬರಲ್ಲಿ ಒಬ್ಬರೊಬ್ಬರ ಬಗ್ಗೆ ಯಾವತ್ತೂ ಪ್ರಶ್ನೆ ಎತ್ತಲಿಲ್ಲ. ಒಂದು ರೀತಿಯ ನಿಗೂಢ ಭಯ ನನ್ನಲ್ಲಿ ತುಂಬಿಕೊಂಡಿತ್ತು.

ಅವತ್ತೊಂದು ದಿನ ಬೆಳಿಗ್ಗೆ ಅಮ್ಮ ಏನೋ ಗಂಭೀರವಾಗಿ ಮಾತನಾಡುತ್ತಿದ್ದಳು. ಯಾಕೆ ಹೊಡೆದಾಡ್ತೀರಾ ? ಧರ್ಮ ನಿಮಗೆ ಅನ್ನ ಕೊಡೊಲ್ಲಾ. ಧರ್ಮ ಮನುಷ್ಯತ್ವ ಇಲ್ಲದ್ದು. ದೇವರು ಬರೀ ಕಲ್ಪನೆ. ನಿಮ್ಮ ಮನಸ್ಸಿನ ಮೇಲೆ ನಂಬಿಕೆ ಇಡ್ರಪ್ಪಾ. ಮನುಷ್ಯರ ಮೇಲೆ ನಂಬಿಕೇನೆ ಕಳೆಯುವಂತದ್ದು ಧರ್ಮ. ಅದನ್ನ ಕಟ್ಟಕೊಂಡು ಯಾಕೆ ಹೆಣಗಾಡ್ತೀರಿ ? ಬಿಟ್ಟ ಬಿಡ್ರಿ, ಸುಮ್ಮನೆ ಮನುಷ್ಯರಂತೆ (?) ಇದ್ದಬಿಡ್ರಿ. ಅಮ್ಮ ಹೇಳಿದ್ದು ನನಗೆ ಯಾಕೆ ನೆನಪಿದೆ ? ಅಮ್ಮನ ಮಾತುಗಳಲ್ಲಿ ಏನೋ ನಿಗೂಡತೆ ನೋವು ನನಗೆ ಕಾಣಿಸುತ್ತಿತ್ತು. ಅಪ್ಪ ಕೇಸರಿ ರುಮಾಲು ಹೆಗಲಿಗೆ ಹಾಕಿಕೊಂಡು ಹಣೆಗೆ ಉದ್ದನೆ ತಿಲಕವಿಟ್ಟಿದ್ದ. ನಾನು ಏಳುವ ಮೊದಲೇ ಅಪ್ಪ ದೇವಸ್ಥಾನಕ್ಕೆ ಹೋಗಿ ಬಂದನೇ? ಅಪ್ಪ ಹೇಳುತ್ತಿದ್ದ, ಅವರನ್ನು ನಿನರ್ಾಮ ಮಾಡಬೇಕು. ನಮ್ಮ ದೇಶದಿಂದಲೇ ಅವರನ್ನು ಓಡಿಸಬೇಕು ಎಂದು ಏನೇನೋ ಹೇಳುತ್ತಿದ್ದ. ಅಮ್ಮ ಅಪ್ಪನ ಮಾತು ಅರಗಿಸಿಕೊಳ್ಳುವುದು ಕಷ್ಟ ಎಂಬಂತೆ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತಿದ್ದಳು.

ನಾನು ಹಾಸಿಗೆಯಲ್ಲಿ ಮಿಸುಕಾಡಿದ್ದ ಕಂಡ ಅಪ್ಪ ನನ್ನ ಎಬ್ಬಿಸಿದವನೇ ಮುಖ ತೊಳೆಸಿ ನಡೆ, ಇವತ್ತು ನೀನು ನಂಜೊತೆ ಇರಲೇಬೇಕು ಎಂದು ಕರೆದೊಯ್ದ. ಅಮ್ಮ ಯಾಕೋ ಮುಖ ಸಣ್ಣಗೆ ಮಾಡಿಕೊಂಡು ನನ್ನ ತಡೆದಳು. ಅಪ್ಪ ಅವಳಿಗೆ ಸನ್ನೆ ಮಾಡಿ ನನ್ನ ಕರೆದೊಯ್ದ. ಪ್ರತಿದಿನದಂತೆ ಆ ದಿನ ಅಪ್ಪ ದೇವಸ್ಥಾನಕ್ಕೆ ನನ್ನ ಕರೆದೊಯ್ಯಲಿಲ್ಲ. ಊರ ಮುಂದಿನ ಮುಖ್ಯ ರಸ್ತೆಗೆ ನನ್ನ ಕರೆದುಕೊಂಡು ಹೊರಟ. ಅದೆಲ್ಲಿಂದಲೋ ಆವತ್ತು ಸಾವಿರಾರು ಜನ ರಸ್ತೆಯ ಎರಡೂ ಬದಿಗಳಲ್ಲಿ ಜಮಾಯಿಸಿದ್ದರು. ಎಲ್ಲೆಲ್ಲೂ ಕೇಸರಿ. ಎಲ್ಲೆಲ್ಲೂ ಬಾವುಟಗಳು. ಎಲ್ಲರೂ ಮೆರವಣಿಗೆ ಹೊರಟಿದ್ದರು. ನನ್ನ ಕೈಯಲ್ಲೂ ಅಪ್ಪ ಒಂದು ಬಾವುಟ ನೀಡಿ ಹಣೆಗೆ ಉದ್ದ ತಿಲಕವಿಟ್ಟ. ನಾನು ಖುಷಿಯಿಂದ ಬಾವುಟ ಹಿಡಿದು ಹೊರಟೆ. ಊರ ಮುಂದಿನ ದೊಡ್ಡ ಮೈದಾನದಲ್ಲಿ ಯಾರೋ ಉದ್ದುದ್ದ ಮಾತನಾಡಿದರು. ನನಗೆ ತುಂಬಾ ಸುಸ್ತಾಗಿತ್ತು.

ಮಧ್ಯಾಹ್ನದ ಊಟದ ಹೊತ್ತಿಗೆ ಮನೆ ಎದುರು ನನ್ನ ಬಿಟ್ಟು ಅಮ್ಮನ ಕರೆದು ಹೇಳಿ ಅಪ್ಪ ಹೊರಟೋದ. ನಾನು ಮನೆಗೆ ಬಂದದ್ದೇ ನನ್ನ ಹಣಗೆ ಬಳಿದ ಕುಂಕುಮವನ್ನೆಲ್ಲಾ ಅಳಿಸಿದ ಅಮ್ಮ, ಕೈಲಿದ್ದ ಬಾವುಟ ಕಸಿದು ಒಲೆಗೆ ಎಸೆದಳು. ನಾನು ಊಟ ಮಾಡಿದವನೇ ಮಲಗಿದೆ. ಸ0ಜೆ ಎಚ್ಚರಾದಾಗ ಸಣ್ಣಗೆ ಜ್ವರವಿತ್ತು. ನಾನು ನರಳುತ್ತಿದ್ದೆ. ಅಪ್ಪ ಇದ್ದಾನೇನೋ ನಾನು ಹುಡುಕಾಡಿದೆ. ಅಪ್ಪ ಕಾಣಲಿಲ್ಲ. ಒಬ್ಬನೇ ಮಸ್ಭಿದ್ಗೆ ಹೋಗಿರಬೇಕು ಎಂದುಕೊಂಡೆ.

ಅಮ್ಮ ಯಾಕೋ ತುಂಬಾ ಖಿನ್ನಳಾಗಿದ್ದಳು. ಕ್ಷಣಕ್ಷಣ ಬಾಗಿಲೆಡೆಗೆ ಇಣುಕಿ ನೋಡಿಕೊ0ಡು ಬರುತ್ತಿದ್ದಳು. ಸುಮಾರು ಹೊತ್ತಿನವರೆಗೆ ನನ್ನೆಡೆಗೆ ಮತ್ತು ಬಾಗಿಲ ಕಡೆಗೆ ನೋಡಿದ ಅಮ್ಮ ಆವರೆಗೆ ಕುಂಕುಮ ಇಟ್ಟುಕೊಳ್ಳದ ಹಣೆಗೆ ಕುಂಕುಮ ಇಟ್ಟುಕೊಂಡು ತಲೆಗೆ ಸುವಾಸನೆಯ ಮಲ್ಲಿಗೆ ಮುಡಿದು ನನ್ನ ಪಕ್ಕದಲ್ಲಿ ಬಂದು ಕುಳಿತಳು.

ನನಗೆ ಜ್ವರ ವಿಪರೀತವಿತ್ತು. ಬಾಗಿಲು ಬಡಿದ ಸದ್ದಾಯಿತು. ಪ್ರತೀ ಸಲ ಬಾಗಿಲು ತೆರೆವಾಗೊಮ್ಮೆ ಯಾರು ? ಎಂದು ಪ್ರಶ್ನಿಸದೆ ಬಾಗಿಲು ತೆರೆಯದ ಅಮ್ಮ ನನ್ನ ನರಳಾಟದಲ್ಲಿ ಎಲ್ಲಾ ಮರೆತು ದಢಕ್ಕನೆದ್ದು ಬಾಗಿಲು ತೆರೆದಳು. ನಾನು ಅರೆ ತೆರೆದ ಕಣ್ಣಲ್ಲಿ ನೋಡುತ್ತಿದ್ದೆ. ಅಪ್ಪ ಬಂದಿರಬಹುದು. ಹೌದು! ಅಪ್ಪ ಬಂದಿದ್ದ. ಆದ್ರೆ ಪ್ರತಿದಿನ ರಾತ್ರಿ ಬರುವ ಅಪ್ಪ ಬರದೇ ಮಸ್ಜ್ಭಿದ್ಗೆ ಕರೆದೊಯ್ಯುವ ಅಪ್ಪ ಬಂದಿದ್ದ. ಅಪ್ಪ ನನ್ನತ್ತ ಬಂದು ತಲೆ ನೇವರಿಸಿ ಮುದ್ದು ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಜ್ವರದ ತಾಪದಿಂದ ನಿದ್ದೆಗೆ ಜಾರಿದ್ದೆ.

ರಾತ್ರಿ ಉಕ್ಕುವ ಸಮುದ್ರದ ಆರ್ಭಟಕ್ಕಿಂತ ಜೋರು ಮಾತಿಗೆ ಎಚ್ಚರವಾಯ್ತು. ಹಲ್ಕಾ ಸೂಳೆ! ನನಗೆ ಮೋಸ ಮಾಡಿದೆ. ನಾನೊಬ್ಬನೇ ಅಂದ್ಕೊಂಡಿದ್ದೆ. ಮತ್ತೆಷ್ಟು ಜನ ಇದ್ದಾರೋ? ನಮ್ಮ ಧರ್ಮದವಳಂತೆ ಸೋಗು ಬೇರೆ ಹಾಕಿದ್ದಿ. ಇವತ್ತು ನಿನ್ನ ಬಣ್ಣ ಬಯಲಾಯ್ತು.

ನಾನು ಅರೆ ತೆರೆದ ಕಣ್ಣುಗಳನ್ನು ತೆರೆಯಲು ಪ್ರಯತ್ನ ಪಟ್ಟೆ. ಅಮ್ಮನ ಜಡೆ ಹಿಡಿದುಕೊಂಡಿದ್ದ ಅಪ್ಪ(?) ಹಣೆಯ ಕುಂಕುಮ ಒರೆಸುತ್ತಿದ್ದ. ಹೂವು ಹರಿದ ರಭಸಕ್ಕೆ ಅದು ನನ್ನ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕೂಗಬೇಕೆಂದುಕೊಂಡೆ. ಸಮುದ್ರದ ಆರ್ಭಟ ಜೋರಾಯ್ತು. ನಾನು ಅಪ್ರಯತ್ನವಾಗಿ ಕಣ್ಣು ಮುಚ್ಚಿದೆ.

ಎಚ್ಚರಾದಾಗ ನಾನು ಗೌಜುಗದ್ದಲ ರಾಶಿರಾಶಿ ಜನರ ಓಡಾಟವಿರುವ ಯಾವುದೋ ಊರಲ್ಲಿದ್ದೆ. ನಾನೆಲ್ಲಿದ್ದೇನೆ? ಅಮ್ಮ ಎಲ್ಲಿ? ಅಪ್ಪ? ಅಳು ಒತ್ತರಿಸಿಕೊಂಡು ಬಂತು. ಜ್ವರದಿಂದ ನಡುಕ. ಅಪರಿಚಿತ ಊರಲ್ಲಿ ನಾನು ಜ್ವರದಿಂದ ನಡುಗುತ್ತ ಅಲೆದಾಡಿದೆ. ಹಸಿವಾದಾಗ ಅಪ್ರಯತ್ನವಾಗಿ ಕೈ ಮುಂದಕ್ಕೆ ಚಾಚಿತ್ತು.

ಆವತ್ತು ಬೀದಿಗೆ ಬಿದ್ದವನು ಇವತ್ತಿನವರೆಗೂ ನಾನು ಪ್ರಪಂಚದ ಮನುಷ್ಯ. ನಾನು ಹೋದಲ್ಲೇ ಮನೆ. ಮಲಗಿದಲ್ಲೇ ನಿದ್ದೆ. ನಾನು ದೇವರನ್ನು ನಂಬುವುದಿಲ್ಲ. ಸಹಾಯ ಕೇಳಿದವರಿಗೆ ಇಲ್ಲಾ ಎನ್ನುವುದಿಲ್ಲ. ಮಗುವಿನ ಮುಗ್ದತನ ನನ್ನಲ್ಲಿ ಇನ್ನೂ ಉಳಿದುಕೊಂಡಿದೆ. ನಾನು ಯಾವ ಧರ್ಮ ಹಾಗೂ ಸಂಬಂಧದಿಂದ ಕಲ್ಷ್ಮಶನಾಗಲಿಲ್ಲ. ನನ್ನೆದೆ ಮಗುತನದ ಮುಗ್ದತೆ ತುಂಬಿರುವ ಗೂಡು. ಮುಸ್ಲಿಂರೆಂದರೂ ಸೈ, ಹಿಂದೂಗಳೆಂದರೂ ಸೈ, ನನ್ನೆದೆ ಮನುಷ್ಯನಾಗಿ ತೆರೆದುಕೊಳ್ಳುತ್ತೆ. ನಾನು ಯಾರೊಂದಿಗೆ ಮಾತನಾಡುವಾಗಲೂ ಭಯ ಬೀಳುವುದಿಲ್ಲ. ಧರ್ಮವೆಂದರೆ ನನಗೆ ರೇಜಿಗೆ. ಹಲ್ಕಾ ಸೂಳೆ! ಆ ಶಬ್ದ ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆ. ನನಗದರ ಅರ್ಥ ಅಂದು ಆಗಿರಲಿಲ್ಲ. ಅಮ್ಮ(?) ಕೆಲವೊಮ್ಮೆ ಕುಂಕುಮವಿಟ್ಟು, ಕೆಲವೊಮ್ಮೆ ಕುಂಕುಮ ಅಳಿಸಿ ಇರುತ್ತಿದ್ದ ರೀತಿ ಬರೀ ಸಿಂಗರಿಸಿಕೊಳ್ಳುವ ವಿಧಾನ ಅಂದ್ಕೊಂಡಿದ್ದೆ.

ಅಪ್ಪ(?)ಆಡ್ಕೋ ಹೋಗ್' ಅನ್ನುತ್ತಿದ್ದುದು ಅವನಿಗೆ ನನ್ನ ಮೇಲಿನ ಪ್ರೀತಿ ಅಂದುಕೊಂಡಿದ್ದೆ. ಅಮ್ಮನಿಲ್ಲದೆ ಬೆಳೆದ ಬುದ್ಧಿಗೆ ಅವೆಲ್ಲದರ ಅರ್ಥ ತಿಳಿಯುತ್ತ ಬಂದಂತೆ ಕೆಲವೊಮ್ಮೆ ನನಗೆ ಅಮ್ಮನೆಂದರೆ ಹೇಸಿಗೆ. ಸಂಬಂಧಗಳೆಂದರೆ ಬರೀ ಮುಚ್ಚಿದ ಬಾಗಿಲೊಳಗಿನ ಆಟ. ವಯಸ್ಸು ಮುಗಿದ ನಂತರ ಅದು ಬರೀ ಹೊರಲಾರದೇ ಹೊತ್ತುಕೊಳ್ಳುವ ಭಾರ. ನನ್ನಮ್ಮ ನನ್ನ ತೊರೆದು ಹೋಗಲು ಕಾರಣವಾದ ಧರ್ಮವೆಂದರೆ ನನಗೆ ರೇಜಿಗೆ.

ನನಗೆ ಅಮ್ಮನೆಂದರೆ ಹೇಸಿಗೆ ! ನನ್ನ ಅಮ್ಮನ ಬಗ್ಗೆ ಪ್ರೀತಿ! ಅಮ್ಮ ಬರೀ ಕಾಮಕ್ಕಾಗಿ ಹಾಗೇ ಮಾಡಿರಲಿಕ್ಕಿಲ್ಲ ಅನ್ನಿಸುತ್ತೆ. ಹಾಗಾದರೆ ನನ್ನಮ್ಮ ನನ್ನ ಬಿಟ್ಟು ಹೋಗಿದ್ದೇಕೆ? ಹೋದದ್ದಾದರೂ ಎಲ್ಲಿಗೆ ? ಬದುಕು ಪ್ರಶ್ನೆಗಳನ್ನು ಹೊತ್ತುಕೊಂಡು ಉತ್ತರವನ್ನೂ ಅದನ್ನು ನೀಡುವ ಅಮ್ಮನನ್ನೂ ಹುಡುಕಿಕೊಂಡು ಅಲೆಯಿತು. ಪ್ರಶ್ನೆ ಕೇಳುವ ಮನಸ್ಸು ತಕರ್ಿಸುವುದನ್ನೂ ಕಲಿತುಕೊಂಡು ಉತ್ತರ ತಂತಾನೆ ಕಂಡುಕೊಂಡಿತು. ಅದೆಲ್ಲಾ ಸತ್ಯಾನಾ? ಉತ್ತರ ಕೊಡೋಕೆ ಅಮ್ಮ ಎಲ್ಲಿದ್ದಾಳೆ?

(ದಟ್ಸ್ ಕನ್ನಡದಲ್ಲಿ ಪ್ರಕಟವಾದದ್ದು)